ತಂದೆ ಹಾದಿ ಹಿಡಿದ ಮಗ- ನೇತ್ರದಾನ ಮಾಡಿ ಸಾವಲ್ಲೂ ಸಾರ್ಥಕತೆ ಮೆರೆದ ಅಪ್ಪು

Public TV
1 Min Read

ಬೆಂಗಳೂರು: ಹೃದಯಾಘಾತದಿಂದ ಇಂದು ನಿಧನರಾಗಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ತಮ್ಮ ಕಣ್ಣುಗಳನ್ನು ದಾನ ಮಾಡಲಾಗಿದೆ.

ಕನ್ನಡದ ಮೇರು ನಟರಾಗಿದ್ದ ಡಾ. ರಾಜ್ ಕುಮಾರ್ ಕೂಡ ನೇತ್ರದಾನ ಮಾಡುವ ಮೂಲಕ ಮಾದರಿಯಾಗಿದ್ದರು. ಇದೀಗ ಪುನೀತ್ ಅವರು ಕೂಡ ಅದೇ ದಾರಿ ಹಿಡಿದಿದ್ದು, ಅಪ್ಪನಂತೆ ಮಗನೂ ನೇತ್ರದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ. ನೇತ್ರದಾನದ ಕುರಿತು ಪುನೀತ್ ಅವರು ಹಲವು ಸಂದರ್ಭಗಳಲ್ಲಿ ಜಾಗೃತಿಯನ್ನು ಕೂಡ ಮೂಡಿಸಿದ್ದರು. ಇದೀಗ ಅವರ ಕಣ್ಣುಗಳನ್ನು ದಾನ ಮಾಡಲು ಕುಟುಂಬ ನಿರ್ಧರಿಸಿದೆ.

ನಿನ್ನೆ ರಾತ್ರಿಯೇ ಅಪ್ಪುಗೆ ಲಘು ಹೃದಯಾಘಾತವಾಗಿತ್ತು ಎಂದು ಹೇಳಲಾಗುತ್ತಿದೆ. ಎಂದಿನಂತೆ ಇಂದು ಬೆಳಗ್ಗೆ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ಸಂದರ್ಭದಲ್ಲಿ ದೊಡ್ಮನೆ ಹುಡುಗ ಏಕಾಏಕಿ ಕುಸಿದುಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ರಮಣಶ್ರೀ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಇಸಿಜಿ ಮಾಡಿಸಿ ನಂತರ ನಗರದ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಮಧ್ಯಾಹ್ನ ನಟ ಇಹಲೋಕ ತ್ಯಜಿಸಿದ್ದು, ಕುಟುಂಬ, ಅಭಿಮಾನಿಗಳು ಸೇರಿದಂತೆ ಇಡೀ ಚಿತ್ರರಂಗವೇ ಕಣ್ಣೀರಾಗಿದೆ.

ಅಪ್ಪು ಅವರು ಪತ್ನಿ ಅಶ್ವಿನಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು, ನಟರು, ಅಣ್ಣಂದಿರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *