ತೆಲಂಗಾಣ ಶಾಸಕರಿಗೆ ಮಟನ್, ಚಿಕನ್ ಬಿರಿಯಾನಿ ಬೇಕಾ ಅಂತ ವಿಚಾರಿಸಲು ಡಿಕೆಶಿ ತೆರಳಿದ್ದು: ಆರ್.ಅಶೋಕ್

By
2 Min Read

ಬೆಂಗಳೂರು: ನಾವು ಇಲ್ಲಿನ ಜನರ ಕಷ್ಟಗಳ ಬಗ್ಗೆ ಮಾತಾಡುತ್ತಿದ್ದೇವೆ. ಆದರೆ ಡಿ.ಕೆ ಶಿವಕುಮಾರ್ (D.K Shivakumar) ಜನರ ಹಿತ ಹಾಗೂ ಕಷ್ಟಗಳನ್ನು ಕಡೆಗಣಿಸಿ ತೆಲಂಗಾಣಕ್ಕೆ ಹೋಗಿದ್ದಾರೆ. ತೆಲಂಗಾಣ ಶಾಸಕರಿಗೆ ಯಾವ ಹೋಟೆಲ್‍ನಲ್ಲಿ ಇರಿಸಬೇಕು. ಮಟನ್ ಬಿರಿಯಾನಿ ಇಲ್ಲವೇ ಚಿಕನ್ ಬಿರಿಯಾನಿ ಕೊಡಿಸಬೇಕಾ ಅಂತ ವಿಚಾರಿಸಲು ತೆರಳಿದ್ದಾರೆ ಎಂದು ಡಿಕೆಶಿ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ (R. Ashoka) ವಾಗ್ದಾಳಿ ನಡೆಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿಗೆ ತೆಲಂಗಾಣದ ಶಾಸಕರ ಹಿತವೇ ಮುಖ್ಯವಾಗಿದೆ. ಸರ್ಕಾರ ಬಂದಾಗಿಂದ 60 ತಪ್ಪುಗಳಾಗಿವೆ. ಅಧಿಕಾರಕ್ಕೆ ಬಂದ ಕೂಡಲೇ ವರ್ಗಾವಣೆ ಅಂಗಡಿ ತೆರೆದಿದ್ದರು. ಅಲ್ಲದೇ ಐಟಿ ದಾಳಿಯಾಗಿ ಇವರ ಲೂಟಿ ಹಣ ಸಿಕ್ಕಿದೆ. ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾಗಿ ಹೋರಾಟ ಮಾಡಲಿದೆ. ನಿಲುವಳಿಗಳನ್ನೂ ಒಟ್ಟಾಗಿ ಮಂಡಿಸಿ ಚರ್ಚೆ ಮಾಡಲಿದ್ದೇವೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಮಧು ಬಂಗಾರಪ್ಪಗೆ ಅಹಂ ಜಾಸ್ತಿ ಆಗಿದೆ, ಅಧಿಕಾರದ ಪಿತ್ತ ನೆತ್ತಿಗೇರಿದೆ : ಬೇಳೂರು ಗೋಪಾಲಕೃಷ್ಣ

ರಾಜ್ಯ ಸರ್ಕಾರ ಬರ ನಿರ್ವಹಣೆಯಲ್ಲಿ ವಿಫಲವಾಗಿದೆ. ಸರ್ಕಾರ, ಮಂತ್ರಿಗಳು ಬರ ನಿರ್ವಹಣೆಗೆ ಯಾವ ಕೆಲಸವನ್ನೂ ಮಾಡಿಲ್ಲ. ಸುಮ್ಮನೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ವೈಫಲ್ಯ ಹಾಗೂ ಶಾಲೆಗಳಿಗೆ ಹುಸಿ ಬಾಂಬ್ ಮೇಲ್, ಜಮೀರ್ ಅಹಮದ್ ಅಸಂಬದ್ಧ ಹೇಳಿಕೆ, ಎನ್‍ಇಪಿ ರದ್ದು, ಜಾತಿ ಜನಗಣತಿ ವರದಿ ಹಾಗೂ ನೀರಾವರಿ ಯೋಜನೆಗಳು ವಿಚಾರಗಳಲ್ಲಿ ನಿಲುವಳಿ ಸೂಚನೆ ಮಂಡಿಸಿ ಸರ್ಕಾರಕ್ಕೆ ಚಾಟಿ ಬೀಸುವ ಕೆಲಸವನ್ನು ಜೆಡಿಎಸ್-ಬಿಜೆಪಿ ಒಟ್ಟಾಗಿ ಮಾಡಲಿದೆ ಎಂದಿದ್ದಾರೆ.

ಕಾಂಗ್ರೆಸ್ ಗ್ಯಾರಂಟಿಗಳು ವಿಫಲವಾಗಿವೆ. ನಿರುದ್ಯೋಗಿಗಳಿಗೆ ಆರು ತಿಂಗಳಿಂದ ಸರ್ಕಾರ ನಾಮ ಹಾಕಿದೆ. ಡಿಕೆಶಿ ಪ್ರಕರಣದಲ್ಲಿ ಸಿಬಿಐ ತನಿಖೆಯ ಅನುಮತಿ ವಾಪಸ್ ಬಗ್ಗೆಯೂ ಚರ್ಚೆ ನಡೆಯಲಿದೆ. ರಾಜ್ಯದಲ್ಲಿ ಅಭಿವೃದ್ಧಿ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ನಮ್ಮ ಬತ್ತಳಿಕೆಯಲ್ಲಿ ಸರ್ಕಾರದ ವಿರುದ್ಧ ಹಲವು ಅಸ್ತ್ರಗಳಿವೆ ಎಂದು ಅವರು ಎಚ್ಚರಿಸಿದ್ದಾರೆ.

ಪರಿಷತ್ ವಿಪಕ್ಷ ನಾಯಕ, ವಿಧಾನಸಭೆ ಉಪನಾಯಕ ಹಾಗೂ ಉಭಯ ಸದನಗಳ ವಿಪ್‍ಗಳ ನೇಮಕ ವಿಳಂಬ ವಿಚಾರವಾಗಿ ಕೇಂದ್ರದ ನಾಯಕರ ಬಳಿ ನಾನು ಹಾಗೂ ವಿಜಯೇಂದ್ರ ಮಾತಾಡಿದ್ದೇವೆ. ನಮ್ಮ ಅಭಿಪ್ರಾಯಗಳನ್ನು ಹೈಕಮಾಂಡ್ ಪಡೆದಿದೆ. ಅಧಿವೇಶನದ ಆರಂಭಕ್ಕೂ ಮುನ್ನ ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದಿದ್ದಾರೆ.

ಗುತ್ತಿಗೆದಾರ ಅಂಬಿಕಾಪತಿ ಸಾವಿಗೆ ಬೇರೆಯೇ ಕಾರಣ ಇದೆ. ಅದರ ಬಗ್ಗೆಯೂ ಸದನದಲ್ಲಿ ಚರ್ಚೆ ಮಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ವಿಪಕ್ಷ ನಾಯಕ ಸ್ಥಾನಕ್ಕೆ ಆಕಾಂಕ್ಷಿಯಾಗಿರಲಿಲ್ಲ, ಹೈಕಮಾಂಡ್‌ಗೆ ತಿಳಿಸಿದ್ದೆ: ಬೊಮ್ಮಾಯಿ

Share This Article