ದ್ವೇಷದ ವಿಷವನ್ನು ಬಿತ್ತಿರುವಾಗ ಅಮೃತ ಮಹೋತ್ಸವಕ್ಕೆ ಅರ್ಥವಿದೆಯೇ?: ರಾಹುಲ್

Public TV
1 Min Read

ನವದೆಹಲಿ: ಸ್ವಾತಂತ್ರ್ಯವೆಂಬುದು ಎಲ್ಲರಿಗೂ ಸಿಗದಿದ್ದಾಗ ಅದು ಎಂತಹ ಸ್ವಾತಂತ್ರ್ಯ? ದೇಶದಲ್ಲಿ ದ್ವೇಷದ ವಿಷವನ್ನು ಬಿತ್ತುತ್ತಿರುವಾಗ ಅಮೃತ ಮಹೋತ್ಸವ ಎಂಬುದಕ್ಕೆ ಅರ್ಥವಿದೆಯೇ? ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ( rahul gandhi) ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.

ಅಸ್ಸಾಂನ ದರಂಗ್ ಜಿಲ್ಲೆಯಲ್ಲಿ ಸರ್ಕಾರಿ ಜಮೀನು ಒತ್ತುವರಿ ಸಂದರ್ಭ ಪೊಲೀಸರು ಮತ್ತು ಭೂಮಿ ಕಬಳಿಸಿದ್ದಾರೆ ಎನ್ನಲಾಗಿರುವ ಆರೋಪಿಗಳ ನಡುವಿನ ಸಂಘರ್ಷದಿಂದ ಉದ್ಭವಿಸಿದ ಹಿಂಸಾಚಾರವನ್ನು ಗುರಿಯಾಗಿಸಿಕೊಂಡು ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ.

ಗುರುವಾರ ನಡೆದ ಹಿಂಸಾಚಾರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಎದೆಗೆ ಗುಂಡೇಟು ತಗುಲಿ ಬಿದ್ದಿದ್ದ ವ್ಯಕ್ತಿಯ ಮೇಲೆ ಛಾಯಾಗ್ರಾಹಕನೊಬ್ಬ ಹಾರಿ, ನೆಗೆದು ಹಲ್ಲೆ ನಡೆಸುತ್ತಿರುವ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ಸತ್ತು ಬಿದ್ದಿರುವ ವ್ಯಕ್ತಿಯ ಮೇಲೆ ನಡೆಸಿದ ದೌರ್ಜನ್ಯ ದ್ವೇಷದ ಪರಮಾವಧಿ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಆತನನ್ನು ಬಂಧಿಸಿ, ನ್ಯಾಯಾಂಗದ ವಶಕ್ಕೆ ನೀಡಲಾಯಿತು ಇದನ್ನೂ ಓದಿ:  ತಾಲಿಬಾನಿ ಬಿಜೆಪಿ ಸರ್ಕಾರದಿಂದ ದೇಶವನ್ನು ಮುನ್ನಡೆಸಲು ಸಾಧ್ಯವಿಲ್ಲ: ಮಮತಾ ಬ್ಯಾನರ್ಜಿ

ಅಸ್ಸಾಂನಲ್ಲಿ ನಡೆಯುತ್ತಿರುವ ಸರ್ಕಾರಿ ಭೂ-ಒತ್ತುವರಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಅಸ್ಸಾಂನ ರಾಜ್ಯಪಾಲ ಜಗದೀಶ್ ಮುಖಿ ಅವರನ್ನು ಕಾಂಗ್ರೆಸ್ ನಾಯಕರು ಭೇಟಿ ಮಾಡಿದ್ದಾರೆ. ವಿವಿಧ ಸಂಘಟನೆಗಳು ದರಂಗ್ ಜಿಲ್ಲೆಯಲ್ಲಿ ಶುಕ್ರವಾರ 12 ಗಂಟೆಗಳ ಬಂದ್‍ಗೆ ಕರೆ ನೀಡಿದ್ದವು. ಇದನ್ನೂ ಓದಿ:  ಸೂರತ್‍ನಲ್ಲಿ ಸಿಗುತ್ತೆ ವಿಶಿಷ್ಟವಾದ ಮಡಿಕೆ ಪಿಜ್ಜಾ – ವೀಡಿಯೋ ವೈರಲ್

ವ್ಯಾಪಕ ಟೀಕೆ, ಪ್ರತಿಪಕ್ಷಗಳ ವಿರೋಧ, ಸ್ಥಳೀಯರ ಆಕ್ರಂದನಗಳ ಮಧ್ಯೆಯೇ ಭೂ-ಒತ್ತುವರಿ ಕಾರ್ಯಚರಣೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಸ್ಪಷ್ಟಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *