ಈ ದೇಶದಲ್ಲಿ ಧೈರ್ಯವಾಗಿ ಮಾತನಾಡುವ ಮನುಷ್ಯ ರಾಹುಲ್ ಗಾಂಧಿ ಮಾತ್ರ – ಮಲ್ಲಿಕಾರ್ಜುನ ಖರ್ಗೆ

Public TV
2 Min Read

– ನನಗೆ ಸಿಎಂ ಸ್ಥಾನ ಬೇಡ ಎಂದ ಎಐಸಿಸಿ ಅಧ್ಯಕ್ಷ

ಕೋಲಾರ: ಈ ದೇಶದಲ್ಲಿ ಧೈರ್ಯವಾಗಿ ಮಾತನಾಡುವ ಮನುಷ್ಯ ರಾಹುಲ್ ಗಾಂಧಿ (Rahul Gandhi) ಮಾತ್ರ, ಅನ್ಯಾಯವನ್ನ ಅನ್ಯಾಯ ಅಂತಾ ಹೇಳಿದ್ದು ಅವರೇ. ನಾವೆಲ್ಲರೂ ಒಗ್ಗಟ್ಟಾಗಿ ರಾಹುಲ್ ಗಾಂಧಿ ಜೊತೆಗಿರಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೇಳಿದ್ದಾರೆ.

ಕೋಲಾರದಲ್ಲಿ (Kolar) ನಡೆದ ಜೈ ಭಾರತ್ (Jai Bharath) ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವೆಲ್ಲರೂ ಒಗ್ಗಟ್ಟಾಗಿ ರಾಹುಲ್ ಗಾಂಧಿ ಜೊತೆ ಇರಬೇಕು. ಸತ್ಯ ಉಳಿಯಬೇಕಾದ್ರೆ ಕರ್ನಾಟಕದಲ್ಲಿ ಕಾಂಗ್ರೆಸ್ (Congress) ಉಳಿಯಬೇಕು. ರಾಜ್ಯದಲ್ಲಿ ಯಾರಾದರೂ ಸಿಎಂ ಆಗಿ, ಆದ್ರೆ ನನಗೆ ಕಾಂಗ್ರೆಸ್ ಸರ್ಕಾರ ಬರಬೇಕು ಅಷ್ಟೇ. ನನಗೆ ಸಿಎಂ ಸ್ಥಾನ ಬೇಡ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯ ಸರ್ಕಾರ ಜನರ ಹಣ ಕದ್ದಿದೆ: ರಾಗಾ ಆರೋಪ

ಈ ಬಾರಿ ಕಾಂಗ್ರೆಸ್‌ 150-160 ಸೀಟು ಗೆಲ್ಲಲೇಬೇಕು. ಈ ಭ್ರಷ್ಟ ಸರ್ಕಾರವನ್ನ ಕಿತ್ತೊಗೆಯಬೇಕು. ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದ್ದಂತೆ ಶಾಸಕರು, ಹೈಕಮಾಂಡ್‌ ಹೇಳಿದವರು ಸಿಎಂ ಆಗ್ತಾರೆ. ಅದರ ಚಿಂತೆ ಬಿಡಿ, ನೀವು ಜನರ ಬಗ್ಗೆ ತಲೆಕೆಡಿಸಿಕೊಳ್ಳಿ ಎಂದು ನಾಯಕರಿಗೆ ವೇದಿಕೆಯಲ್ಲಿ ಒಗ್ಗಟ್ಟಿನ ಮಂತ್ರದ ಉಪದೇಶ ಮಾಡಿದ್ದಾರೆ. ಇದನ್ನೂ ಓದಿ: ಪಕ್ಷಕ್ಕೆ ದ್ರೋಹ ಮಾಡಿದ ಶೆಟ್ಟರ್‌ನ್ನು ಯಾರು ಕ್ಷಮಿಸಲ್ಲ : ಬಿಎಸ್‍ವೈ ವಾಗ್ದಾಳಿ

ಮೋದಿ ಸರ್ಕಾರದ ಆಡಳಿತದಿಂದ ಜನ ಬೇಸತ್ತಿದ್ದಾರೆ. 40 ಪರ್ಸೆಂಟ್‌ ಕಮಿಷನ್‌ ಸರ್ಕಾರದಿಂದ ಜನ ರೊಚ್ಚಿಗೆದ್ದಿದ್ದಾರೆ. ಕಮಿಷನ್‌ ಸರ್ಕಾರವನ್ನೂ ಸಹಿಸಿಕೊಳ್ಳುವ ಮೋದಿ, ಅಮಿತ್‌ ಶಾ ಹೋದಕಡೆಯೆಲ್ಲಾ ಕಾಂಗ್ರೆಸ್‌ನ ಬೈಕೊಂಡು ತಿರುಗುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.

ಸಂಸತ್ ನಲ್ಲಿ ನಾನು ಮಾತಾಡಿದ್ರೆ ಬಿಜೆಪಿ ಅವರು ಗಲಾಟೆ ಮಾಡಿದ್ರು. ಮೋದಿ ಸುಮ್ಮನಿರಿ ಅಂತಾ ಒಂದು ಮಾತು ಹೇಳಲಿಲ್ಲ. ಮೋದಿ ಅವರೇ ಗಲಾಟೆ ಮಾಡಿಸಿದ್ರು. ಉದ್ಯಮಿ ಗೌತಮ್‌ ಅದಾನಿ ಆಸ್ತಿ 2014 ರಿಂದ 2023ರ ವರೆಗೆ ದಿಢೀರ್ ಅಂತ 12 ಲಕ್ಷ ಕೋಟಿಗೆ ಏರಿಕೆ ಆಗಿದ್ದು ಹೇಗೆ? ಎಂದು ನಾವು ಪ್ರಶ್ನಿಸಿದ್ದೆವು. ಈ ಪ್ರಶ್ನೆ ಕೇಳಿದ್ದಕ್ಕೆ, ಉತ್ತರ ಕೊಡದೇ, ರಾಹುಲ್ ಗಾಂಧಿ ಮೇಲೆ ಕೇಸ್‌ ಹಾಕಿದ್ರು. ಕೋಲಾರದಲ್ಲಿ ಮಾತಾಡಿದ್ದಕ್ಕೆ ಗುಜರಾತ್ ನಲ್ಲಿ ಕೇಸ್ ಹಾಕಿದ್ರು. 22 ದಿನಗಳಲ್ಲಿ ಶಿಕ್ಷೆ ಆಯ್ತು, ಅದಾದ 24 ಗಂಟೆಯಲ್ಲಿ ಸದಸ್ಯತ್ವ ರದ್ದು ಮಾಡಿದ್ರು, ಮುಂದಿನ 24 ಗಂಟೆಯಲ್ಲೇ ಸಂಸದರಿಗೆ ನೀಡಿದ್ದ ಮನೆ ಖಾಲಿ ಮಾಡಿ ಅಂದ್ರು. ಇದು ನಮ್ಮ ಪ್ರಜಾಪ್ರಭುತ್ವದ ವ್ಯವಸ್ಥೆ. ನಾವು ಇದನ್ನ ಉಳಿಸಬೇಕಾಗಿದೆ ಎಂದು ಕರೆ ನೀಡಿದ್ದಾರೆ.

Share This Article