ಅಲ್ಲಿ ಆನೆ ತುಳಿದ್ರೆ 15 ಲಕ್ಷ ಕೊಡ್ತೀರಿ, ಇಲ್ಲಿ 5 ಲಕ್ಷ ನೀಡ್ತೀರಿ: ಹೆಚ್‍ಡಿಕೆ ಕೆಂಡಾಮಂಡಲ

Public TV
2 Min Read

ಬೆಂಗಳೂರು: ಕೇರಳದಲ್ಲಿ ಆನೆ ದಾಳಿಗೆ (Elephant Attack in Kerala) ಬಲಿಯಾದ ವ್ಯಕ್ತಿಗೆ ಕರ್ನಾಟಕ ಸರ್ಕಾರದಿಂದ ಪರಿಹಾರ ನೀಡುವ ವಿಚಾರ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸರ್ಕಾರದ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy), ಸಿದ್ದರಾಮಯ್ಯ ಅವರ ಸಲಹೆಗಾರರು ಹೇಳಿದಂತೆ ಮಹಾನುಭಾವರು ಕೇರಳದ ಮೃತ ವ್ಯಕ್ತಿಗೆ 15 ಲಕ್ಷ ರೂಪಾಯಿ ಪರಿಹಾರ ಕೊಟ್ಟಿದ್ದಾರೆ. ಅದೇ ಇಲ್ಲಿ ಏನಾದರೂ ಆನೆ ತುಳಿದು ವ್ಯಕ್ತಿ ಮೃತಪಟ್ಟರೆ ಕೇವಲ 5 ಲಕ್ಷ ಕೊಡ್ತೀರಿ. ಅದಕ್ಕೂ ಕಚೇರಿಗೆ ಅಲೆಯಬೇಕು ಎಂದು ಕಿಡಿಕಾರಿದ್ದಾರೆ.

ವಯನಾಡಿನ ಸಂಸದರು ಹೇಳಿದರು ಅಂತ ಸಿದ್ದರಾಮಯ್ಯನನವರು (Siddaramaiah) ನಮ್ಮ ತೆರಿಗೆ ನಮ್ಮ ಹಕ್ಕಿನ 15 ಲಕ್ಷ ರೂ. ಕೊಟ್ಟಿದ್ದಾರೆ. ನಮ್ಮ ತೆರಿಗೆಯಲ್ಲಿ ತೆಲಂಗಾಣದಲ್ಲಿ ಜಾಹೀರಾತು ಕೊಟ್ಟಿದ್ದರು. ನಮ್ಮ ತೆರಿಗೆ ನಮ್ಮ ಹಕ್ಕು ಅಂತ ದೆಹಲಿಗೆ ಹೋದವರು ಇಲ್ಲಿ ಈ ರೀತಿ ನಮ್ಮ ತೆರಿಗೆ ಹಣ ಖರ್ಚು ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಹೆಚ್‍ಡಿಕೆ ಗರಂ ಆದರು. ಇದನ್ನೂ ಓದಿ: ಕೇರಳದಲ್ಲಿ ಆನೆ ತುಳಿತಕ್ಕೆ ವ್ಯಕ್ತಿ ಬಲಿ; ಕರ್ನಾಟಕ ಸರ್ಕಾರದಿಂದ ಪರಿಹಾರ – ಈಶ್ವರ್‌ ಖಂಡ್ರೆ ಹೇಳಿದ್ದೇನು?

ನಾನೆಲ್ಲೂ ಸರ್ಕಾರ ಗ್ಯಾರಂಟಿಯಿಂದ ದಿವಾಳಿ ಅಂತ ಹೇಳಿಲ್ಲ. ನಮ್ಮ ರೈತರಿಗೆ 2 ಸಾವಿರ ರೂ. ಕೊಡ್ತಾರೆ, ಅವರಿಗೆ 15 ಲಕ್ಷ ರೂ. ಕೊಡ್ತಾರೆ. ಈ ನಡುವೆ ಕೇಂದ್ರದಿಂದ ಪರಿಹಾರವೇ ಬಂದಿಲ್ಲ ಅಂತ ಹೇಳ್ತಾರೆ. ಕನ್ನಡಿಗರಿಗೆ ಅನ್ಯಾಯ ಆಗಿದೆ ಅಂತಾರೆ. ಸಾವಿರ ಸಾರಿ ಸುಳ್ಳು ಹೇಳಿ ನಿಜ ಮಾಡುವ ರೀತಿ ಮಾಡಲು ಹೊರಟಿದ್ದಾರೆ. ರಾಷ್ಟ್ರದ ಹಲವು ಆರ್ಥಿಕ ತಜ್ಞರ ಜೊತೆ ಬಹಿರಂಗ ಚರ್ಚೆ ಮಾಡೋಣ. ಕೇಂದ್ರದಿಂದ ಅನ್ಯಾಯ ಆಗ್ತಿದೆ ಅಂತಾ ಹೇಳಿದ್ದೀರಿ. ಅನ್ಯಾಯ ಆಗಿದೆ ಅಂತ ಒಬ್ಬರು ಹೇಳಿದ್ರೆ ಅವರು ಹೇಳಿದ ಹಾಗೆ ಕೇಳೋಕೆ ಸಿದ್ಧ ಎಂದು ಸವಾಲೆಸೆದರು.

ವೀರಾವೇಷದಿಂದ ಒಳಗೆ ಭಾಷಣ ಮಾಡ್ತಿರಬಹುದು, ಕನ್ನಡಿಗರಿಗೆ ಅನ್ಯಾಯ ಆಯ್ತು ಅಂತಾರೆ. ನಿಮ್ಮ ಸದಸ್ಯರು ಯಾಕೆ ಬೆಂಬಲ ಕೊಡಲಿಲ್ಲ. ತಮಟೆ ಹೊಡೆದು ಪ್ರತಿಭಟನೆ ಮಾಡಿದ್ರಲ್ಲವಾ?. ಕೇಂದ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿದ್ದಾರಲ್ಲ. ಇಲ್ಲಿ ಅನ್ಯಾಯ ಆಗಿದ್ರೆ ಅವರು ಬಾಯಿ ತೆಗೆಯಬೇಕಿತ್ತಲ್ಲವಾ ಎಂದು ಪ್ರಶ್ನಿಸಿದರು.

Share This Article