ಅಂಧರಾದ್ರೂ ಅನ್ಯರ ಬಾಳಿನ ಆಶಾಕಿರಣ-ಕಣ್ಣಿಲ್ಲದವರಿಗೆ ಸ್ವಾವಲಂಬಿ ಪಾಠ

Public TV
1 Min Read

ತುಮಕೂರು: ದೇಹದ ಎಲ್ಲಾ ಭಾಗಗಳು ಸರಿಯಿದ್ದರೂ ನಾವುಗಳು ಬೇರೆಯವರಿಗೆ ಸಹಾಯ ಮಾಡಲು ಯೋಚನೆ ಮಾಡುತ್ತವೆ, ಆದ್ರೆ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಅಂಧರಾದ್ರೂ ಇತರರಿಗೆ ಮಾದರಿಯಾಗಿದ್ದಾರೆ.

ತುಮಕೂರು ನಿವಾಸಿ ಶಿವಕುಮಾರ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಅಂಧ ಮಕ್ಕಳು ಹೆತ್ತವರಿಗೆ ಹೊರೆಯಾಗಬಾರದು, ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಬೇಕು ಅನ್ನೋ ಶಿವಕುಮಾರ್ 2008ರಲ್ಲಿ ಸ್ನೇಹಿತರ ಜೊತೆಗೂಡಿ ಅಂಧರ ಕ್ಷೇಮಾಭಿವೃದ್ಧಿ ಸಂಸ್ಥೆಯನ್ನು ಕಟ್ಟಿದ್ದಾರೆ.

ಸಂಸ್ಥೆ ಮೂಲಕ ಅಂಧರಿಗೆ ಕಂಪ್ಯೂಟರ್ ಶಿಕ್ಷಣ, ಸ್ಪೋಕನ್ ಇಂಗ್ಲಿಷ್ ಕಲಿಸುತಿದ್ದಾರೆ. ಜೊತೆಗೆ ವೈರ್‍ಚೇರ್, ಪ್ಲಾಸ್ಟಿಕ್ ಹೂ ತಯಾರಿಕೆ ಸೇರಿದಂತೆ ಗೃಹ ಬಳಕೆಯ ಸೌಂದರ್ಯ ವಸ್ತುಗಳ ತಯಾರಿಕೆಯನ್ನೂ ಹೇಳಿಕೊಡ್ತಿದ್ದಾರೆ. ಈ ಸಂಸ್ಥೆಯಲ್ಲಿ ಶಿವಕುಮಾರ್ ಮೊದಲಿಗೆ ಆರಂಭದಲ್ಲಿ ಕೇವಲ ಬ್ಲಡ್ ಕ್ಯಾಂಪ್, ಕಾನೂನು ಅರಿವು ಕಾರ್ಯಕ್ರಮ ಮಾಡ್ತಿದ್ರು.

2016 ರಿಂದ ತುಮಕೂರು ನಗರದ ಸಿದ್ದರಾಮೇಶ್ವರ ಬಡಾವಣೆಯಲ್ಲಿ ಮನೆ ಬಾಡಿಗೆ ಪಡೆದಿದ್ದಾರೆ. ಈ ಮನೆಯಲ್ಲಿ ಅಂಧ ವಿದ್ಯಾರ್ಥಿಗಳಿಗೆ ಶಿಕ್ಷಣ, ಊಟ, ವಸತಿಯನ್ನ ಉಚಿತವಾಗಿ ಕೊಟ್ಟು 20 ವಿದ್ಯಾರ್ಥಿಗಳಂತೆ 6 ತಿಂಗಳಿಗೊಂದು ಬ್ಯಾಚ್‍ಗೆ ಪಾಠ ಹೇಳುತ್ತಿದ್ದಾರೆ. ಅಂದಹಾಗೆ ತಾಯಿಯನ್ನ ಹೊರತು ಪಡಿಸಿದ್ರೆ ಶಿವಕುಮಾರ್ ಅವರ ತಂದೆ ಹಾಗೂ ತಂಗಿಗೂ ದೃಷ್ಟಿಯಿಲ್ಲ.

ಸ್ನೇಹಿತರಾದ ಎಂ.ಬಿ.ವಿರೂಪಾಕ್ಷ, ಟಿಜಿ ಹರ್ಷ ಸಹ ಶಿವಕುಮಾರ್‍ಗೆ ನೆರವು ನೀಡಿದ್ದಾರೆ. ಜೊತೆಗೆ, ದಾನಿಗಳು ಸಹಾಯ ಮಾಡಿದ್ದಾರೆ ಅಂತ ಶಿವಕುಮಾರ್ ಹೇಳುತ್ತಾರೆ.

 

Share This Article
Leave a Comment

Leave a Reply

Your email address will not be published. Required fields are marked *