ಅಪಘಾತದ ಸುತ್ತ ಅನುಮಾನ: ಅಶೋಕ್ ಮಗ ಕೃತ್ಯ ಎಸಗಿ ಪರಾರಿ?ಪೊಲೀಸರಿಂದಲೇ ಬಚಾವ್?

Public TV
3 Min Read

– ಹೊಸಪೇಟೆ ಬಳಿ ಕಾರು ಅಪಘಾತಕ್ಕೆ ಇಬ್ಬರು ಬಲಿ
– ನ್ಯಾಷನಲ್ ಪಬ್ಲಿಕ್ ಸ್ಕೂಲ್ ಹೆಸರಿನಲ್ಲಿರುವ ಕಾರು

ಬೆಂಗಳೂರು: ಬಳ್ಳಾರಿಯ ಹೊಸಪೇಟೆ ಬಳಿ ಮೂರು ದಿನಗಳ ಹಿಂದೆ ಕಾರೊಂದು ಗುದ್ದಿದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಈ ಕಾರನ್ನು ಬೆಂಗಳೂರಿನ ಪ್ರಭಾವಿ ಸಚಿವ ಆರ್. ಅಶೋಕ್ ಮಗ ಶರತ್ ಚಲಾಯಿಸುತ್ತಿದ್ದ ಎನ್ನುವ ಗಂಭೀರ ಆರೋಪವೊಂದು ಕೇಳಿಬಂದಿದೆ.

ಮಧ್ಯಾಹ್ನ ಸಂಭವಿಸಿದ ಅಪಘಾತದಲ್ಲಿ ರಸ್ತೆ ಬದಿ ನಿಂತಿದ್ದ ಪಾದಾಚಾರಿ, ರಸ್ತೆಯಲ್ಲಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಈ ಪ್ರಕರಣದ ಸಂಬಂಧ ಸಾಕ್ಷ್ಯಗಳು ಸಿಕ್ಕಿದ್ದರೂ ಪೊಲೀಸರು ಅಶೋಕ್ ಪುತ್ರನನ್ನು ರಕ್ಷಿಸಲು ಮುಂದಾಗುತ್ತಿದ್ದಾರಾ ಎನ್ನುವ ಅನುಮಾನ ಎದ್ದಿದೆ.

ಕೆಎ-05, ಎಂಡಬ್ಲ್ಯು 357 ನಂಬರಿನ ಬೆಂಜ್ ಕಾರು ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ಇಬ್ಬರ ಬಲಿಯನ್ನು ತೆಗೆದುಕೊಂಡಿತ್ತು. ದುರ್ಗಾ ಪೆಟ್ರೋಲ್ ಬಂಕ್ ಬಳಿ ರಾಷ್ಟ್ರೀಯ ಹೆದ್ದಾರಿ 50ರ ಸೇತುವೆ ಮೇಲಿನಿಂದ ವೇಗದಲ್ಲಿ ಬಂದ ಕಾರು ರಸ್ತೆ ಬದಿಯ ಚಹಾದ ಅಂಗಡಿ ಬಳಿ ನಿಂತಿದ್ದ ರವಿ ನಾಯಕ್(19) ಅವರಿಗೆ ಗುದ್ದಿದೆ. ನಂತರ ಕಾರು ಸುಮಾರು 100 ಮೀಟರ್ ದೂರದವರೆಗೆ ರವಿ ಅವರನ್ನು ಬೆಂಜ್ ಕಾರು ತಳ್ಳಿಕೊಂಡು ಹೋಗಿದೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದ ಮತ್ತೀಕೆರೆ ನಿವಾಸಿ ಸಚಿನ್ ಮೃತಪಟ್ಟಿದ್ದಾರೆ.

ಕಾರು ಯಾರದ್ದು?
ಕೆಎ-05, ಎಂಡಬ್ಲ್ಯು 357 ನಂಬರಿನ ಬೆಂಜ್ ಕಾರು ಉತ್ತರಹಳ್ಳಿ ಬ್ರಾಂಚ್‍ನ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಹೆಸರಿನಲ್ಲಿ ಇದೆ. ಆರ್‌ಟಿಓ ದಾಖಲೆಗಳಲ್ಲೂ ಇದೇ ಉಲ್ಲೇಖವಿದೆ.

ಆರೋಪಿ ಯಾರು?
ಬೆಂಗಳೂರಿನ ಶಾರದಾಂಬ ನಗರ, ಜಾಲಹಳ್ಳಿಯ ರಾಹುಲ್ (29) ಎ1 ಆರೋಪಿಯಾಗಿದ್ದಾನೆ. ಪೊಲೀಸರು ಈತ ಚಾಲನೆ ಮಾಡುತ್ತಿದ್ದಾಗ ಅಪಘಾತ ನಡೆದಿದೆ ಎಂದು ಪ್ರಕರಣ ದಾಖಲಿಸಿದ್ದಾರೆ. ಮಧ್ಯಮವರ್ಗದ ಕುಟುಂಬಸ್ಥ ರಾಹುಲ್ ತಂದೆ ಸಚಿವರ ಮಗನ ವ್ಯವಹಾರವನ್ನು ನೋಡಿಕೊಳ್ಳುತ್ತಾರೆ. ಈಗ ಅಶೋಕ್ ಮಗನನ್ನು ಪಾರು ಮಾಡಲು ತಮ್ಮ ಮಗನನ್ನೇ ಪ್ರಕರಣದಲ್ಲಿ ಸಿಲುಕಿಸಿದ್ರಾ? ಈ ಮೂಲಕ ಸಚಿವರ ಮಗನ ಋಣ ತೀರಿಸಿದ್ರಾ ಎನ್ನುವ ಪ್ರಶ್ನೆ ಎದ್ದಿದೆ.

4 ದಿನಗಳ ಪ್ರವಾಸ:
5 ಮಂದಿ ಯುವಕರು ಗೋವಾ, ಉತ್ತರ ಕರ್ಣಾಟಕ ಪ್ರವಾಸ ಕೈಗೊಂಡಿದ್ದರು. ಗುರುವಾರ ರಾತ್ರಿ ಬೆಂಗಳೂರಿನಿಂದ ಗೋವಾಕ್ಕೆ ತೆರಳಿ ಎರಡು ದಿನ ವಾಸ್ತವ್ಯ ಹೂಡಿದ್ದರು. ಶನಿವಾರ ರಾತ್ರಿ ಹಂಪಿ ಪಕ್ಕದಲ್ಲಿ ಇರುವ ಕಿಸ್ಕಿಂದಾದಲ್ಲಿ ವಾಸ್ತವ್ಯ ಹೂಡಿದ್ದರು. ಸೋಮವಾರ ಮಧ್ಯಾಹ್ನ ಎರಡು ಗಂಟೆಗೆ ಹೋಟೆಲ್ ಹೊರಟ ಯುವಕರು ಹೊಸಪೇಟೆ ಬೈಪಾಸ್‍ನಿಂದ ಮರಯಮ್ಮನಹಳ್ಳಿ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದರು. ಮಧ್ಯಾಹ್ನ 2:10 ನಿಮಿಷಕ್ಕೆ ಹೋಟೆಲಿನಿಂದ ಚೆಕೌಟ್ ಆದ ಕಾರು ಮಧ್ಯಾಹ್ನ 2:30 ನಿಮಿಷಕ್ಕೆ ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿತ್ತು.

ಇದೇ ಸಮಯದಲ್ಲಿ ಬೈಕ್ ಪಂಚರ್ ಆದ ಹಿನ್ನೆಲೆ ರವಿನಾಯಕ್ ಮತ್ತು ಸಹೋದರ ಪಂಚರ್ ಹಾಕಿಸಲು ಬೈಕ್ ಪಂಚರ್ ಶಾಪ್‍ನಲ್ಲಿ ಬಿಟ್ಟಿದ್ದರು. ಅಲ್ಲಿಂದ ಅಣತಿ ದೂರ ದಲ್ಲಿರುವ ಟೀ ಕುಡಿಯುತ್ತಿದ್ದಾಗ ಅಪಘಾತ ಸಂಭವಿಸಿತ್ತು.

‘ಪಬ್ಲಿಕ್’ ಪ್ರಶ್ನೆಗಳೇನು?
ಉತ್ತರಹಳ್ಳಿಯ ನ್ಯಾಷನಲ್ ಪಬ್ಲಿಕ್ ಸ್ಕೂಲಿಗೆ ಸೇರಿದ್ದ ಕಾರು ಆರೋಪಿ ರಾಹುಲ್ ಕೈಗೆ ಸೇರಿದ್ದೇಗೆ?
ಆರೋಪಿ ರಾಹುಲ್‍ಗೂ ಉತ್ತರಹಳ್ಳಿಯ ಸ್ಕೂಲ್ ಕಾರಿಗೂ ಸಂಬಂಧವೇನು?
ಉತ್ತರಹಳ್ಳಿಯ ಆ ಸ್ಕೂಲ್ ಜೊತೆಗೆ ಸಚಿವರಿಗೆ ಪಾಲುದಾರಿಕೆ ಇದ್ಯಾ?
ಮಧ್ಯಮ ವರ್ಗದ ರಾಹುಲ್‍ಗೆ ಒಂದೂವರೆ ಕೋಟಿ ಬೆಂಜ್ ಕಾರು ಇಟ್ಟುಕೊಳ್ಳುವಷ್ಟು ಶ್ರೀಮಂತನಾ?
ಕಾರಿನಲ್ಲಿದ್ದವರೆಲ್ಲರೂ ಬೆಂಗಳೂರಿನ ಜಾಲಹಳ್ಳಿ ಮೂಲದವರು…ಜಾಲಹಳ್ಳಿಗೂ ಸಚಿವರಿಗೂ ಒಡನಾಟ ಇದ್ಯಾ?
ಪ್ರಭಾವಿ ಸಚಿವರ ಮಗನನ್ನು ಪಾರು ಮಾಡೋಕೆ ಮುಂದಾದ್ರ ಪೊಲೀಸರು?
ಬೆಂಗಳೂರಿನ ಸಚಿವರ ಮಗನ ಬದಲು ಇನ್ಯಾರನ್ನೋ ಕೇಸಲ್ಲಿ ಸಿಲುಕಿಸಿದ್ರಾ?
ಸುಳ್ಳು ದಾಖಲೆಗಳನ್ನು ಪೊಲೀಸರೇ ಸೃಷ್ಠಿ ಮಾಡಿದ್ರಾ?
ಕಾರು ಓಡಿಸುತ್ತಿದ್ದ ಆರೋಪಿ ರಾಹುಲ್‍ಗೆ ಈ ಕಾರು ಕೊಟ್ಟವರ್ಯಾರು?
ನಿಜಕ್ಕೂ ಆರೋಪಿ ರಾಹುಲ್ ಕಾರು ಡ್ರೈವಿಂಗ್ ಮಾಡುತ್ತಿದ್ನಾ?

 

 

Share This Article
Leave a Comment

Leave a Reply

Your email address will not be published. Required fields are marked *