ರಾಯಚೂರಿನ ನೀರಿನ ಟ್ಯಾಂಕ್ 25 ವರ್ಷಗಳಿಂದ ಸ್ವಚ್ಛತೆಯನ್ನೇ ಕಂಡಿಲ್ಲ!

Public TV
2 Min Read

ರಾಯಚೂರು: ನಗರಸಭೆ ಕಲುಷಿತ ನೀರಿನಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಜೀವಜಲ ವಿಷವಾಗಿರುವುಕ್ಕೆ ಒಂದೊಂದೇ ಹೊಸ ಕಾರಣಗಳು ಬೆಳಕಿಗೆ ಬರುತ್ತಿವೆ. ಶುದ್ಧೀಕರಣ ಘಟಕವಾಯ್ತು, ಚರಂಡಿ ನೀರು ಮಿಕ್ಸ್ ಆಯ್ತು, ಈಗ 25 ವರ್ಷಗಳಾದರೂ ನಗರದ ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸದಿರುವುದರಿಂದ ನೀರು ಮಲಿನವಾಗಿರುವುದು ಬೆಳಕಿಗೆ ಬಂದಿದೆ. ಟ್ಯಾಂಕ್‌ನಲ್ಲಿ ನಾಯಿ, ಕೋತಿಗಳು ಬಿದ್ದು ಸತ್ತರೂ ಸ್ವಚ್ಛಗೊಳಿಸದೆ ನಿರ್ಲಕ್ಷ್ಯ ಮೆರೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ರಾಯಚೂರು ನಗರದ ಜನರ ದೌರ್ಭಾಗ್ಯ ಎನ್ನಬೇಕೋ, ಅಧಿಕಾರಿ ವರ್ಗ ಜನಪ್ರತಿನಿಧಿಗಳ ಬೇಜವಾಬ್ದಾರಿ ಎನ್ನಬೇಕೋ ಗೊತ್ತಿಲ್ಲ. ನಗರಸಭೆ ಸರಬರಾಜು ಮಾಡಿದ ಕಲುಷಿತ ನೀರು ಕುಡಿದು 5 ಸಾವಾದ ಮೇಲೆ ಒಂದೊಂದೇ ಯಡವಟ್ಟು, ಅವ್ಯವಹಾರಗಳು ಬಯಲಿಗೆ ಬರುತ್ತಿವೆ.

ನಗರದಲ್ಲಿನ 35 ಓವರ್ ಹೆಡ್ ವಾಟರ್ ಟ್ಯಾಂಕ್‌ಗಳು, 7 ಗ್ರೌಂಡ್ ಲೆವೆಲ್ ಸ್ಟೋರೇಜ್ ರಿಸವೈಯರ್(ಜಿಎಲ್‌ಎಸ್‌ಆರ್)ಗಳನ್ನು ಇಲ್ಲಿನ ಅಧಿಕಾರಿಗಳು ಕಳೆದ 25 ವರ್ಷಗಳಿಂದ ಒಂದು ಬಾರಿಯೂ ಸ್ವಚ್ಛಗೊಳಿಸಿಲ್ಲ. ಟ್ಯಾಂಕ್‌ಗಳ ನಿರ್ಮಾಣವಾಗಿ ನೀರಿನ ಸಂಗ್ರಹ ಆರಂಭವಾದಾಗಿನಿಂದ ಒಂದು ಬಾರಿಯೂ ಸ್ವಚ್ಛತೆಗೆ ಮುಂದಾಗಿಲ್ಲ. ಇಲ್ಲಿನ ಬಹುತೇಕ ಟ್ಯಾಂಕ್‌ಗಳಿಗೆ ಮೇಲೆ ಏರಲು ಏಣಿಯೂ ಇಲ್ಲ. ಜಿಎಲ್‌ಎಸ್‌ಆರ್‌ಗಳ ಮೇಲೆ ಸ್ಲ್ಯಾಬ್‌ಗಳನ್ನು ಮುಚ್ಚದೇ ತೆರೆದು ಹಾಗೇ ಬಿಟ್ಟಿರುವುದರಿಂದ ಆಗಾಗ ನಾಯಿ, ಕೋತಿಗಳು ಬಿದ್ದು ಸತ್ತಿರುವ ಘಟನೆಗಳು ನಡೆದಿವೆ. ಆದರೂ ಸ್ವಚ್ಛತಾ ಕಾರ್ಯವನ್ನು ಮಾಡಿಲ್ಲ. ಟ್ಯಾಂಕ್ ಸುತ್ತಮುತ್ತಲಿನ ಮನೆಗಳ ನಿವಾಸಿಗಳಂತೂ ಟ್ಯಾಂಕ್ ಸ್ವಚ್ಛತೆ ಎನ್ನುವುದನ್ನೇ ನಾವು ನೋಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಎಲ್ಲ ಶಾಸಕರಿಗೆ 50 ಲಕ್ಷ, ಅಡ್ಡ ಮತಕ್ಕೆ ಕಾರಣವೇನು? – ಹಳೇ ಕಥೆ ಬಿಚ್ಚಿಟ್ಟ ಶ್ರೀನಿವಾಸ್ ಗೌಡ

ಕಲುಷಿತ ನೀರು ಕುಡಿದು ವಾಂತಿ-ಭೇದಿಯಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದರೆ ಇದುವರೆಗೂ ಪರ್ಯಾಯ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ. ನಗರಸಭೆ ಸರಬರಾಜು ಮಾಡುವ ನೀರನ್ನೇ ಜನ ಈಗಲೂ ಕುಡಿಯುತ್ತಿದ್ದಾರೆ. ಕಲುಷಿತ ನೀರಿನಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಎಷ್ಟರ ಮಟ್ಟಿಗೆ ಮುಂದುವರಿದಿದೆ ಎಂದರೆ ಜಲಸಂಗ್ರಹಗಾರಗಳ ಮೇಲೆ ಸ್ಲ್ಯಾಬ್ ಮುಚ್ಚಿಸುವ ಕೆಲಸವನ್ನು ಸ್ವತಃ ಜಿಲ್ಲಾಧಿಕಾರಿ ಮಾಡಬೇಕಾಗಿದೆ. ಇದನ್ನೂ ಓದಿ: ಪ್ರವಾದಿ ಮೊಹಮ್ಮದ್ ಇದ್ದಿದ್ದರೆ…: ಭುಗಿಲೆದ್ದ ಪ್ರತಿಭಟನೆಗೆ ತಸ್ಲೀಮಾ ನಸ್ರೀನ್ ಪ್ರತಿಕ್ರಿಯೆ

ಕನಿಷ್ಠ ನಗರದಲ್ಲಿನ ಖಾಸಗಿ ಆರ್‌ಓ ಪ್ಲಾಂಟ್‌ಗಳ ಮುಖಾಂತರವಾದರೂ ಶುದ್ಧ ಕುಡಿಯುವ ನೀರನ್ನು ಬಾಧಿತ ಪ್ರದೇಶಗಳ ಜನರಿಗೆ ತಲುಪಿಸಬೇಕಿದೆ. ಆದರೆ ಎಲ್ಲವೂ ಸರಿಮಾಡದೆ ಜಲಶುದ್ಧೀಕರಣ ಘಟಕದಲ್ಲಿ ಕೇವಲ ಕ್ಲೋರಿನೇಷನ್ ಮಾಡಿ ಸರಬರಾಜು ಮಾಡಲಾಗುತ್ತಿದೆ. ಚರಂಡಿಯಲ್ಲಿರುವ ಪೈಪ್ ಲೈನ್ ದುರಸ್ತಿ, ಟ್ಯಾಂಕ್ ಸ್ವಚ್ಛತೆ ಮುಗಿಯುವವರೆಗೆ ರಾಯಚೂರು ಜನರಿಗೆ ನೆಮ್ಮದಿ ಸಿಗುವ ಹಾಗೆ ಕಾಣುತ್ತಿಲ್ಲ.

Share This Article
Leave a Comment

Leave a Reply

Your email address will not be published. Required fields are marked *