ವಿಜೃಂಭಣೆಯಿಂದ ನಡೆದ ಐತಿಹಾಸಿಕ ಬೂದಿಬಸವೇಶ್ವರ ಮಹಾರಥೋತ್ಸವ

Public TV
1 Min Read

ರಾಯಚೂರು: ದೇವದುರ್ಗದ ಗಬ್ಬೂರಿನ ಐತಿಹಾಸಿಕ ಬೂದಿ ಬಸವೇಶ್ವರ ಜಾತ್ರೆಯು ವೈಭವದಿಂದ ನಡೆಯಿತು. ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಜಾತ್ರೆಯ ಅದ್ಧೂರಿತನಕ್ಕೆ ಸಾಕ್ಷಿಯಾದರು.

ಇಲ್ಲಿನ ಬೂದಿಬಸವೇಶ್ವರ ಮಠದ ಸ್ವಾಮೀಜಿ ರಥವನ್ನು ಬಾ ಬಸವ ಎಂದು ಕರೆದಾಗ ತಾನಾಗೇ ರಥ ಮುಂದೆ ಸಾಗುತ್ತದೆ ಎನ್ನುವ ಪ್ರತೀತಿಯಿದ್ದು ಈಗಲೂ ಮುಂದುವರಿದಿದೆ. ಸಂಜೆಯ ವೇಳೆಗೆ ರಥದ ಮೇಲೆ ನಕ್ಷತ್ರ ಕಂಡ ತಕ್ಷಣವೇ ರಥವನ್ನು ಎಳೆಯಲಾಯಿತು. ಲಕ್ಷಾಂತರ ಜನರು ರಥವನ್ನು ಎಳೆದು ಬಾಳೆ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.

ಬೂದಿ ಬಸವೇಶ್ವರ ದೇವರಲ್ಲಿ ಬೇಡಿಕೊಂಡರೆ ಭಕ್ತರ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ನಂಬಿಕೆಯ ಇದೆ. ಹೀಗಾಗೇ ಬೂದಿ ಬಸವೇಶ್ವರರಿಗೆ ಹೈದರಾಬಾದ್ ನಿಜಾಂ 100 ಎಕರೆ ಭೂಮಿಯನ್ನು ಧಾನವಾಗಿ ನೀಡಿದ್ದರು ಎನ್ನುವ ಇತಿಹಾಸವು ಇದೆ. ಜಿಲ್ಲೆ ಮಾತ್ರವಲ್ಲದೆ ಜಾತ್ರೆಗೆ ವಿವಿಧೆಡೆಯಿಂದ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿ ಭಕ್ತರು ಪುನೀತರಾದರು.

ಮಹಾಭಾರತದಲ್ಲಿ ಬಬ್ರುವಾಹನ ಆಸ್ಥಾನವಾಗಿದ್ದ ಮಣಿಪುರವೇ ಈಗಿನ ಗಬ್ಬೂರು ಅನ್ನೋ ಪೌರಾಣಿಕ ಹಿನ್ನೆಲೆ ಹೊಂದಿರುವ ಗಬ್ಬೂರಿನ ಜಾತ್ರೆ ಈ ಭಾಗದ ಅತ್ಯಂತ ವಿಶಿಷ್ಟ ಜಾತ್ರೆಗಳಲ್ಲೊಂದಾಗಿದೆ. ಐತಿಹಾಸಿಕ ದೇವಾಲಯಗಳನ್ನ ಹೊಂದಿರುವ ಗಬ್ಬೂರು ಹಲವಾರು ವೈಶಿಷ್ಟತೆಗಳಿಂದ ಭಕ್ತರನ್ನು ಆಕರ್ಷಿಸುತ್ತಿರುವ ಪುಣ್ಯ ಕ್ಷೇತ್ರವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *