ರಸ್ತೆಗಾಗಿ 20 ವರ್ಷಗಳಿಂದ ಹೋರಾಟ ಮಾಡಿದ್ರೂ ಫಲ ಸಿಕ್ಕಿಲ್ಲ!

Public TV
2 Min Read

ಬೀದರ್: ರಾಜಕೀಯ ಪಕ್ಷಗಳ ಮುಸುಕಿನ ಗುದ್ದಾಟ. 20 ವರ್ಷಗಳಿಂದ ಒಂದು ಡಾಂಬರು  ರಸ್ತೆ ಬೇಕು ಎಂದು ಹಲವು ಬಾರಿ ಹೋರಾಟ ಮಾಡಿದ್ರೂ ನೋ ಯೂಸ್. ಮಳೆಗಾಲ ಬಂದ್ರೆ ಈ ಗ್ರಾಮ ಒಂದು ದ್ವೀಪವಾಗಿ ಸಾವಿನ ಸರಮಾಲೆಯನ್ನು ನೋಡಬೇಕಾಗುತ್ತದೆ. 4 ಕೀಲೋ ಮೀಟರ್ ರಸ್ತೆ ಮಾಡೋಕೆ ಯಾಕೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂಬುದೆ ತಿಳಿಯದ ಸಂಗತಿಯಾಗಿದೆ. ಹಲವು ವರ್ಷಗಳಿಂದ ಬೇಸತ್ತಿರುವ ಗ್ರಾಮಸ್ಥರು ಬೆಳಕು ಕಾರ್ಯಕ್ರಮದ ಮೂಲಕವಾದ್ರೂ ನಮ್ಮ ಗ್ರಾಮಕ್ಕೆ ಬೆಳಕು ಬರುತ್ತೆ ಎಂಬ ನಂಬಿಕೆಯಲ್ಲಿದ್ದಾರೆ.

ಹೌದು. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ರಾಚಪ್ಪಗೌಡಗಾಂವ್ ಗ್ರಾಮದ ಜನ ಪ್ರತಿನಿತ್ಯ ಪಡುತ್ತಿರುವ ನರಕಯಾತನೆಯ ಸ್ಟೋರಿ ಇದು. ಈ ಗ್ರಾಮದಿಂದ ಮೊರಂಬಿ ಹೋಬಳಿಗೆ ಸಂಪರ್ಕ ನೀಡುವ 4 ಕೀಲೋ ಮೀಟರ್ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು ರಸ್ತೆ ನಿರ್ಮಾಣ ಮಾಡಿಕೊಡಿ ಸ್ವಾಮಿ ಎಂದು 20 ವರ್ಷಗಳಿಂದ ಪ್ರತಿಭಟನೆ, ಮನವಿ ಮಾಡಿದ್ರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ.

ಪ್ರತಿಭಟನೆ ಮತ್ತು ಮನವಿ ಮಾಡಿದಾಗ ಮಾಡಿಕೊಡುವುದಾಗಿ ಹೇಳಿದ ಅಧಿಕಾರಿಗಳು ಮತ್ತೆ ಮೇರೆತೇ ಬಿಡುತ್ತಾರೆ. ಇನ್ನು ರಾಜಕೀಯ ಮುಖಂಡರು ಈ ಗ್ರಾಮದ ಅಭಿವೃದ್ಧಿಯಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಈ ಬಗ್ಗೆ ಹಾಲಿ ಶಾಸಕರ ಗಮನಕ್ಕೆ ತಂದ್ರೂ ಯಾಕೆ ಅಭಿವೃದ್ಧಿ ಕಾರ್ಯಕ್ಕೆ ನಿರ್ಲಕ್ಷ್ಯ ಮಾಡುತ್ತಿದ್ದಾರೋ ತಿಳಿಯದ ಸಂಗತಿಯಾಗಿದೆ. ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯ ಬಿಟ್ಟು ನಮ್ಮ ಗ್ರಾಮದ ಅಭಿವೃದ್ಧಿಗೆ ಶ್ರಮಿಸಿ ಎನ್ನುತ್ತಿದ್ದಾರೆ ಗ್ರಾಮಸ್ಥರು. ಇನ್ನು ಈ ಭಾಗದ ಸಂಸದ ಭಗವತ್ ಖೂಬಾ ಸಾಹೇಬ್ರು ಮಾತ್ರ ಮಾಡೋಣ ಎನ್ನುವ ಮೂಲಕ ಮೌನಕ್ಕೆ ಶರಣರಾಗಿದ್ದಾರೆ. ರಾಜಕೀಯ ನಾಯಕರ ಅಸಡ್ಡೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕವಾದ್ರೂ ನಮ್ಮ ಗ್ರಾಮಕ್ಕೆ ರಸ್ತೆ ಭಾಗ್ಯ ಸಿಗುತ್ತೆ ಎಂಬ ಭರವಸೆಯಲ್ಲಿ  ಮನವಿ ಮಾಡಿಕೊಂಡಿದ್ದಾರೆ.

ರಸ್ತೆ ಸಮಸ್ಯೆಯಿಂದ ಈ ಕುಗ್ರಾಮಕ್ಕೆ ಹತ್ತು ಹಲವಾರು ಜ್ವಲಂತ ಸಮಸ್ಯೆಗಳು ಕಾಡುತ್ತಿವೆ. ಮಳೆಗಾಲ ಬಂದ್ರೆ ಇರುವ ಒಂದು ಸೇತುವೆ ನೀರು ತುಂಬಿ ಗ್ರಾಮ ದ್ವೀಪವಾಗಿ ಬಿಡುತ್ತೆ. ಹೀಗಾಗಿ ಯಾರು ಬೇರೆ ಕಡೆ ಹೋಗಲು ಸಾಧ್ಯವಾಗಲ್ಲ. ಮಹಿಳೆಯರು ಹೆರಿಗೆ ಅಂದ್ರೆ ಕನಸಿನಲ್ಲೂ ಭಯ ಬಿಳುತ್ತಾರೆ.

ತುರ್ತು ಚಿಕಿತ್ಸೆ ಇದ್ರೆ ಅಂಬುಲೆನ್ಸ್ ಬರುವುದಿಲ್ಲ. ಯಾರಾದ್ರು ಆಸ್ಪತ್ರೆಗೆ ಅಂದ್ರೆ ಕಷ್ಟ, ವಿದ್ಯಾರ್ಥಿಗಳ ಶಿಕ್ಷಣ ಮೊಟಕುಗೊಳ್ಳುತ್ತಿದೆ. ಈ ಗ್ರಾಮಕ್ಕೆ ಬಸ್ ವ್ಯವಸ್ಥೆ ಕೂಡ ಇಲ್ಲ. ಹಲವು ದಶಕಗಳಿಂದ ಈ ಕುಗ್ರಾಮದ ಸ್ಥಿತಿ ಚಿಂತಾಜನಕವಾಗಿದ್ದು , ಗುತ್ತಿಗೆದಾರರಿಗೆ ಮಾತ್ರ ಈ ರಸ್ತೆ ಲಾಭದಾಯಕ ರಸ್ತೆಯಾಗಿದೆ. ರಸ್ತೆಗಾಗಿ ಟೆಂಡರ್ ಮೇಲೆ ಟೆಂಡರ್ ಮಾಡಿಕೊಂಡು ಅಧಿಕಾರಿಗಳು ರಸ್ತೆ ಮಾಡದೆ ಲಕ್ಷ-ಲಕ್ಷ ಗೋಲ್‍ಮಾಲ್ ಮಾಡಿದ ಉದಾಹರಣೆಗಳು ಇವೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಕ್ಷೇತ್ರದ ಹಾಲಿ ಶಾಸಕರು ಮತ್ತು ಸಚಿವರಾಗಿರುವ ಈಶ್ವರ್ ಖಂಡ್ರೆಗೆ ಪ್ರಶ್ನೆಗಳ ಸುರಿಮಳೆಯನ್ನೇ ಹಾಕುತ್ತಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡೋದನ್ನು ಬಿಟ್ಟು ದಯವಿಟ್ಟು ನಮ್ಮ ಗ್ರಾಮಕ್ಕೆ ಒಂದು ಡಾಂಬರು ರಸ್ತೆ ಮಾಡಿಕೊಡಿ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಿನಲ್ಲಿ ಸ್ವಾತಂತ್ರ್ಯ ಬಂದು ಹಲವು ದಶಕಗಳಾದ್ರು ಇನ್ನೂ ಈ ಕುಗ್ರಾಮಕ್ಕೆ ಒಂದು ಸರಿಯಾದ ರಸ್ತೆ ಇಲ್ಲದೆ ಇರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯ ಮಿಶ್ರಣವಾದ್ರೆ ಗ್ರಾಮಗಳು ಯಾವ ರೀತಿ ಅಭಿವೃದ್ಧಿ ಕುಂಟಿತವಾಗುತ್ತವೆ ಎಂಬುದಕ್ಕೆ ಈ ಸ್ಟೋರಿ ನೈಜ ಉದಾಹರಣೆಯಾಗಿದೆ. ಇನ್ನಾದ್ರು ರಾಜಕೀಯ ಬಿಟ್ಟು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ಕೆ ಸ್ಪಂದಿಸುತ್ತಾರೆ ಎಂಬ ನಂಬಿಕೆಯಲ್ಲಿದ್ದಾರೆ ಗ್ರಾಮದ ಜನ.

 

Share This Article
Leave a Comment

Leave a Reply

Your email address will not be published. Required fields are marked *