ಪಡಿತರ ನೀಡಲು ಬಡವರಿಂದ ಹಣ ವಸೂಲಿ- ನ್ಯಾಯ ಬೆಲೆ ಅಂಗಡಿಗಳಿಂದ ಅನ್ಯಾಯ

Public TV
1 Min Read

ರಾಯಚೂರು: ಕೊರೊನಾ ಲಾಕ್‍ಡೌನ್ ಹಿನ್ನೆಲೆ ರಾಜ್ಯಾದ್ಯಂತ ಸರ್ಕಾರ ಬಡವರಿಗೆ ತೊಂದರೆಯಾಗಂತೆ ಪಡಿತರ ವಿತರಿಸಲು ಮುಂದಾಗಿದೆ. ಆದರೆ ಇತ್ತ ರಾಯಚೂರಿನ ನ್ಯಾಯ ಬೆಲೆ ಅಂಗಡಿಗಳು ಮಾತ್ರ ಅನ್ಯಾಯಕ್ಕೆ ಮುಂದಾಗಿವೆ. ಒಂದು ಪಡಿತರ ಕಾರ್ಡಿಗೆ 10 ರಿಂದ 30 ರೂಪಾಯಿ ವಸೂಲಿ ಮಾಡುತ್ತಿವೆ. ತೂಕದಲ್ಲೂ ವ್ಯತ್ಯಾಸ ಮಾಡಿ ಕಡಿಮೆ ಪಡಿತರ ನೀಡುತ್ತಿದ್ದಾರೆ.

ಮಸ್ಕಿ ತಾಲೂಕಿನ ಹಂಚಿನಾಳ ಯು. ಹಾಗೂ ರಾಯಚೂರು ತಾಲೂಕಿನ ಎಲೆಬಿಚ್ಚಾಲಿ ಗ್ರಾಮದ ನ್ಯಾಯ ಬೆಲೆ ಅಂಗಡಿಗಳಲ್ಲಿ ಹಣ ನೀಡದಿದ್ದರೆ ಪಡಿತರ ಕೊಡಲ್ಲ ಅಂತ ಮುಲಾಜಿಲ್ಲದೆ ಹೇಳುತ್ತಿದ್ದಾರೆ. ಅಕ್ಕಿ, ಗೋಧಿ ನೀಡಲು ಹಣ ಕೊಡಲೇ ಬೇಕಿದೆ. ಹಣ ಕೊಡದಿದ್ದರೆ ಪಡಿತರ ನೀಡದೆ ಸತಾಯಿಸುತ್ತಿದ್ದಾರೆ. ಸರ್ಕಾರವೇನೋ ಪಡಿತರ ಕಾರ್ಡ್ ಇಲ್ಲದಿದ್ದರೂ ಪಡಿತರ ಕೊಡಿ ಅಂತ ಹೇಳುತ್ತಿದೆ. ಆದರೆ ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ಕಾರ್ಡ್ ಜೊತೆ ಹಣ ಕೊಟ್ಟರೆ ಮಾತ್ರ ಪಡಿತರ ಸಿಗುತ್ತಿದೆ.

ಬಯೋಮೆಟ್ರಿಕ್ ಬಳಕೆ ಮಾಡಬಾರದು ಅಂತ ಆದೇಶ ಹೊರಡಿಸಿರುವುದರಿಂದ ಕೆಲ ಕೂಲಿಕಾರ್ಮಿಕರು ಮೊಬೈಲ್ ಇಲ್ಲದೆ ಓಟಿಪಿ ಬಾರದೆ ಪಡಿತರ ಕಾರ್ಡ್ ಇದ್ದರೂ ಅಕ್ಕಿ, ಗೋಧಿಯಿಂದ ವಂಚಿತರಾಗುತ್ತಿದ್ದಾರೆ. ಇನ್ನೂ ಮೊಬೈಲ್ ಗೆ ಮೆಸೇಜ್ ಓಟಿಪಿ ಬಂದರೂ ಹಣ ಕೊಡಬೇಕಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನ್ಯಾಯ ಬೆಲೆ ಅಂಗಡಿಯರವ ವಸೂಲಿ ದಂಧೆಗೆ ಬೇಸತ್ತು ಹಣ ತೆಗೆದುಕೊಳ್ಳುವುದನ್ನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಡುತ್ತಿದ್ದಾರೆ. ಇಷ್ಟಾದರೂ ಇದೂವರೆಗೆ ಯಾವೊಂದು ನ್ಯಾಯಬೆಲೆ ಅಂಗಡಿ ಮೇಲೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕ್ರಮ ತೆಗೆದುಕೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *