‘ಆಯುಧಪೂಜೆ ನರಕಾಸುರರು’ ವರದಿ ಇಂಪ್ಯಾಕ್ಟ್ – ‘ಬಡವರ ರಕ್ತ ಹೀರುವ ಲಂಚ ಪಿಪಾಸು’ಗಳ ವಿರುದ್ಧ ಕ್ರಮ

Public TV
1 Min Read

ಬೆಂಗಳೂರು: ವರ್ಷವಿಡೀ ವ್ಯಾಪಾರವಿಲ್ಲದೆ ಹಬ್ಬದ ಸಮಯದಲ್ಲಿಯಾದ್ರು ಸ್ವಲ್ಪ ವ್ಯಾಪಾರ ಮಾಡೋಣ ಎಂದು ಚಿಂತಿಸುವ ಕೆ.ಆರ್.ಮಾರ್ಕೆಟ್ ವ್ಯಾಪಾರಗಳಿಗೆ ಸಮಸ್ಯೆಯಾಗಿದ್ದ ಅಧಿಕಾರಿಗಳು, ಪುಡಿ ರೌಡಿಗಳ ಕಾಟದ ಸಮಸ್ಯೆಯನ್ನು ಪಬ್ಲಿಕ್ ಟಿವಿ ‘ಆಯುಧಪೂಜೆ ನರಕಾಸುರರು’ ಶೀರ್ಷಿಕೆಯಡಿ ಮೂಲಕ ವರದಿ ಬಿತ್ತರ ಮಾಡಿತ್ತು. ಸದ್ಯ ಈ ವರದಿಯನ್ನು ಗಮನಿಸಿರುವ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ.

ಪಬ್ಲಿಕ್ ಟಿವಿ ವರದಿಯನ್ನು ವೀಕ್ಷಿಸಿದ ಬಳಿಕ ಮೇಯರ್ ಅವರು, ಬಿಬಿಎಂಪಿ ಆಯುಕ್ತರಿಗೆ ನೇರ ಕರೆ ಮಾಡಿ ಇಂತಹ ಅಧಿಕಾರಿಗಳು ಹಾಗೂ ಹಣ ವಸೂಲಿ ಮಾಡುತ್ತಿದ್ದವರ ವಿರುದ್ಧ ಕ್ರಮಕೈಗೊಳ್ಳಲು ತಿಳಿಸಿದರು. ಅಲ್ಲದೇ ಈ ಸಂಬಂಧ ಪಬ್ಲಿಕ್ ಟಿವಿ ವರದಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವರದಿ ಮಾಡಿದ ಹಿನ್ನೆಲೆಯಲ್ಲಿ ನೇರ ಸ್ಥಳಕ್ಕೆ ಭೇಟಿ ನೀಡಿ ಕ್ರಮಕೈಗೊಳ್ಳುವುದಾಗಿ ಹೇಳಿದ ಅವರು, ನಾನು ಆಯುಕ್ತರೊಂದಿಗೆ ಮಾತನಾಡಿದ್ದೇನೆ. ಅಲ್ಲದೇ ಬಿಬಿಎಂಪಿ ಹೆಸರು ಹೇಳಿಕೊಂಡು ಹಣ ವಸೂಲಿ ಮಾಡುತ್ತಿದ್ದ ಹಾಗೂ ಬಾಲಕನೊಂದಿಗೆ ಕೆಟ್ಟದಾಗಿ ಮಾತನಾಡಿದ ವ್ಯಕ್ತಿಯ ವಿರುದ್ಧವೂ ಕ್ರಮಕ್ಕೆ ಸೂಚಿಸಿದ್ದೇನೆ. ಮುಂದಿನ 2 ದಿನಗಳಲ್ಲಿ ಸ್ಥಳಕ್ಕೆ ತೆರಳಿ ವ್ಯಾಪಾರಿಗಳ ಬಳಿ ಸಮಸ್ಯೆಗಳನ್ನು ಅಲಿಸುತ್ತೇನೆ. ಅಲ್ಲಿ ನಡೆಯುತ್ತಿರುವ ಬೇರೆ ಬೇರೆ ದಂಧೆಗಳಿಗೆ ಕಡಿವಾಣ ಹಾಕಲು ಕ್ರಮಕೈಗೊಳ್ಳುತ್ತೇನೆ ಎಂದರು.

ಸದ್ಯ ವಿಡಿಯೋದಲ್ಲಿರುವ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಹಾಗೂ ಕೂಡಲೇ ಆತನನ್ನು ಬಂಧನ ಕೂಡ ಮಾಡಲು ತಿಳಿಸಿದ್ದೇನೆ. ನಮ್ಮದೇ ಅಧಿಕಾರಿ ಪುಟ್ಟ ಬಾಲಕನ ಕೆಟ್ಟದಾಗಿ ಮಾತನಾಡಿದ್ದು, ಸಂಸ್ಥೆಯ ಗುರುತಿನ ಚೀಟಿ ಹಾಗೂ ವಾಕಿಟಾಕಿ ಕೂಡ ಆತನ ಕೈಯಲ್ಲಿದೆ. ಇವತ್ತಿನ ಘಟನೆಯಿಂದ ನನಗೆ ಮುಜುಕರವಾಗುತ್ತಿದೆ ಎಂದರು.

https://www.youtube.com/watch?v=NhjMSwy23vg

Share This Article
Leave a Comment

Leave a Reply

Your email address will not be published. Required fields are marked *