ಖಲಿಸ್ತಾನಿ ಹೋರಾಟಗಾರ ಅಮೃತ್‌ಪಾಲ್‌ ಸಿಂಗ್‌ ಪರಾರಿ – ಪಂಜಾಬ್‌ ಹಲವೆಡೆ ಇಂಟರ್‌ನೆಟ್‌ ಸ್ಥಗಿತ

Public TV
2 Min Read

ಅಮೃತಸರ: ಖಲಿಸ್ತಾನಿ (Khalistan) ಪ್ರತ್ಯೇಕ ರಾಷ್ಟ್ರ ಹೋರಾಟಗಾರ ಅಮೃತ್‌ಪಾಲ್ ಸಿಂಗ್ (Amritpal Singh) ಪರಾರಿಯಾಗಿದ್ದು ಆತನನ್ನು ಬಂಧಿಸಲು ಪಂಜಾಬ್‌ ಪೊಲೀಸರು (Punjab Police) ಬಲೆ ಬೀಸಿದ್ದಾರೆ.

ನೂರಾರು ಪೊಲೀಸರ ತಂಡ ಶನಿವಾರ ಆತನ ಮನೆ ಮೇಲೆ ದಾಳಿ ನಡೆಸಿದಾಗ ಪರಾರಿಯಾಗಿದ್ದ. ಈ ವೇಳೆ ಬೆನ್ನತ್ತಿ ಅಡ್ಡಗಟ್ಟಿದ್ದರೂ ಪೊಲೀಸರ ಕಣ್ಣುತಪ್ಪಿಸಿ ಪರಾರಿಯಾಗಿದ್ದಾನೆ.

ಏಳು ಜಿಲ್ಲೆಗಳ ಸಿಬ್ಬಂದಿಯನ್ನು ಒಳಗೊಂಡ ರಾಜ್ಯ ಪೊಲೀಸರ ವಿಶೇಷ ತಂಡವು ಅಮೃತ್‌ಪಾಲ್‌ ಸಹಚಚರು ಜಲಂಧರ್‌ನ ಶಾಹಕೋಟ್ ತಹಸಿಲ್‌ಗೆ ತೆರಳುತ್ತಿದ್ದಾಗ ಹಿಂಬಾಲಿಸಿದೆ. ಕೊನೆಯದಾಗಿ ಆತ ಬೈಕ್‌ನಲ್ಲಿ ವೇಗವಾಗಿ ಸಂಚರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈಗಾಗಲೇ ಆತನ 78 ಮಂದಿ ಆಪ್ತರನ್ನು ಬಂಧಿಸಲಾಗಿದೆ. ಬಂಧಿಸಿದ ಬೆನ್ನಲ್ಲೇ ಆತನ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡುತ್ತಿರುವ ವೀಡಿಯೋಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಪಂಜಾಬ್‌ನ ಹಲವೆಡೆ ಇಂಟರ್‌ನೆಟ್‌ ಸೇವೆಗಳನ್ನು (Internet Service) ಬಂದ್‌ ಮಾಡಲಾಗಿದೆ. ಇದನ್ನೂ ಓದಿ: ಚಾಲಕರ ಮುಷ್ಕರ – ರಾತ್ರಿಯಿಡೀ ನಡೆದುಕೊಂಡೇ ಹೋಗಿ ವಧು ಮನೆ ಸೇರಿದ ವರನ ಕುಟುಂಬ

ಪಂಜಾಬ್‌ನಲ್ಲಿ ತನ್ನದೇ ಸಶಸ್ತ್ರ ಗುಂಪುಗಳನ್ನು ಕಟ್ಟಿಕೊಂಡು ತಿರುಗಾಡುತ್ತಿದ್ದ ಈತ ‘ವಾರಿಸ್ ಪಂಜಾಬ್ ದಿ’ ಹೆಸರಿನ ಧಾರ್ಮಿಕ ಸಂಘಟನೆ ನಡೆಸುತ್ತಿದ್ದ. ಇತ್ತೀಚೆಗೆ ಅಮೃತ್‌ಪಾಲ್ ಸಿಂಗ್ ಸಹಚರನನ್ನು ಪೊಲೀಸರು ಬಂಧಿಸಿದ್ದನ್ನು ಖಂಡಿಸಿ ಅಮೃತಸರದ ಪೊಲೀಸ್ ಠಾಣೆಯೊಂದಕ್ಕೆ ನುಗ್ಗಿ ಆತನ ಶಸ್ತ್ರಧಾರಿ ಬೆಂಬಲಿಗರು ದಾಂಧಲೆ ನಡೆಸಿದ್ದರು.

 

ಅಮೃತ್‍ಪಾಲ್ ಸಿಂಗ್‌ಗೆ ಪಾಕಿಸ್ತಾನದ (Pakistan) ಗುಪ್ತಚರ ಇಲಾಖೆ ಐಎಸ್‌ಐ (ISI) ಬೆಂಬಲವಿದೆ ಎಂದು ಗುಪ್ತಚರ ಇಲಾಖೆ ಹೇಳಿತ್ತು. ಅಮೃತಪಾಲ್‌ ಸಿಂಗ್‌ ಜಾರ್ಜಿಯಾಕ್ಕೆ ಭೇಟಿದ್ದ. ಅಲ್ಲಿ ಆತನಿಗೆ ಬೋಧನೆ ಮಾಡಲಾಗಿದೆ. ಖಲಿಸ್ತಾನ ಹೋರಾಟವನ್ನು ಜೀವಂತವಾಗಿಡಲು ಭಾರತದಲ್ಲಿ ಐಎಸ್‌ಐಗೆ ವ್ಯಕ್ತಿ ಬೇಕಿತ್ತು ಎಂದು ಗುಪ್ತಚರ ಇಲಾಖೆಯ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿ ಮಾಡಿತ್ತು.

ನಾನು ಭಾರತೀಯನೇ ಅಲ್ಲ, ಪಾಸ್‍ಪೋರ್ಟ್ ಇದ್ದ ಮಾತ್ರಕ್ಕೆ ನಾನು ಭಾರತೀಯ ವ್ಯಕ್ತಿಯಾಗುವುದಿಲ್ಲ. ಅದು ಕೇವಲ ಟ್ರಾವೆಲ್ ಡಾಕ್ಯುಮೆಂಟ್ ಎಂದು ಹೇಳಿಕೊಂಡಿದ್ದ. ಸಿದ್ದಾಂತಕ್ಕೆ ಸಾವಿಲ್ಲ. ನಮ್ಮ ಸಿದ್ದಾಂತವೂ ಅಷ್ಟೇ. ಖಲಿಸ್ತಾನ್ ತಡೆಯಲು ನೋಡಿದರೆ ಇಂದಿರಾ ಗಾಂಧಿಗೆ ಆದ ಗತಿಯೇ ಅಮಿತ್ ಶಾಗೂ ಎದುರಾಗಲಿದೆ ಎಂದು ಬಹಿರಂಗವಾಗಿ ಎಚ್ಚರಿಕೆ ನೀಡಿದ್ದ.

Share This Article
Leave a Comment

Leave a Reply

Your email address will not be published. Required fields are marked *