ಕಾಂಗ್ರೆಸ್‍ನವರು ಡಾನ್ಸ್ ಮಾಡುತ್ತಾ ಪಾದಯಾತ್ರೆ ಮಾಡುತ್ತಿದ್ದಾರೆ: ಅಶೋಕ್

Public TV
1 Min Read

ದಾವಣಗೆರೆ: ಕಾಂಗ್ರೆಸ್‍ನವರು ಬಿರಿಯಾನಿ ತಿನ್ನುತ್ತಾ ಜೊತೆಗೆ ಡಾನ್ಸ್ ಮಾಡುತ್ತಾ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ಗೆ ಈಗ ಕೆಟ್ಟ ಕಾಲ ಶುರುವಾಗಿದೆ. ಈ ಹಿಂದೆ ಮೇಕೆದಾಟು ಆರಂಭ ಮಾಡಿ ಕೋವಿಡ್ ಹಿನ್ನೆಲೆ ಅರ್ಧಕ್ಕೆ ನಿಂತು ಹೊಯಿತು. ಈಗ ಉಕ್ರೇನ್‍ನಲ್ಲಿ ನಮ್ಮ ಮಕ್ಕಳ ಸಂಕಷ್ಟದಲ್ಲಿ ಇದ್ದಾರೆ. ಆದರೂ ಕಾಂಗ್ರೆಸ್ ಪಾದಯಾತ್ರೆ ಮಾಡುತ್ತಿದೆ ಎಂದು ಕಿಡಿಕಾರಿದರು.

ಮೇಕೆದಾಟು ವಿಚಾರ ಇನ್ನೂ ಕೋರ್ಟ್‍ನಲ್ಲಿ ಇದೆ. ಇದನ್ನು ಸೂಕ್ಷ್ಮವಾಗಿ ಬಗೆಹರಿಸಬೇಕು. ಕಾಂಗ್ರೆಸ್ ಪಾದಯಾತ್ರೆಯಿಂದ ತಮಿಳುನಾಡು ಕೈಗೆ ಅಸ್ತ್ರ ಕೊಟ್ಟಂತಾಗುತ್ತದೆ. ಈ ಹಿಂದೆ ಎಸ್‍ಎಂ ಕೃಷ್ಣ ಕಾವೇರಿ ವಿಚಾರದಲ್ಲಿ ಪಾದಯಾತ್ರೆ ಮಾಡಿ ಏನಾಗಿದೆ, ಕೋರ್ಟ್ ಛೀಮಾರಿ ಹಾಕಿತ್ತು ಎಂದು ವಾಗ್ದಾಳಿ ನಡೆಸಿದರು.

ಮೇಕೆದಾಟು ಅಂದರೆ ಕುಡಿಯುವ ನೀರು. ಆದರೆ ಇವರು ನೀರಾವರಿಗೂ ಕೊಡುವುದಾಗಿ ಹೇಳುತ್ತಿದ್ದಾರೆ. ಇಷ್ಟಕ್ಕೂ ಇವರ ಮಾತು ಕೇಂದ್ರ, ರಾಜ್ಯ ಸರ್ಕಾರಗಳು ಕೇಳುತ್ತಿಲ್ಲ. ಯಾವ ಪುರುಷಾರ್ಥಕ್ಕೆ ಈ ಯಾತ್ರೆ ಮಾಡುತ್ತಿದ್ದಾರೆ. ಸಿದ್ದು ಪ್ರಭಾವಿನಾ, ಡಿಕೆಶಿ ಪ್ರಭಾವಿನಾ ಎಂಬ ಸ್ಪರ್ಧೆ ಇಲ್ಲಿ ನಡೆಯುತ್ತಿದೆ. ಮೀಡಿಯಾ ಜೊತೆಗೆ ಪ್ರಚಾರದಲ್ಲಿ ಈಗ ಡಿಕೆಶಿ ಮಾತ್ರ ಕಾಣುತ್ತಿದ್ದಾರೆ ಎಂದರು.

ಉಕ್ರೇನ್‍ಲ್ಲಿ ಸಿಲುಕಿಕೊಂಡಿರುವ ಮಕ್ಕಳ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಲಾಗುತ್ತಿದೆ. ಇದಕ್ಕಾಗಿ ಐಎಎಸ್ ಅಧಿಕಾರಿಗಳ ನೇಮಕ ಮಾಡಲಾಗಿದೆ. ರಾಜ್ಯದ ಯಾವುದೇ ಮಕ್ಕಳು ಉಕ್ರೇನ್‍ನಲ್ಲಿ ಸಂಕಷ್ಟದಲ್ಲಿ ಇದ್ದರೆ ಆ ಬಗ್ಗೆ ಮಾಹಿತಿ ಪಡೆದು ಮುಂದಿನ ಕಾರ್ಯ ನಡೆಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ವಿದ್ಯುತ್ ಪೂರೈಕೆ ಉಚಿತವಲ್ಲ, ಬಿಲ್ ಪಾವತಿಸದಿದ್ದರೆ ಕರೆಂಟ್ ಕಟ್ : ನಿತಿನ್ ರಾವತ್

ಈಗಿನ ಮಾಹಿತಿ ಪ್ರಕಾರ ರಾಜ್ಯದ 400 ಮಕ್ಕಳ ಬಗ್ಗೆ ಮಾಹಿತಿ ಇದೆ. ಇನ್ನಷ್ಟು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸುರಕ್ಷಿತವಾಗಿ ಕನ್ನಡದ ಮಕ್ಕಳನ್ನ ಕರೆತರಲು ಸರ್ಕಾರ ಬದ್ಧ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ರಾಜಕೀಯ ಕಾರಣಕ್ಕೆ ಮೇಕೆದಾಟು ಪಾದಯಾತ್ರೆ ಮಾಡುತ್ತಿದೆ : ಕೋಟಾ ಶ್ರೀನಿವಾಸ್ ಪೂಜಾರಿ

Share This Article
Leave a Comment

Leave a Reply

Your email address will not be published. Required fields are marked *