ಹಾಸನ: ಮಾಜಿ ಸಿಎಂ ಸಿದ್ದರಾಮಯ್ಯ ಮೂರು ಪಾರ್ಟಿಯಲ್ಲಿದ್ದು ಬಂದಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರೇ ಪಕ್ಷಾಂತರಿ ಎಂದು ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದರು.
ನೂತನ ಸಚಿವರು ಈಗಲೂ ಅನರ್ಹರೇ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಆರ್.ಅಶೋಕ್, ಸಿದ್ದರಾಮಯ್ಯ ಅವರು ಕೂಡ ಜೆಡಿಎಸ್ ಪಾರ್ಟಿ ಬಿಟ್ಟು ಅನರ್ಹರಾಗಿ ಅರ್ಹರಾಗಿದ್ದು 120 ವೋಟಿನಿಂದ. ನಮ್ಮವರೆಲ್ಲ ಸೆಂಚುರಿ ಹೊಡೆದಿದ್ದಾರೆ. ಸಿದ್ದರಾಮಯ್ಯ ಮೂರು ಪಾರ್ಟಿಯಲ್ಲಿದ್ದು ಬಂದಿದ್ದಾರೆ. ಸಿದ್ದರಾಮಯ್ಯ ಅವರೇ ಪಕ್ಷಾಂತರಿ. ಅವರನ್ನು ವಿರೋಧ ಪಕ್ಷದ ಸ್ಥಾನದಿಂದ ಕಿತ್ತು ಹಾಕಿದ್ರೆ, ಬೇರೆ ಪಾರ್ಟಿಗೆ ಹೋಗುತ್ತಾರೆ. ವಿರೋಧ ಪಕ್ಷದ ನಾಯಕ ಸ್ಥಾನದಿಂದ ಕಿತ್ತು ಹಾಕಿದ್ರೆ, ಅವರ ಬಣ್ಣ ಬಯಲಾಗುತ್ತೆ ಎಂದು ಕಿಡಿಕಾರಿದರು.
ಇಡೀ ರಾಜ್ಯದಲ್ಲಿ ಮನೆ ಕಟ್ಟಲು ಯಾವುದೇ ರೀತಿ ಹಣದ ಕೊರತೆಯಿಲ್ಲ. 1029 ಕೋಟಿ 55 ಲಕ್ಷ ಹಣ ಎಲ್ಲಾ ಜಿಲ್ಲಾಧಿಕಾರಿ ಬಳಿ ಇದೆ. ಸಾಲ ಮಾಡಿಯಾದರೂ ಸರಿ, ಬಡ್ಡಿ ಕಟ್ಟಿಯಾದರೂ ಸರಿ ಮನೆ ಕಟ್ಟುವ ಭರವಸೆ ಈಡೇರಿಸಲು ನುಡಿದಂತೆ ನಡೆಯುತ್ತೇವೆ ಎಂದು ಆರ್.ಅಶೋಕ್ ತಿಳಿಸಿದರು.
ಕಂದಾಯ ಇಲಾಖೆಯಲ್ಲಿ ಉತ್ತಮ ಕೆಲಸ ನಿರ್ವಹಣೆಗೆ ಜಿಲ್ಲಾಧಿಕಾರಿಗಳು ತಿಂಗಳಿಗೆ ಒಂದು ದಿನ ಹಳ್ಳಿಗೆ ಹೋಗಿ ಬೆಳಗ್ಗೆಯಿಂದ ಸಂಜೆವರೆಗೆ ಇರಬೇಕು. ತಹಶೀಲ್ದಾರ್ ಮೂರು ದಿನ ಹಳ್ಳಿಗಳ ಕಡೆ ನಡೆಯಬೇಕು. ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ಮುಂದೆ ಅರ್ಜಿಯೇ ಇಲ್ಲದೇ ಪಿಂಚಣಿ ಕೊಡುತ್ತೇವೆ. ಆಧಾರ್ ಕಾರ್ಡ್ ನಲ್ಲಿರುವ ವಯಸ್ಸಿನ ಆಧಾರದ ಮೇಲೆ ಈ ಕಾರ್ಯಕ್ರಮ ಅನುಷ್ಠಾನಕ್ಕೆ ತರುತ್ತೇವೆ ಎಂದು ತಿಳಿಸಿದರು.
ಇದೇ ವೇಳೆ ಮತ್ತೊಮ್ಮೆ ಅವಕಾಶ ಕೊಡಿ ಎಂದು ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೂರು ವರ್ಷಕ್ಕೆ ಜೆಡಿಎಸ್ ಪಕ್ಷವೇ ಇರಲ್ಲ. ಜೆಡಿಎಸ್ ಸವೆಯುತ್ತಿರುವ ಪಾರ್ಟಿ ಎಂದು ವ್ಯಂಗ್ಯವಾಡಿದರು.