ಅಂದು ಹೈದರಾಬಾದ್‌ನವಳು, ಇಂದು ಕರ್ನಾಟಕ: ರಶ್ಮಿಕಾ ಮಂದಣ್ಣ ಹೇಳಿಕೆ ವೈರಲ್

Public TV
2 Min Read

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ‘ಸಿಕಂದರ್’ (Sikandar) ಸಿನಿಮಾದ ಸಂದರ್ಶನದಲ್ಲಿ ನೀಡಿರುವ ಹೇಳಿಕೆವೊಂದು ವೈರಲ್ ಆಗಿದೆ. ಅಂದು ಹೈದರಾಬಾದ್‌ನವಳು ಎಂದಿದ್ದ ರಶ್ಮಿಕಾ, ಈಗ ನಾನು ಹುಟ್ಟಿದ್ದು ಬೆಳೆದಿದ್ದು ಕರ್ನಾಟಕದಲ್ಲಿ ಎಂದಿದ್ದಾರೆ. ಈಗ ತಾಯ್ನಾಡು ನೆನಪಿಗೆ ಬಂತಾ ಎಂದೆಲ್ಲಾ ನಟಿಗೆ ಕಾಲೆಳೆದಿದ್ದಾರೆ.

ಸಂದರ್ಶನದಲ್ಲಿ ಹೊಸ ಭಾಷೆಗಳನ್ನು ಕಲಿಯುವುದರ ಕುರಿತು ರಶ್ಮಿಕಾ ಮಂದಣ್ಣಗೆ ಪ್ರಶ್ನೆ ಎದುರಾಗಿದೆ. ನೀವು ಯಾವ ಊರಿನಲ್ಲಿ ಇರುತ್ತಿರೋ ಮತ್ತು ಆ ಊರಿನ ಜನರು ನಿಮ್ಮ ಸುತ್ತಮುತ್ತ ಇರುವಾಗ, ಆ ಊರಿನ ಭಾಷೆಯನ್ನು ಸುಲಭವಾಗಿ ಕಲಿಯಬಹುದು. ನಾನು ಹುಟ್ಟಿದ್ದು ಕರ್ನಾಟಕದಲ್ಲಿ, ಬೆಳೆದಿದ್ದು ಕರ್ನಾಟಕದಲ್ಲಿ ಹಾಗಾಗಿ ನನಗೆ ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆ ಮಾತ್ರ ತಿಳಿದಿತ್ತು ಎಂದಿದ್ದಾರೆ. ಇದನ್ನೂ ಓದಿ:ಕ್ರೇಜಿ ಕ್ವೀನ್‌ ರಕ್ಷಿತಾ ಅದ್ಧೂರಿ ಬರ್ತ್‌ಡೇ ಸೆಲೆಬ್ರೇಷನ್

ಸದ್ಯಕ್ಕೆ ನಾನು ಹೈದರಾಬಾದ್‌ನಲ್ಲಿ ಇದ್ದೇನೆ. ಹಾಗಾಗಿ, ನನ್ನ ಸಹಾಯಕರು, ನನ್ನ ಭದ್ರತಾ ಸಿಬ್ಬಂದಿ ಎಲ್ಲರೂ ತೆಲುಗಿನಲ್ಲೇ ಮಾತನಾಡುತ್ತಾರೆ. ಆದ್ದರಿಂದ ಅವರೊಂದಿಗೆ ಮಾತನಾಡಲು ನಾನು ತೆಲುಗು ಭಾಷೆಯನ್ನು ಬೇಗ ಕಲಿಯಬೇಕಾಯಿತು. ನಾನು ಈಗ ಹಿಂದಿಯನ್ನು ಮಾತನಾಡುತ್ತೇನೆ. ಆದರೆ ತುಂಬಾ ಅಂದ್ರೆ ತುಂಬಾ ಜಾಗೃತಳಾಗಿರುತ್ತೇನೆ. ಯಾಕೆಂದರೆ, ಹಿಂದಿ ಮಾತನಾಡುವಾಗ ನಾನು ಏನಾದರೂ ತಪ್ಪು ಮಾತನಾಡಬಾರದು ಎಂಬ ಕಾರಣಕ್ಕೆ ಎಂದಿದ್ದಾರೆ ರಶ್ಮಿಕಾ. ಇದನ್ನೂ ಓದಿ:ಕೊನೆಗೂ ಭಾವಿ ಪತಿಯ ಫೋಟೋ ಹಂಚಿಕೊಂಡ ‘ಹುಡುಗರು’ ಚಿತ್ರದ ನಟಿ ಅಭಿನಯ

ಆಗ ಸಂದರ್ಶನದಲ್ಲಿದ್ದ ಸಲ್ಮಾನ್ ಖಾನ್ ಅವರು ರಶ್ಮಿಕಾಗೆ ತಮಾಷೆಯಾಗಿ ಕಾಲೆಳೆದಿದ್ದಾರೆ. ಒಂದು ವೇಳೆ ನಾನು ಮುಂಬೈಗೆ ಶಿಫ್ಟ್ ಸುಲಭವಾಗಿ ಹಿಂದಿ ಭಾಷೆಯನ್ನು ಕಲಿಯುತ್ತೇನೆ ಎಂದ ನಟಿಗೆ ಸಲ್ಮಾನ್ ಕೌಂಟರ್ ಕೊಟ್ಟಿದ್ದಾರೆ. ಅದು ಸಾಧ್ಯವಿಲ್ಲ. ನೀವು ಮುಂಬೈಗೆ ಬಂದರೂ ಕೂಡ ಹಿಂದಿಯಲ್ಲಿ ಕಲಿಯಲು ಸಾಧ್ಯವಿಲ್ಲ. ಏಕೆಂದರೆ, ನಿಮ್ಮ ಸುತ್ತಮುತ್ತ ಇರುವವರೆಲ್ಲಾ ಇಂಗ್ಲಿಷ್‌ನಲ್ಲೇ ಮಾತಾಡುತ್ತಾರೆ ಎಂದು ಅವರು ಕಾಲೆಳೆದಿದ್ದಾರೆ.

ಈ ಹಿಂದೆ ನಟಿ ನಾನು ಹೈದರಾಬಾದ್‌ನವಳು ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದರು. ಈಗ ನಾನು ಕರ್ನಾಟಕದವಳು ಎಂದು ದಿಢೀರ್ ಎಂದು ಹೇಳಿಕೆ ನೀಡಿರೋದು ನೆಟ್ಟಿಗರಿಗೆ ಆಹಾರವಾಗಿದೆ.

ಸಲ್ಮಾನ್ ಖಾನ್ (Salman Khan) ಮತ್ತು ರಶ್ಮಿಕಾ ನಟನೆಯ ‘ಸಿಕಂದರ್’ ಸಿನಿಮಾ ಮಾ.30ರಂದು ರಿಲೀಸ್ ಆಗಿದೆ. ಸಲ್ಮಾನ್ ಪ್ರೇಯಸಿಯಾಗಿ ಕನ್ನಡತಿ ರಶ್ಮಿಕಾ ನಟಿಸಿದ್ದಾರೆ.

Share This Article