ಇದು ಸಿಎಂ ಅಳಿವು-ಉಳಿವಿನ ಸಮಾವೇಶ, ಜನರ ಸಾವಿನ ಮೇಲೆ ಮೈಸೂರು ಸಾಧನಾ ಸಮಾವೇಶ – ಆರ್.ಅಶೋಕ್ ಲೇವಡಿ

Public TV
3 Min Read

ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಕುರ್ಚಿ ಉಳಿಸಿಕೊಳ್ಳಲು ಸಮಾವೇಶ ನಡೆಸುತ್ತಿದ್ದಾರೆ. ಸಾಧನಾ ಸಮಾವೇಶ ಆದ ನಂತರ ಇದು ಸಿಎಂ ಅಳಿವು-ಉಳಿವಿನ ಸಮಾವೇಶವಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಟೀಕಿಸಿದರು.

ಬೆಂಗಳೂರಿನಲ್ಲಿ (Bengaluru) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರಂಭದಿಂದಲೂ ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ಹೇಳುತ್ತಲೇ ಇದ್ದಿದ್ದರಿಂದ ಯಾವಾಗಲೂ ಸರ್ಕಾರವನ್ನು ಅಸ್ಥಿರತೆ ಕಾಡುತ್ತಿದೆ. ಈ ಸಮಾವೇಶದಿಂದ ಜನರಿಗೆ ಯಾವುದೇ ಉಪಯೋಗವಿಲ್ಲ. ವಾಲ್ಮೀಕಿ ನಿಗಮದಲ್ಲಿ ಹಗರಣ, 2,500 ರೈತರ ಆತ್ಮಹತ್ಯೆ 1200 ನವಜಾತ ಶಿಶುಗಳ ಸಾವು, ಬಾಣಂತಿಯರ ಸಾವು, ಹತ್ತಕ್ಕೂ ಅಧಿಕ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಆತ್ಮಹತ್ಯೆ, ಆರ್‌ಸಿಬಿ ಸಂಭ್ರಮಾಚರಣೆ ವೇಳೆ 11 ಸಾವು, ಇಂತಹ ಘಟನೆಗಳನ್ನು ಸಂಭ್ರಮಿಸಲು ಸಮಾವೇಶ ಮಾಡಲಾಗುತ್ತಿದೆಯೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಶಾಸಕರಿಗೂ ಅನುದಾನ ಸಿಗುತ್ತೆ, ತಾಳ್ಮೆಯಿಂದ ಇರಬೇಕು: ಡಿಕೆಶಿ

ಆರ್‌ಸಿಬಿ (RCB) ಕಾರ್ಯಕ್ರಮ ಸರ್ಕಾರದ ವತಿಯಿಂದ ನಡೆದಿಲ್ಲ ಎಂದು ಬಿಂಬಿಸಲಾಗುತ್ತಿದೆ. ಆದರೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಈ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿದ್ದರು. ಸಿಐಡಿ ಹಾಗೂ ನ್ಯಾ.ಡಿ ಕುನ್ಹಾ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ ಸರ್ಕಾರದ ಪಾತ್ರದ ಬಗ್ಗೆ ಹೇಳದೆ, ಪೊಲೀಸರ ಮೇಲೆ ಆರೋಪ ಮಾಡಲಾಗಿದೆ. ಪೊಲೀಸರಿಗೆ ಆದೇಶ ಕೊಟ್ಟ ಸರ್ಕಾರದ ತಪ್ಪಿನ ಬಗ್ಗೆ ಎಲ್ಲೂ ಹೇಳಿಲ್ಲ. ಇಂತಹ ಸಮಯದಲ್ಲಿ ಸಮಾವೇಶ ನಡೆಸಲಾಗುತ್ತಿದೆ. ಇದೇ ರೀತಿ ಡಿ.ಕೆ.ಶಿವಕುಮಾರ್ ಕನಕಪುರದಲ್ಲಿ ಸಮಾವೇಶ ನಡೆಸಿದರೆ ಆಗ ಯಾರ ಬಲ ಹೆಚ್ಚಿದೆ ಎಂದು ತೀರ್ಮಾನಿಸಬಹುದು. ಇಲ್ಲಿ ಪರಸ್ಪರ ಸ್ಪರ್ಧೆ ನಡೆಯುತ್ತಿದೆ ಎಂದರು. ಇದನ್ನೂ ಓದಿ: ಫೋಟೋಶೂಟ್ ಮೂಡ್‌ನಲ್ಲಿ ಪವಿತ್ರಾ ಗೌಡ

ತನಿಖಾ ಆಯೋಗಗಳನ್ನು ನೇಮಕ ಮಾಡುವಾಗ ಪದೇ ಪದೆ ಇಬ್ಬರನ್ನೇ ನೇಮಕ ಮಾಡಲಾಗುತ್ತದೆ. ಇದರಿಂದಾಗಿ ಜನರಿಗೆ ಸರ್ಕಾರದ ಮೇಲೆ ನಂಬಿಕೆ ಹೋಗಿದೆ. ವಿರೋಧ ಪಕ್ಷದ ಶಾಸಕರಾದ ಬೈರತಿ ಬಸವರಾಜ್ ಅವರನ್ನು ಬಗ್ಗುಬಡಿಯಲು ಪೊಲೀಸರೇ ಎಫ್‌ಐಆರ್‌ನಲ್ಲಿ ಅವರ ಹೆಸರು ಬರೆದಿದ್ದಾರೆ. ದೂರು ಕೊಟ್ಟ ಮಹಿಳೆಯೇ ಮುಂದೆ ಬಂದು ಶಾಸಕರ ಹೆಸರನ್ನು ಹೇಳಿಲ್ಲ ಎಂದಿದ್ದಾರೆ. ಆದರೂ ಸರ್ಕಾರದ ದ್ವೇಷ ಸಾಧಿಸುತ್ತಿದೆ ಎಂದರು.

ಅಭಿವೃದ್ಧಿ ಕಾರ್ಯಗಳಿಲ್ಲ
ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರೇ ಹೇಳಿದ್ದಾರೆ. ಇಂತಹ ಸಮಯದಲ್ಲಿ ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ 50 ಕೋಟಿ ರೂ. ಹಾಗೂ ಬಿಜೆಪಿ-ಜೆಡಿಎಸ್ ಕ್ಷೇತ್ರಕ್ಕೆ 25 ಕೋಟಿ ರೂ. ನೀಡಲಾಗುವುದೆಂದು ಹೇಳಿದ್ದಾರೆ. ಈ ರೀತಿ ತಾರತಮ್ಯ ಮಾಡಿ, ಕೇಂದ್ರದ ಮೇಲೆ ತಾರತಮ್ಯದ ಆರೋಪ ಹೊರಿಸುತ್ತಿದ್ದಾರೆ. ಎಲ್ಲ ಶಾಸಕರಿಗೆ ಸಮಾನ ಅನುದಾನ ನೀಡಬೇಕು. ಇದರಿಂದ ಸಮಾನ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು. ಇದನ್ನೂ ಓದಿ: ಅರಂತೋಡು ಘನತ್ಯಾಜ್ಯ ಘಟಕ ಮರುಸ್ಥಾಪನೆಗೆ ಶಾಸಕ ಕಿಶೋರ್ ಕುಮಾರ್ ಪುತ್ತೂರು ನೆರವು – 5 ಲಕ್ಷ ಅನುದಾನ ಮಂಜೂರು

ಬೆಂಗಳೂರಿನಲ್ಲಿ ಗಟ್ಟಿಯಾದ ಕಲ್ಲು ಇರುವುದರಿಂದ ಸುರಂಗ ಮಾಡುವುದು ಕಷ್ಟ. ಅದರ ಬದಲು ಮೆಟ್ರೋ ಯೋಜನೆಗೆ ಒತ್ತು ನೀಡಬಹುದಿತ್ತು. ಮೊದಲು ಮೇಲಿನ ರಸ್ತೆಗಳನ್ನು ಅಭಿವೃದ್ಧಿಪಡಿಸಿದರೆ ಸಾಕು. ಬೆಂಗಳೂರನ್ನು ಒಡೆದರೆ ನಾಡಪ್ರಭು ಕೆಂಪೇಗೌಡರಿಗೆ ಅಪಮಾನವಾಗುತ್ತದೆ. ಒಡೆಯುವುದು ಕಾಂಗ್ರೆಸ್‌ನ ಬುದ್ಧಿ. ಅಭಿವೃದ್ಧಿ ಮಾಡುವುದರ ಬದಲು ಒಡೆಯುವುದು ಸರಿಯಲ್ಲ. ಬ್ರ‍್ಯಾಂಡ್ ಬೆಂಗಳೂರಿನ ಹೆಸರಲ್ಲಿ ಇದುವರೆಗೆ ಒಂದು ಯೋಜನೆಯೂ ಜಾರಿಯಾಗಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ನನಗೂ ನನ್ನ ಪತ್ನಿಗೂ ಏನಾದ್ರು ಆದ್ರೆ ಅದಕ್ಕೆ ಪಾಕ್‌ ಸೇನಾ ಮುಖ್ಯಸ್ಥನೇ ಕಾರಣ: ಇಮ್ರಾನ್‌ ಖಾನ್‌ ಹೇಳಿಕೆ

ಬಿಜೆಪಿ ಸರ್ಕಾರ ಇದ್ದಾಗ ಕೇಳಿದ್ದ ಮನೆಯನ್ನೇ ಕೊಡಲಾಗುತ್ತಿತ್ತು. ಕಳೆದೆರಡು ವರ್ಷಗಳಿಂದ ಮನೆ ನೀಡಲು ಅನೇಕ ಪತ್ರಗಳನ್ನು ಬರೆದರೂ ಸರ್ಕಾರ ಸ್ಪಂದಿಸಿಲ್ಲ. ನೀತಿ ಸಂಹಿತೆ, ಶಿಷ್ಟಾಚಾರದ ಬಗ್ಗೆ ಪ್ರಧಾನಮಂತ್ರಿಗೂ ಪತ್ರ ಬರೆಯುವ ಇವರು, ಇಲ್ಲಿ ಶಿಷ್ಟಾಚಾರ ಪಾಲಿಸುತ್ತಿಲ್ಲ. ವಿರೋಧ ಪಕ್ಷದ ನಾಯಕನಾದ ನನಗೆ ಮನೆ ನೀಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದರು.

ಸರ್ಕಾರದಲ್ಲಿ ಹಣವಿಲ್ಲ. ಒಂದು ರೂಪಾಯಿ ಖರ್ಚು ಮಾಡುವಾಗ ಕೂಡ ಬಹಳ ಯೋಚನೆ ಮಾಡಬೇಕು. ಅದಕ್ಕಾಗಿ ಬೀದಿ ವ್ಯಾಪಾರಿಗಳಿಂದ ಬರುವ ಜಿಎಸ್‌ಟಿ ಹೆಚ್ಚಿಸಲು ರಾಜ್ಯ ಸರ್ಕಾರ ಕುತಂತ್ರ ಮಾಡಿದೆ. ಈ ಮೂಲಕ ಕೇಂದ್ರ ಸರ್ಕಾರದ ಮೇಲೆ ಆರೋಪ ಹೊರಿಸಲಾಗಿದೆ. ಇದರಿಂದ ದೇಶದ ಆರ್ಥಿಕ ವ್ಯವಸ್ಥೆಗೂ ಹಾನಿಯಾಗಲಿದೆ. ಜನರಿಗೆ ಅನ್ಯಾಯವಾಗಿದ್ದರೆ ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ತಿಳಿಸಲಾಗುವುದು ಎಂದು ಹೇಳಿದರು.

Share This Article