ಬೆಂಗಳೂರು: ಅಪ್ಪು ಸಿನಿಮಾಗಳು ಈಗ ಲೆಕ್ಕಕ್ಕೆ ಬರೋದಿಲ್ಲ, ಅವನ ಸಮಾಜಸೇವೆ ಎಲ್ಲವನ್ನು ಪಕ್ಕಕ್ಕಿಟ್ಟಿದೆ ಎಂದು ನಟ, ನಿರ್ಮಾಪಕ ರಾಘವೇಂದ್ರ ರಾಜ್ಕುಮಾರ್ ನೆನೆದರು.
ಅಪ್ಪು ಅಗಲಿ ಇಂದಿಗೆ 2 ತಿಂಗಳು ಕಳೆದಿದೆ. ಈ ಹಿನ್ನೆಲೆ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿ ರಾಘಣ್ಣ ಮಾಧ್ಯಮಗಳೊಂದಿಗೆ ಮಾತನಾಡಿ, ವೈದ್ಯೋ ನಾರಾಯಣ ಹರಿ ಅಂತ ನಮ್ಮ ತಂದೆ ಯಾವಾಗಲೂ ಹೇಳುತ್ತಿದ್ದರು. ಇವತ್ತು ನನ್ನ ತಮ್ಮ ಹೋಗಿ 2 ತಿಂಗಳಾಗಿದೆ. ಆದರೆ ಅವನ ಕಣ್ಣುಗಳು ಎಲ್ಲರನ್ನೂ ನೋಡುತ್ತಿದೆ. ಅದೇ ಅವನ ಶಕ್ತಿ. ನಮ್ಮ ತಂದೆ ಬೇಡರ ಕಣ್ಣಪ್ಪನಾಗಿ ಕಣ್ಣುದಾನ ಮಾಡಿದರು. ಕಣ್ಣುದಾನ ಮಾಡಿ ಎಂದು ಸಂದೇಶ ಕೊಟ್ಟು ಹೋದರೆಂದು ಸ್ಮರಿಸಿದರು. ಇದನ್ನೂ ಓದಿ: ಅಪ್ಪು ಅಗಲಿ ಇಂದಿಗೆ 2 ತಿಂಗಳು – ಸಮಾಧಿಗೆ ಕುಟುಂಬಸ್ಥರಿಂದ ಪೂಜೆ, ಅಭಿಮಾನಿಗಳ ದಂಡು
ನಾವು ದೇಹದಾನ ಮಾಡಿದ್ದೀವಿ. ನನಗೂ ಶಿವಣ್ಣನಿಗೂ ಅಪ್ಪಾಜಿಯೇ ಪ್ರೇರಣೆ. ಅಪ್ಪು ಅಗಲಿ ಇಂದಿಗೆ ಎರಡು ತಿಂಗಳು. ಇವತ್ತು ಮನೆಯವರೆಲ್ಲ ಪೂಜೆ ಮಾಡಿದ್ದೇವೆ. ಅಪ್ಪು ಇಷ್ಟ ಪಡುತ್ತಿದ್ದ ತಿನಿಸು, ವಸ್ತುಗಳನ್ನು ಇಟ್ಟು ಮಾಡಿದ್ದೇವೆ. ಅಪ್ಪು ಸಿನಿಮಾಗಳು ಈಗ ಲೆಕ್ಕಕ್ಕೆ ಬರೋದಿಲ್ಲ, ಅವನ ಸಮಾಜ ಸೇವೆ ಎಲ್ಲವನ್ನೂ ಪಕ್ಕಕ್ಕಿಟ್ಟಿದೆ ಎಂದು ಅಭಿಪ್ರಾಯಪಟ್ಟರು.
ಅಪ್ಪು ಪ್ರೇರಣೆಯಿಂದ 400ಕ್ಕೂ ಹೆಚ್ಚು ಜನ ಕಣ್ಣು ದಾನ ಮಾಡಲು ನೋಂದಾಯಿಸಿಕೊಂಡಿದ್ದಾರೆ. ಅಪ್ಪು ಹೋಗಿ ಬದಲಾವಣೆ ತಂದಿದ್ದಾನೆ. ಇದು ನಮಗೆ ಹೆಮ್ಮೆ. ದೇಶದಲ್ಲಿ ಇಷ್ಟು ಮಂದಿ ದೇಹ ಮತ್ತು ಕಣ್ಣನ್ನು ದಾನ ಮಾಡಿರುವುದು ಇದೇ ಮೊದಲು. ಎಲ್ಲಿಂದ ಕಣ್ಣು ಬಂತು ಎಂದು ಕೇಳಿದರೆ ಕರ್ನಾಟಕದಿಂದ ಎನ್ನುವಂತಾಗಬೇಕು. ಅದೇ ನೀವು ಅಪ್ಪಾಜಿ ಹಾಗೂ ಅಪ್ಪುಗೆ ಸಲ್ಲುಸುವ ಗೌರವ ಎಂದರು. ಇದನ್ನೂ ಓದಿ: ಟ್ರೆಡ್ಮಿಲ್ನಲ್ಲಿ 12 ಗಂಟೆಗಳಲ್ಲಿ 66 ಕಿಮೀ ಯುವಕನ ನಾನ್ಸ್ಟಾಪ್ ಓಟ