ಕೋಲಾರ ಬೇಡ, ವರುಣಾದಿಂದ್ಲೇ ಸ್ಪರ್ಧಿಸಿ- ಸಿದ್ದರಾಮಯ್ಯಗೆ ಖರ್ಗೆ, ರಾಹುಲ್ ಗಾಂಧಿ ಸಲಹೆ

Public TV
2 Min Read

ನವದೆಹಲಿ: ಕೋಲಾರ (Kolar) ದಿಂದಲೇ ಈ ಬಾರಿ ಸ್ಪರ್ಧೆ ಮಾಡುವುದಾಗಿ ಬಹಿರಂಗ ಘೋಷಣೆ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಯೂಟರ್ನ್ ಹೊಡೆದಿದ್ದಾರೆ ಎನ್ನಲಾಗುತ್ತಿದೆ. ಕೋಲಾರದ ಬದಲು ವರುಣಾದಲ್ಲಿ ಕಣಕ್ಕಿಳಿಯಲು ಚಿಂತಿಸುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮತ್ತು ರಾಹುಲ್ ಗಾಂಧಿ (Rahul Gandhi) ಸಲಹೆ ಬಳಿಕ ತಮ್ಮ ನಿರ್ಧಾರ ಬದಲಿಸಿರುವ ಸಿದ್ದರಾಮಯ್ಯ ವರುಣಾ (Varuna Constituency) ಕಡೆಗೆ ಮುಖ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಶುಕ್ರವಾರ ನಡೆದ ಸಿಇಸಿ ಸಭೆಯಲ್ಲಿ ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡುವ ಬಗ್ಗೆ ಚರ್ಚೆಯಾಗಿದೆ. ಈ ವೇಳೆ ಕೋಲಾರ ಬಿಟ್ಟು ವರುಣಾದಲ್ಲಿ ಸ್ಪರ್ಧೆ ಮಾಡಲು ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ.

ಕಾರಣವೇನು..?: ಕೋಲಾರದಲ್ಲಿ ನಡೆಸಿದ ಸರ್ವೆ ವರದಿಗಳು ನಿಮಗೆ ಪೂರಕವಾಗಿಲ್ಲ. ಸುಲಭವಾಗಿ ಗೆಲುವು ದಕ್ಕುವಂತದಲ್ಲ, ಕಠಿಣ ಶ್ರಮದ ಅಗತ್ಯವಿದೆ. ಕಾಂಗ್ರೆಸ್ ನಾಯಕರ ಒಳ ಜಗಳ ನಿಮ್ಮಗೆ ಸಮಸ್ಯೆಯಾಗಬಹುದು. ಬಿಜೆಪಿ ಜೆಡಿಎಸ್ ನಿಮ್ಮನ್ನು ಕಟ್ಟಿ ಹಾಕಲು ಪ್ರಯತ್ನ ಮಾಡಬಹುದು. ನೀವೂ ಬೇರೆ ಕ್ಷೇತ್ರಗಳಲ್ಲೂ ಪ್ರವಾಸ ಮಾಡಬೇಕಿರುವ ಹಿನ್ನಲೆ ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ನಿಮ್ಮ ಪುತ್ರ ಯತೀಂದ್ರ ಅವರಿಗೆ ಮುಂಬರುವ ದಿನಗಳಲ್ಲಿ ಸೂಕ್ತ ಅವಕಾಶ ನೀಡೋಣ. ಮೊದಲು ನಿಮ್ಮ ಗೆಲವಿನ ಬಗ್ಗೆ ಯೋಚಿಸಿ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಹೈಕಮಾಂಡ್ ಮಾತಿಗೆ ತಲೆ ಬಾಗಿದ್ರಾ ಸಿದ್ದು?: ಮಲ್ಲಿಕಾರ್ಜುನ ಖರ್ಗೆ ಇಂತದೊಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಂತೆ ರಾಹುಲ್ ಗಾಂಧಿ ಕೂಡಾ ಇದನ್ನು ಬೆಂಬಲಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ನನಗೆ ಮೊದಲೇ ಈ ಬಗ್ಗೆ ಮಾಹಿತಿ ಇತ್ತು. ವರುಣಾದಲ್ಲಿ ಸ್ಪರ್ಧೆ ಒಳ್ಳೆಯದು, ಒಂದೆರಡು ಬಾರಿ ಹೋಗಿ ಬಂದರೆ ಜನ ಕೈ ಹಿಡಿಯಬಹುದು, ರಾಜ್ಯದ್ಯಾಂತ ಪ್ರವಾಸ ಮಾಡಲು ಅನುಕೂಲವಾಗಲಿದೆ. ಈ ಬಗ್ಗೆ ಯೋಚಿಸೋಣ ಎಂದಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಪ್ರಶ್ನೆ ಮಾಡಿದಾಗ ಹೈಕಮಾಂಡ್ ಮಾತೇ ಅಂತಿಮ ಎಂದು ಪರೋಕ್ಷವಾಗಿ ಕೋಲಾರದಲ್ಲಿ ಸ್ಪರ್ಧೆ ಮಾಡದಿರುವುದನ್ನು ಖಚಿತ ಪಡೆದಿದ್ದಾರೆ.

ವರುಣಾದಲ್ಲಿ ಸ್ಪರ್ಧೆ ಮಾಡ್ತಾರ ಬಿ.ವೈ ವಿಜಯೇಂದ್ರ (BY Vijayendra)..?: ವರುಣಾದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡುವ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಇತ್ತ ಬಿಜೆಪಿಯಲ್ಲೂ ಚಟುವಟಿಕೆಗಳು ಶುರುವಾಗಿವೆ. ಸಿದ್ದರಾಮಯ್ಯ ವಿರುದ್ಧ ಬಿ.ವೈ ವಿಜಯೇಂದ್ರ ಸ್ಪರ್ಧೆ ಮಾಡಬಹುದು ಎನ್ನಲಾಗುತ್ತಿದೆ. ಈ ಹಿಂದೆಯೂ ಇಂತಹದೇ ಸುದ್ದಿ ಕೇಳಿ ಬಂದಿತ್ತು. ಆದರೆ ಸಿದ್ದರಾಮಯ್ಯ ಕೋಲಾರ (Kolar Constituency) ದ ಕಡೆ ಮುಖ ಮಾಡಿದ್ದ ಹಿನ್ನಲೆ ವಿಜಯೇಂದ್ರ ಅವರು ಶಿಕಾರಿಪುರದಲ್ಲಿ ಸ್ಪರ್ಧೆ ಮಾಡಬಹುದು ಎನ್ನಲಾಗಿತ್ತು. ಈಗ ವರುಣಾಕ್ಕೆ ಸಿದ್ದು ವಾಪಸ್ ಆಗ್ತಿರುವ ಹಿನ್ನೆಲೆ ಅವರನ್ನ ಕಟ್ಟಿ ಹಾಕಲು ವಿಜಯೇಂದ್ರ ಅವರನ್ನು ಬಿಜೆಪಿ ಅಸ್ತ್ರವಾಗಿ ಬಳಸಬಹುದು ಎನ್ನಲಾಗುತ್ತಿದೆ.

ಸಿದ್ದರಾಮಯ್ಯ ವರುಣಾದಲ್ಲಿ ಸ್ಪರ್ಧಿಸ್ತಾರಾ ಇಲ್ವಾ ಎನ್ನುವ ಬಗ್ಗ ಮಾರ್ಚ್ 25 ರಂದು ನಿರ್ಧಾರ ಆಗಲಿದೆ. ಎರಡನೇ ಸಿಇಸಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದ್ದು ಅಂದು ಹೈಕಮಾಂಡ್ ನಾಯಕರು ಅಂತಿಮ ತಿರ್ಮಾನ ತೆಗೆದುಕೊಳ್ಳಲಿದ್ದಾರೆ. ಅದು ಏನೇ ಇದ್ದರೂ ಸಿದ್ದರಾಮಯ್ಯ ಕ್ಷೇತ್ರ ಬದಲಾವಣೆ ಚುನಾವಣಾ ರಾಜಕೀಯದಲ್ಲಿ ಮತ್ತೆ ಜೋರು ಸದ್ದು ಮಾಡುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *