ಕೊಟ್ಟ ಗ್ಯಾರಂಟಿಗಳನ್ನು ಪೂರೈಸುತ್ತೇವೆ – ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ರಾಗಾ ಭರವಸೆ

Public TV
2 Min Read

– ಸಂವಿಧಾನ ಉಳಿಸುವುದೇ ನಮ್ಮ ಹೋರಾಟದ ಮೊದಲ ಹೆಜ್ಜೆ
– ಇದು ಮೋದಿಯ ನೈತಿಕ ಸೋಲು ಎಂದ ಸಂಸದ

ನವದೆಹಲಿ: ಸಂವಿಧಾನ (Constitution) ಉಳಿಸುವುದೇ ನಮ್ಮ ಹೋರಾಟದ ಮೊದಲ ಹೆಜ್ಜೆಯಾಗಿರಲಿದೆ. ಇದರೊಂದಿಗೆ ನಾವು ಕೊಟ್ಟ ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಎಂದು ಹೇಳುವ ಮೂಲಕ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಕೇಂದ್ರದಲ್ಲಿ ಸರ್ಕಾರ ರಚನೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2024ರ ಲೋಕಸಭಾ ಚುನಾವಣಾ ಫಲಿತಾಂಶ (Lok Sabha Elections Result) ಹೊರಬೀಳುತ್ತಿದ್ದಂತೆಯೇ, ದೆಹಲಿಯ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಹುಲ್‌ ಗಾಂಧಿ, ಕೇಂದ್ರದಲ್ಲಿ 25 ಗ್ಯಾರಂಟಿಗಳನ್ನು ನೀಡಿದ್ದೇವೆ. ಅವುಗಳನ್ನು ಈಡೇರಿಸುತ್ತೇವೆ. ಮಹಿಳೆಯರಿಗೆ 1 ಲಕ್ಷ ರೂ. ಕೊಡುವ ಭರವಸೆಯನ್ನೂ ಪೂರ್ಣಗೊಳಿಸುತ್ತೇವೆ ಎಂದರಲ್ಲದೇ ಸಂವಿಧಾನ ಉಳಿಸುವುದು ನಮ್ಮ ಹೋರಾಟದ ಮೊದಲ ಹೆಜ್ಜೆಯಾಗಿರಲಿದೆ. ಇದಕ್ಕೆ ಸಹಕರಿಸಿದ ಮೈತ್ರಿ ಕೂಟಕ್ಕೂ ನಾನು ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.

ಇದು ಮೋದಿಯ ನೈತಿಕ ಸೋಲು:
ಮುಂದುವರಿದು ವಾಗ್ದಾಳಿ ನಡೆಸಿದ ರಾಗಾ, ಬಿಜೆಪಿಗೆ ಪೂರ್ಣ ಬಹುಮತ ಸಿಕ್ಕಿಲ್ಲ. ಇದು ಪ್ರಧಾನಿ ಮೋದಿ ಅವರು ನೈತಿಕ ಸೋಲು ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ರಾಹುಲ್‌ ಗಾಂಧಿಗೆ ಡಬಲ್‌ ಧಮಾಕ – ಕಾಂಗ್ರೆಸ್‌ ಭದ್ರಕೋಟೆಯಾಗಿಯೇ ಉಳಿದ ರಾಯ್‌ ಬರೇಲಿ

ಚುನಾವಣೆಯಲ್ಲಿ ನಾವು ಬಿಜೆಪಿ ವಿರುದ್ಧ ಮಾತ್ರ ಹೋರಾಡಿಲ್ಲ. ದೇಶದ ಆಡಳಿತ ರಚನೆ, ಗುಪ್ತಚರ ಸಂಸ್ಥೆಗಳಾದ ಸಿಬಿಐ ಮತ್ತು ಇಡಿಐ, ನ್ಯಾಯಾಂಗಗಳ ವಿರುದ್ಧ ಹೋರಾಡಿದ್ದೇವೆ. ಏಕೆಂದರೆ ಈ ಎಲ್ಲಾ ಸಂಸ್ಥೆಗಳನ್ನು ಮೋದಿ, ಅಮಿತ್‌ ಶಾ ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದರು. ಇಂದಿನ ಚುನಾವಣಾ ಫಲಿತಾಂಶ ಹಲವು ಸಂಸ್ಥೆಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದ ಬಿಜೆಪಿ ವಿರುದ್ಧ ವಿಪಕ್ಷಗಳ ಹೋರಾಟದ ಮೊದಲ ಹೆಜ್ಜೆಯೂ ಆಗಿದೆ ಎಂದು ಎಚ್ಚರಿಸಿದ್ದಾರೆ.

ಇದೇ ವೇಳೆ ಉತ್ತರ ಪ್ರದೇಶದಲ್ಲಿ ಇಂಡಿಯಾ ಒಕ್ಕೂಟಕ್ಕೆ ಮತ ನೀಡಿದಿ ಮತದಾರ ಪ್ರಭುಗಳಿಗೆ ಅಭಿನಂದನೆ ಸಲ್ಲಿಸಿದ ರಾಗಾ, ರಾಯ್‌ ಬರೇಲಿ ಮತ್ತು ವಯನಾಡಿನ ನಾಯಕರೊಂದಿಗೆ ಚರ್ಚಿಸಿ ಯಾವ ಕ್ಷೇತ್ರವನ್ನು ಬಿಟ್ಟುಕೊಡಬೇಕು ಎಂದು ನಿರ್ಧರಿಸುವೆ ಎಂದಿದ್ದಾರೆ. ಇದನ್ನೂ ಓದಿ: ಇದು ಮೋದಿ ವಿರುದ್ಧದ ಸ್ಪಷ್ಟ ಜನಾದೇಶ: ಫಲಿತಾಂಶದ ಬಗ್ಗೆ ಖರ್ಗೆ ಮಾತು

3 ಲಕ್ಷಕ್ಕೂ ಅಧಿಕ ಮತಗಳ ಅಂತರದ ಜಯ:
ಉತ್ತರ ಪ್ರದೇಶದ ಪ್ರತಿಷ್ಠೆಯ ಕಣವಾಗಿದ್ದ ರಾಯ್‌ ಬರೇಲಿ (Raebareli) ಕ್ಷೇತ್ರದಲ್ಲಿ ರಾಹುಲ್‌ ಗಾಂಧಿ (Rahul Gandhi) ಗೆಲುವು ಸಾಧಿಸಿದ್ದು, ಪ್ರಸ್ತುತ ಕ್ಷೇತ್ರವನ್ನ ಕಾಂಗ್ರೆಸ್‌ ಭದ್ರಕೋಟೆಯಾಗಿಯೇ ಉಳಿಸಿಕೊಂಡಿದ್ದಾರೆ. ಇದರೊಂದಿಗೆ ಕೇರಳದ ವಯನಾಡಿನಲ್ಲೂ ಭರ್ಜರಿ ಗೆಲುವು ಸಾಧಿಸಿದ್ದಾರೆ. 2024ರ ಲೋಕಸಭಾ ಚುನಾವಣೆಯ ಫಲಿತಾಂಶ ಮಂಗಳವಾರ ಹೊರಬಿದ್ದಿದ್ದು, ರಾಹುಲ್‌ ಗಾಂಧಿ ತಾವು ಸ್ಪರ್ಧಿಸಿದ ಎರಡೂ ಕ್ಷೇತ್ರಗಳಲ್ಲಿಯೂ ಗೆಲುವು ಸಾಧಿಸಿದ್ದಾರೆ. ಉತ್ತರ ಪ್ರದೇಶದ (Uttar Pradesh) ರಾಯ್‌ಬರೇಲಿ ಕ್ಷೇತ್ರದಲ್ಲಿ 6,87,649 ಮತಗಳನ್ನು ಪಡೆಯುವ ಮೂಲಕ 3,90,030 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ದಿನೇಶ್‌ ಪ್ರತಾಪ್‌ ಸಿಂಗ್‌ 2,97,619 ಮತಗಳನ್ನು ಪದು ಸೋಲೊಪ್ಪಿಕೊಂಡಿದ್ದಾರೆ.

Share This Article