ಆನಂದ್ ಸಿಂಗ್‍ಗೆ ಅರಣ್ಯ ಖಾತೆ ನೀಡಿದ್ದು ಕಳ್ಳನ ಕೈಗೆ ಕೀ ಕೊಟ್ಟಂತಾಗಿದೆ: ಹೆಚ್.ಎಂ ರೇವಣ್ಣ

Public TV
1 Min Read

ರಾಯಚೂರು: ಸಚಿವ ಆನಂದ್ ಸಿಂಗ್‍ಗೆ ಅರಣ್ಯ ಇಲಾಖೆ ಖಾತೆ ನೀಡಿದ್ದು ಕಳ್ಳನ ಕೈಗೆ ಕೀಲಿ ಕೈ ಕೊಟ್ಟಂತೆ ಆಗಿದೆ ಅಂತ ಮಾಜಿ ಸಚಿವ ಹೆಚ್.ಎಂ ರೇವಣ್ಣ ಹೇಳಿದ್ದಾರೆ.

ರಾಯಚೂರಿನಲ್ಲಿ ಮಾತನಾಡಿದ ಅವರು, ಗಣಿ ವ್ಯವಾಹಾರದಲ್ಲಿ ಸ್ವಲ್ಪ ಅರಣ್ಯ ಅಸ್ತವ್ಯಸ್ತವಾಗುವುದು ಸರಿ ಅಂತ ಹೇಳೋ ಸಚಿವನಿಂದ ಏನನ್ನು ನಿರೀಕ್ಷೆ ಮಾಡಬಹುದು ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಲು ವಿಳಂಬ ಮಾಡಿದ್ದು ನೋಡಿದರೆ ಇಂಥ ಪರಿಸ್ಥಿತಿ ಯಾರಿಗೂ ಬರೋದು ಬೇಡ. ವಿಶ್ವನಾಥ್ ಸ್ಥಿತಿಯಂತೂ ಕೇಳೋದೇ ಬೇಡ ಎಂದಿದ್ದಾರೆ.

ಸಿದ್ದರಾಮಯ್ಯನವರೇ ಪಕ್ಷದ ಅಧ್ಯಕ್ಷರಾಗಬೇಕಾ..? ಬೇಡವಾ..? ಅನ್ನೋದು ಇನ್ನೊಂದು ವಾರದಲ್ಲಿ ನಿರ್ಧಾರವಾಗಲಿದೆ. ನಾಯಕ ಸಮಾಜ ಹಾಗು ಕುರುಬ ಸಮಾಜದಲ್ಲಿ ವಿರುದ್ಧ ದಿಕ್ಕಿನಲ್ಲಿ ಹೋಗುವ ಪರಿಪಾಠ ನಡೆಯುತ್ತಿದೆ. ಎರಡು ಸಮಾಜದ ಗುರುಗಳ ಹಾಗೂ ಮುಖಂಡರ ಸಭೆ ನಡೆಸಿ ಈ ವೈಷಮ್ಯ ಬಗೆಹರಿಸಲಾಗುವುದು ಅಂತ ಹೇಳಿದರು.

ಮಾಜಿ ಪ್ರಧಾನಿ ಸಮಯಕ್ಕೆ ಸರಿಯಾಗಿ ಬಣ್ಣ ಬದಲಾಯಿಸಿಕೊಳ್ಳುವಲ್ಲಿ ನಿಸ್ಸೀಮರು ಅಂತ ಕಿಡಿಕಾರಿದರು. ವಿಧಾನ ಪರಿಷತ್ ಚುನಾವಣೆಯಲ್ಲಿ ಅನಿಲ್ ಕುಮಾರ್ ಸ್ಪರ್ಧೆ ಹಿನ್ನೆಲೆ ದಳದವರು ಚರ್ಚಿಸಿ ಈಗ ಅಭ್ಯರ್ಥಿ ನಿಲ್ಲಿಸಿದ್ದಾರೆ. ನಮ್ಮಲ್ಲಿ ಚರ್ಚೆ ಆಗಿಲ್ಲ. ಎರಡೂ ಪಕ್ಷದವರು ಸೇರಿ ಅಭ್ಯರ್ಥಿ ನಿಲ್ಲಿಸಿಲ್ಲ ಅಂತ ರೇವಣ್ಣ ಹೇಳಿದರು.

ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ ಬಿಜೆಪಿ ಸರ್ಕಾರದಲ್ಲಿ ಸ್ಥಗಿತಗೊಂಡಿದೆ. ಯಡಿಯೂರಪ್ಪ ಪೆನ್‍ನಲ್ಲಿ ಇಂಕೇ ಇಲ್ಲ ಅನಿಸುತ್ತೆ ಅವರು ಏನು ಬರೆಯುತ್ತಿಲ್ಲ. ಸಂಗೊಳ್ಳಿ ರಾಯಣ್ಣ ಪ್ರಾಧಿಕಾರಕ್ಕೆ ಹಣ ನೀಡುತ್ತಿಲ್ಲ ಹೆಚ್.ಎಂ ರೇವಣ್ಣ ಬೇಸರ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *