20 ಜನ ಕೂಲಿಕಾರ್ಮಿಕರಿದ್ದ ವಾಹನಕ್ಕೆ ಲಾರಿ ಡಿಕ್ಕಿ- ಇಬ್ಬರು ಸಾವು, 12 ಜನರ ಸ್ಥಿತಿ ಗಂಭೀರ

Public TV
1 Min Read

ರಾಯಚೂರು: 20 ಜನ ಕೂಲಿಕಾರ್ಮಿಕರಿದ್ದ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ ಘಟನೆ ಲಿಂಗಸುಗೂರಿನ ಗುರಗುಂಟಾ ಬಳಿಯ ಗೋನಾಳ ಕ್ರಾಸ್‍ನಲ್ಲಿ ನಡೆದಿದೆ.

ರಾಯದುರ್ಗ ಗ್ರಾಮದ ಕೂಲಿಕಾರ್ಮಿಕರಾದ ಚನ್ನಮ್ಮ (16) ಹನುಮಮ್ಮ (50) ಮೃತ ದುರ್ದೈವಿಗಳು. ಈ ಘಟನೆ 12 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಲಾರಿ ಹಾಗೂ ಕೂಲಿಕಾರ್ಮಿಕರದ್ದ ಬುಲೆರೋ ಚಾಲಕರು ವೇಗವಾಗಿ ಚಾಲನೆ ಮಾಡಿದ್ದೆ ದುರಂತಕ್ಕೆ ಕಾರಣ ಎನ್ನಲಾಗಿದೆ.

ಯಾದಗಿರಿಯ ಸುರಪುರದಿಂದ ನಿತ್ಯವೂ ಕೃಷಿ ಕೂಲಿಕಾರ್ಮಿಕರು ಕೆಲಸಕ್ಕಾಗಿ ಲಿಂಗಸುಗೂರಿಗೆ ಹೋಗುತ್ತಾರೆ. ಎಂದಿನಂತೆ ಬುಧವಾರವು ಕೂಡ 20 ಜನ ಕೂಲಿಕಾರ್ಮಿಕರು ಕೆಎ 36 ಬಿ 6600 ನಂಬರ್‍ನ ಬುಲೆರೋದಲ್ಲಿ ಕೆಲಸಕ್ಕಾಗಿ ಹೋಗಿದ್ದರು. ಸಂಜೆ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಚಾಲಕ ವೇಗವಾಗಿ ಚಾಲನೆ ಮಾಡುತ್ತಿದ್ದ. ಈ ವೇಳೆ ಸುರಪುದಿಂದ ವೇಗವಾಗಿ ಬಂದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಬುಲೆರೋಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಲೆರೋದ ಹಿಂಭಾಗದಲ್ಲಿ ಕುಳಿತಿದ್ದವರ ಪೈಕಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ.

ಈ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡ 12 ಜನರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಚಿಕ್ಕಪುಟ್ಟ ಗಾಯವಾಗಿರುವ 6 ಜನರಿಗೆ ಲಿಂಗಸುಗೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಲಾರಿ ಹಾಗೂ ಬುಲೆರೋ ಚಾಲಕರಿಬ್ಬರೂ ಘಟನಾ ಸ್ಥಳದಿಂದ ಪರಾರಿಯಾಗಿದ್ದರು. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಪರಿಶೀಲನೆ ನಡೆಸಿ ಚಾಲಕರನ್ನು ಬಂಧಿಸಿದ್ದಾರೆ.

ಗೋನಾಳ ಕ್ರಾಸ್‍ನಲ್ಲಿ ಹಲವು ತಿರುವುಗಳಿದ್ದು, ಯಾವುದೇ ಎಚ್ಚರಿಕೆಯ ಫಲಕಗಳು ಇಲ್ಲದಿರುವುದು ಅಪಘಾತಕ್ಕೆ ಕಾರಣವಾಗಿದೆ. ಈ ಹಿಂದೆಯೂ ಇದೇ ಸ್ಥಳದಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿವೆ. ಘಟನೆಯ ಸಂಬಂಧ ಎರಡೂ ವಾಹನಗಳ ಚಾಲಕರ ವಿರುದ್ಧ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದುರಂತದಲ್ಲಿ ಮೃತಪಟ್ಟ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Share This Article
Leave a Comment

Leave a Reply

Your email address will not be published. Required fields are marked *