– ಅಂಬುಲೆನ್ಸ್ ಗೆ ‘ಅಪ್ಪು ಎಕ್ಸ್ ಪ್ರೆಸ್’ ಎಂದು ಹೆಸರಿಟ್ಟಿದ್ದೇವೆ
– ರಾಜ್ಯಾದ್ಯಂತ ಸೇವೆ ನೀಡಲಾಗುತ್ತದೆ
ಮೈಸೂರು: ನಟ ದಿ.ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ನಟ ಪ್ರಕಾಶ್ ರೈ ಅವರು ಸಾಮಾಜಿಕ ಸೇವಾ ಕಾರ್ಯ ಆರಂಭಿಸಿದ್ದಾರೆ. ಮೈಸೂರಿನ ಮಿಷನ್ ಆಸ್ಪತ್ರೆಗೆ ಸುಸಜ್ಜಿತ ಅಂಬುಲೆನ್ಸ್ ಕೊಡುಗೆಯಾಗಿ ನೀಡಿದ್ದಾರೆ.
ಮೈಸೂರಿನ ಮಿಷನ್ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಟ, ಅಪ್ಪು ಎಂದೆಂದಿಗೂ ಇರುವ ಕಥಾನಾಯಕ. ಅಪ್ಪು ನಮ್ಮನ್ನು ಅಗಲಿದ್ದಾಗ ಇಡೀ ರಾಜ್ಯಕ್ಕೆ ಅನಾಥ ಪ್ರಜ್ಞೆ ಕಾಡಿತು. ಮಾತು ಹೊರಡದ ಮೌನ ನನ್ನನ್ನು ಕೂಡ ಆವರಿಸಿತ್ತು. ಹೀಗಾಗಿ ಇದುವರೆಗೂ ಅಪ್ಪು ಬಗ್ಗೆ ನಾನು ಎಲ್ಲಿಯೂ ಮಾತಾಡಿರಲಿಲ್ಲ ಎಂದರು. ಇದನ್ನೂ ಓದಿ: ನವೆಂಬರ್ 1ಕ್ಕೆ ಪುನೀತ್ ರಾಜ್ ಕುಮಾರ್ ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ
ಯಾರು ಯಾರಿಗೂ ಸಮಾಧಾನ ಹೇಳುವ ಸ್ಥಿತಿಯಲ್ಲಿ ಅಪ್ಪು ಅಗಲಿದ್ದಾಗ ಇರಲಿಲ್ಲ. ಮತ್ತೊಬ್ಬ ಅಪ್ಪು ಹುಟ್ಟಿ ಬರುತ್ತಾನೋ ಗೊತ್ತಿಲ್ಲ. ಶ್ರೀಮಂತರ ಮನೆಯಲ್ಲಿ ಹುಟ್ಟಿದ ಅಪ್ಪುಗೆ ಇದ್ದ ಸಾಮಾಜಿಕ ಬದ್ಧತೆ ಬಹಳ ಅಭೂತಪೂರ್ವವಾದದ್ದು. ಹೊಸ ಪ್ರತಿಭೆಗೆ ಅವಕಾಶ ಕೊಡಲು ಸಣ್ಣಸಣ್ಣ ಸಿನಿಮಾ ಮಾಡಬೇಕು ಎಂದು ಸಲಹೆ ಕೊಟ್ಟಿದ್ದೆ. ಆ ಸಲಹೆಯನ್ನು ಅಪ್ಪು ಅವರು ಗಂಭೀರವಾಗಿ ಪರಿಗಣಿಸಿ ಸಣ್ಣ ಸಣ್ಣ ಸಿನಿಮಾ ನಿರ್ಮಾಣಕ್ಕೆ ಮುಂದಾದರು ಎಂದು ಹಳೆಯ ನೆನಪನ್ನು ಮೆಲುಕು ಹಾಕಿಕೊಂಡರು.
ಕೋವಿಡ್ ಸಂದರ್ಭದಲ್ಲಿ ಪ್ರಕಾಶ್ ರಾಜ್ ಫೌಂಡೇಶನ್ ಗೆ ರಾಜ್ ಫೌಂಡೇಶನ್ ನಿಂದ ಅಪ್ಪು ಅವರು 2 ಲಕ್ಷ ಕೊಟ್ಟಿದ್ರು. ಅಪ್ಪು ಇದನ್ನು ಎಲ್ಲೂ ಹೇಳಲಿಲ್ಲ. 10 ನಿಮಿಷ ಮುಂಚೆ ಅಪ್ಪು ಗೆ ಅಂಬುಲೆನ್ಸ್ ಸಿಕ್ಕಿದ್ದರೆ ಅಪ್ಪು ಬದುಕುತ್ತಿದ್ದರೇನೋ ಅಂತಾ ನನಗೆ ಅನ್ನಿಸಿತ್ತು. ಈ ಕಾರಣ ಅಂಬುಲೆನ್ಸ್ ವ್ಯವಸ್ಥೆ ಎಲ್ಲಾ ಕಡೆ ಮಾಡಲು ಮುಂದಾಗಿದ್ದೇನೆ. ‘ಅಪ್ಪು ಎಕ್ಸ್ಪ್ರೆಸ್’ ಅಂತಾ ಅಂಬುಲೆನ್ಸ್ ಗೆ ಹೆಸರು ಇಟ್ಟಿದ್ದೇವೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಅಂಬುಲೆನ್ಸ್ ಕೊಡುತ್ತೇವೆ. ಇನ್ನೊಂದು ವರ್ಷದಲ್ಲಿ ಈ ಕೆಲಸ ಆಗುತ್ತದೆ. ಜನರು, ಆತ್ಮೀಯರ ಬಳಿ ಇದಕ್ಕಾಗಿ ಹಣ ಕೇಳುತ್ತೇನೆ. ಅಷ್ಟು ಹಣ ಸಂಗ್ರಹವಾಗದೆ ಇದ್ದರೂ ನಾನೇ ದುಡಿದ ಈ ಕೆಲಸ ಸಂಪೂರ್ಣ ಮಾಡುತ್ತೇನೆ ಎಂದು ನಟ ವಿವರಿಸಿದರು.
ಇದೇ ವೇಳೆ ಮೈಸೂರಿನ ಮಿಷನ್ ಆಸ್ಪತ್ರೆಯಲ್ಲಿ ನಿರ್ದೇಶಕ ಆನಂದರಾಮ್ ಮಾತನಾಡಿ, ಅಂಬುಲೆನ್ಸ್ಗೆ ರಾಜಕುಮಾರ್ ಚಿತ್ರದ ಅಪ್ಪು ಅವರ ಚಿತ್ರವನ್ನು ಬಳಸಿಕೊಳ್ಳಲಾಗಿದೆ. ಇಡೀ ರಾಜ್ಯಾದ್ಯಂತ ಇಂತಹ ಅಂಬುಲೆನ್ಸ್ ಗಳನ್ನು ನೀಡಲಾಗುತ್ತದೆ. ಪ್ರಕಾಶ್ ರಾಜ್ ಫೌಂಡೇಶನ್ ನಿಂದ ಅಪ್ಪು ಅವರ ಸ್ಮರಣೆ ಆಗುತ್ತಿದೆ. ಅಪ್ಪು ಬಲಗೈನಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗುತ್ತಿರಲಿಲ್ಲ. 10 ವರ್ಷದ ಹಿಂದೆ ನಮ್ಮ ತಂದೆಯ ಹೃದಯದ ಶಸ್ತ್ರ ಚಿಕಿತ್ಸೆಗೆ ಅಪ್ಪು ಅವರು ಹಣ ಕೊಟ್ಟರು ಎಂದು ಮೊನ್ನೆ ಹೋಟೆಲ್ ಸಪ್ಲೈಯರ್ ಒಬ್ಬ ಹೇಳಿದ. ಎಲ್ಲಿಯ ಹೋಟೆಲ್ ಸಪ್ಲೈಯರ್ ಎಲ್ಲಿಯಾ ಅಪ್ಪು, ಒಳ್ಳೆ ಕೆಲಸ ಮಾಡುವವರನ್ನೂ ಟ್ರೋಲ್ ಮಾಡಿಕೊಂಡು ತಿರುಗಾಡುವ ಸಮಾಜದಲ್ಲಿ ಅಪ್ಪು ಅವರು ಸದ್ದಿಲ್ಲದೆ ಸಾಮಾಜಿಕವಾಗಿ ಜನರಿಗೆ ನೆರವಾದರು ಎಂದು ಹೇಳುತ್ತಾ ಅಪ್ಪುವನ್ನು ಕೊಂಡಾಡಿದರು.