ಬಿಗ್ ಬುಲೆಟಿನ್ ಚೆನ್ನಾಗಿದೆ, ಆದ್ರೆ ಬೇರೆಯವರಿಗೆ ಮಾತನಾಡಲು ಬಿಡಲ್ಲ ಯಾಕೆ: ಬಿವಿ ಆಚಾರ್ಯ ಪ್ರಶ್ನೆ

Public TV
2 Min Read

ಬೆಂಗಳೂರು: ಬಿಗ್ ಬುಲೆಟಿನ್ ಚೆನ್ನಾಗಿದೆ. ಆದರೆ ಕೋಪ ಯಾಕೆ? ವಿರೋಧ ಮಾತನಾಡುವರ ಮಾತನ್ನು ಕೇಳಲು ಬೀಡುವುದಿಲ್ಲ ಯಾಕೆ ಎಂದು ಮಾಜಿ ಅಡ್ವೋಕೇಟ್ ಜನರಲ್ ಬಿವಿ ಆಚಾರ್ಯ ಅವರು ಎಚ್.ಆರ್.ರಂಗನಾಥ್ ಅವರನ್ನು ಪ್ರಶ್ನಿಸಿದ್ದಾರೆ.

ಪಬ್ಲಿಕ್ ಟಿವಿಗೆ ಐದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ವಿಶೇಷ ಬಿಗ್ ಬುಲೆಟಿನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಕೋಪ ಕಡಿಮೆಯಾದರೆ ಬಿಗ್ ಬುಲೆಟಿನ್ ಮತ್ತಷ್ಟು ಚೆನ್ನಾಗಿ ಮೂಡಿಬರಬಹುದು ಎಂದು ಸಲಹೆ ನೀಡಿದರು.

ಜಡ್ಜ್ ಆಗಿದ್ದವರಿಗೆ ಸಂಯಮ ಇರಬೇಕು. ಎರಡೂ ಕಡೆಯ ವಾದವನ್ನು ಅಲಿಸಬೇಕಾಗುತ್ತದೆ. ಅದೇ ರೀತಿಯಾಗಿ ವಾರ್ತಾ ನಿರೂಪಕರು ಎರಡು ಕಡೆಯ ವಾದವನ್ನು ಕೇಳಬೇಕು ಎನ್ನುವ ಅಭಿಪ್ರಾಯವನ್ನು ಹೇಳಿದರು.

ದೇಶದಲ್ಲಿ ಒಬ್ಬರು ಪ್ರಖ್ಯಾತ ಪ್ರರ್ತಕರ್ತರಿದ್ದಾರೆ. ಅವರು ಏನು ಮಾತನಾಡಿರುತ್ತಾರೋ ಆ ವಿಚಾರದ ಪರ ಮಾತನಾಡಿದರೆ ಅತಿಥಿಗಳನ್ನು ಬಿಡುತ್ತಾರೆ. ವಿರೋಧ ಮಾತನಾಡಿದರೆ ಮಾತನಾಡಲು ಬಿಡುವುದಿಲ್ಲ. ಹಾಗೆ ನೀವು ಮಾಡುವುದಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಚ್‍ಆರ್ ರಂಗನಾಥ್ ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಬಂದಾಗ ಬಿವಿ ಆಚಾರ್ಯ ಅವರ ಜೊತೆಗಿನ ಅನುಭವವನ್ನು ಮೆಲುಕು ಹಾಕಿದರು.

ಕಾರ್ಯಕ್ರಮದ ಆರಂಭದಲ್ಲಿ ಮಾತನಾಡಿದ ರಂಗನಾಥ್, ಪ್ರಜಾಪ್ರಭುತ್ವದಲ್ಲಿ ನಾವು ಪ್ರಶ್ನಾತೀತರಲ್ಲ. ನಾವು ಹೇಗೆ ಪ್ರಶ್ನೆ ಮಾಡುತ್ತೇವೋ ಅದೇ ರೀತಿಯಾಗಿ ನಮ್ಮನ್ನು ಜನ ಪ್ರಶ್ನೆ ಮಾಡಬೇಕು. ಇಲ್ಲಿ ಪಬ್ಲಿಕ್ ಟಿವಿಯನ್ನು ಹೊಗಳಿ ಮಾತನಾಡಬಾರದು, ನಮ್ಮ ತಪ್ಪುಗಳನ್ನು ತೋರಿಸಿ ಟೀಕಿಸಬೇಕು ಎಂದು ಅತಿಥಿಗಳನ್ನು ಕೇಳಿಕೊಂಡಿದ್ದರು.

ಸಂವಾದದ ಕೊನೆಯಲ್ಲಿ ಎಲ್ಲ ಅತಿಥಿಗಳ ಪ್ರಶ್ನೆಗೆ ಉತ್ತರಿಸಿದ ರಂಗನಾಥ್, ನಿಮ್ಮೆಲ್ಲರ ಸಲಹೆಯನ್ನು ಪರಿಗಣಿಸಿದ್ದೇನೆ. ನಾಳೆಯಿಂದಲೇ ನಿಮ್ಮ ಸಲಹೆಗಳು ಜಾರಿ ಆಗುತ್ತದೆ ಎಂದು ಹೇಳಲಾರೆ. ಆದರೆ ಮುಂದಿನ ದಿನಗಳಲ್ಲಿ ನೀವು ಪಬ್ಲಿಕ್ ಟಿವಿಯಲ್ಲಿ ಬದಲಾವಣೆಯನ್ನು ಕಾಣಲಿದ್ದೀರಿ ಎಂದು ತಿಳಿಸಿದರು.

ಈ ವಿಶೇಷ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಸತ್ಯನಾರಾಯಣ, ನಟ ಮುಖ್ಯಮಂತ್ರಿ ಚಂದ್ರು, ಹಿರಿಯ ನಟಿ ಅರುಂಧತಿ ನಾಗ್, ನಿವೃತ್ತ ಡಿಜಿ, ರೇವಣ ಸಿದ್ದಯ್ಯ, ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್, ನಾರಾಯಣ ನೇತ್ರಾಲಯ ಮುಖ್ಯಸ್ಥ ಡಾ. ಭುಜಂಗ ಶೆಟ್ಟಿ, ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ದ್ವಾರಕನಾಥ್, ಬಿಜೆಪಿ ಮುಖಂಡ ಅಶ್ವತ್ಥ ನಾರಾಯಣ, ಉತ್ತರ ಕರ್ನಾಟಕನಿವಾಸಿಗಳ ಸಂಘದ ಅಧ್ಯಕ್ಷ ಚಂದ್ರೇಶಖರ್ ಸಾಂಬ್ರಾಣಿ, ಮಹಿಳಾ ಹೋರಾಟಗಾರ್ತಿ ವಿಮಲಾ ಅತಿಥಿಗಳಾಗಿ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *