ಪುಲ್ವಾಮಾ ದಾಳಿಗೆ ಬಿಜೆಪಿ ಸರ್ಕಾರವೇ ಕಾರಣ: ರಾಹುಲ್ ಗಾಂಧಿ

Public TV
1 Min Read

ಹಾವೇರಿ: ಬಿಜೆಪಿ ಸರ್ಕಾರವೇ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಗೆ ಕಾರಣ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇರವಾಗಿ ಆರೋಪಿಸಿದ್ದಾರೆ.

ಹಾವೇರಿಯಲ್ಲಿ ನಡೆದ ಕಾಂಗ್ರೆಸ್ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿ ನಡೆದಾಗ 40 ಯೋಧರು ಹುತಾತ್ಮರಾದರು. ಇಂದಿನ ಬಿಜೆಪಿ ಸರ್ಕಾರವೇ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಮಸೂದ್ ಅಜರ್ ನನ್ನು ಭಾರತದಿಂದ ಪಾಕಿಸ್ತಾನಕ್ಕೆ ಕಳುಹಿಸಿತ್ತು. ಇದನ್ನು ಪ್ರಧಾನಿ ಮೋದಿ ಮರೆತಿದ್ದೀರಾ ಎಂದು ಪ್ರಶ್ನೆ ಮಾಡಿ ತರಾಟೆಗೆ ತೆಗೆದುಕೊಂಡರು.

ಅಂದಿನ ಬಿಜೆಪಿ ಸಚಿವರೇ, ನಾಯಕರೇ ಮಸೂದ್ ಅಜರ್ ನೀವೇ ವಿಮಾನ ನಿಲ್ದಾಣದಲ್ಲಿ ಕರೆದುಕೊಂಡು ಹೋಗಿ ಬಿಟ್ಟು ಬಂದಿದ್ದನ್ನು ಎಲ್ಲಿಯೂ ನಿಮ್ಮ ಭಾಷಣದಲ್ಲಿ ಹೇಳಲ್ಲ ಯಾಕೆ? ಮೋದಿ ಅವರೇ ನಿಮ್ಮ ಮುಂದಿನ ಭಾಷಣದಲ್ಲಿ ಮಸೂದ್ ಅಜರ್ ನನ್ನು ಪಾಕಿಸ್ತಾನಕ್ಕೆ ಬಿಟ್ಟು ಬಂದಿದ್ದು ಯಾಕೆ ಎಂಬುದನ್ನು ದೇಶದ ಜನರಿಗೆ ಹೇಳಬೇಕು ಎಂದು ಆಗ್ರಹಿಸಿದರು. ಮೋದಿಯವರೇ ನಾವು ನಿಮ್ಮ ಹಾಗಲ್ಲ. ಭಯೋತ್ಪಾದನೆಯ ವಿರುದ್ಧ ಹೋರಾಡುತ್ತೇವೆ ಎಂದರು.

ಮೋದಿ ಅವರ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರೇ ಉಗ್ರನನ್ನು ಅಫ್ಘಾನಿಸ್ತಾನದ ಕಂದಹಾರಿಗೆ ಕರೆದುಕೊಂಡು ಹೋಗಿ ಬಿಟ್ಟು ಬಂದಿದ್ದಾರೆ. ಬೇಕಾದರೆ ಇಂಟರ್ ನೆಟ್ ನಲ್ಲಿ ದೋವಲ್ ಜೊತೆಗೆ ಮಸೂದ್ ಅಜರ್ ಇರುವ ಫೋಟೋವನ್ನು ನೀವೆಲ್ಲರೂ ನೋಡಬಹದು. ಅಂದಿನ ಬಿಜೆಪಿ ಸರ್ಕಾರ ಮಸೂದ್ ನನ್ನು ಬಿಡುಗಡೆ ಮಾಡದೇ ಇದ್ದಿದ್ರೆ ನಾವು 40 ಸೈನಿಕರನ್ನು ಕಳೆದುಕೊಳ್ಳುತ್ತಿರಲಿಲ್ಲ ಎಂದು ರಾಹುಲ್ ಗಾಂಧಿ ಆಕ್ರೋಶ ಹೊರಹಾಕಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *