ಅಂದು ಗುತ್ತಿಗೆದಾರ, ಇಂದು ಪ್ರಗತಿಪರ ರೈತ- ಕಲಘಟಗಿಯ ಶಶಿಧರ್ ಗೊರವರ ಪಬ್ಲಿಕ್ ಹೀರೋ

Public TV
2 Min Read

– ರಾಜ್ಯದಲ್ಲಿ ಮೊದ್ಲ ಬಾರಿಗೆ ಸ್ಟ್ರಾಬೆರಿ ಹಣ್ಣು ಬೆಳೆದ ರೈತ

ಹುಬ್ಬಳ್ಳಿ: ಅವರು ಅಂದು ಗುತ್ತಿಗೆದಾರ, ಆದರೆ ಇಂದು ಪ್ರಗತಿಪರ ರೈತ. ರಾಜ್ಯದಲ್ಲಿ ಯಾವ ರೈತರೂ ಬೆಳೆಯದ ಸ್ಟ್ರಾಬೆರಿ ಬೆಳೆ ಬೆಳೆದು ಯಶಸ್ಸು ಗಳಿಸೋ ಮೂಲಕ ಲಕ್ಷ ಲಕ್ಷ ರೂಪಾಯಿ ಲಾಭ ಗಳಿಸುತ್ತಿರೋ ಮೂಲಕ ಶಶಿಧರ ಅವರು ಇದೀಗ ಪಬ್ಲಿಕ್ ಹೀರೋ ಎನಿಸಿಕೊಂಡಿದ್ದಾರೆ.

ಸ್ಟ್ರಾಬೆರಿ ಹಣ್ಣುಗಳನ್ನು ನೋಡಿದ್ರೆ ಬಾಯಲ್ಲಿ ನೀರೂರುತ್ತೆ. ಚಿಲಿ ಮೂಲದ ಈ ಹಣ್ಣನ್ನು ಭಾರತದಲ್ಲಿ ಮಹಾರಾಷ್ಟ್ರದ ಮಹಾಬಳೇಶ್ವರದಲ್ಲಿ ಮಾತ್ರ ಬೆಳೆಯಲಾಗುತ್ತಿತ್ತು. ಇದೀಗ ರಾಜ್ಯದಲ್ಲಿ ಮೊದಲ ಬಾರಿಗೆ ಧಾರವಾಡ ಜಿಲ್ಲೆಯಲ್ಲಿ ಸ್ಟ್ರಾಬೆರಿ ಹಣ್ಣನ್ನು ಬೆಳೆಯಲಾಗ್ತಿದೆ. ಮೊದಲು ಗುತ್ತಿಗೆದಾರರಾಗಿದ್ದ ಶಶಿಧರ್ ಗೊರವರ್ ಈಗ ಆ ಕೆಲಸಕ್ಕೆ ಗುಡ್‍ಬೈ ಹೇಳಿ, ಕಲಘಟಗಿ ತಾಲೂಕಿನ ಹುಲ್ಲಂಬಿಯಲ್ಲಿ ಸ್ಟ್ರಾಬೆರಿ ಬೆಳೆದು ಲಾಭ ನೋಡ್ತಿದ್ದಾರೆ.

ಮೂಲತ ಹಾವೇರಿಯ ಮೋಟೆಬೆನ್ನೂರಿನ ಶಶಿಧರ್, 20 ವರ್ಷದ ಹಿಂದೆ ಉದ್ಯೋಗ ಅರಸಿ ಮಹಾರಾಷ್ಟ್ರದ ಮಹಾಬಳೇಶ್ವರಕ್ಕೆ ಹೋಗಿದ್ದರು. ಅಲ್ಲಿಯೇ 20 ವರ್ಷ ಕೆಲಸ ಮಾಡಿ ಕ್ಲಾಸ್ ಒನ್ ಕಂಟ್ರಾಕ್ಟರ್ ಆಗಿದ್ದರು. ನಂತರ ಕೃಷಿಯತ್ತ ಮನಸ್ಸು ಮಾಡಿದ ಶಶಿಧರ್, ಮಹಾಬಳೇಶ್ವರದಲ್ಲೇ ಒಂದು ಎಕರೆ ಜಮೀನು ಗುತ್ತಿಗೆ ಪಡೆದು ಸ್ಟ್ರಾಬೆರಿ ಬೆಳೆದು ಸಕ್ಸಸ್ ಆಗಿದ್ದರು. ಇದೀಗ ಹುಲ್ಲಂಬಿಯಲ್ಲಿ 6 ಎಕರೆ ಜಮೀನು ಖರೀದಿಸಿರೋ ಶಶಿಧರ್ 1 ಎಕರೆಯಲ್ಲಿ ಸ್ಟ್ರಾಬೆರಿ ಬೆಳೆದಿದ್ದಾರೆ.

ಕ್ಯಾಲಿಫೋರ್ನಿಯಾದಿಂದ 45 ರೂ.ಗೆ ಒಂದರಂತೆ 700 ಸ್ಟ್ರಾಬೆರಿ ಸಸಿ ತರಿಸಿ ನರ್ಸರಿ ಮೂಲಕ 35 ಸಾವಿರ ಸಸಿ ಮಾಡಿದ್ರು. ಆದರೆ ಕಳೆದ ವರ್ಷ ಉಂಟಾದ ಮಹಾ ಪ್ರವಾಹಕ್ಕೆ 10 ಸಾವಿರ ಸಸಿ ಹಾಳಾಗಿದ್ದವು. ಉಳಿದ 25 ಸಾವಿರ ಸಸಿಗಳನ್ನು 1 ಎಕರೆಯಲ್ಲಿ ನಾಟಿ ಮಾಡಿದರು. ಅದೀಗ ಫಲ ಕೊಡುತ್ತಿದೆ. ನಿತ್ಯ 150ರಿಂದ 250 ಕೆಜಿವರೆಗೂ ಹಣ್ಣು ಬೆಳೆಯುತ್ತಿದ್ದಾರೆ. ಕೆಜಿ ಹಣ್ಣು 150 ರೂ.ವರೆಗೂ ಬಿಕರಿ ಆಗ್ತಿದೆ. ನಿತ್ಯ ನೂರಾರು ರೈತರು ಶಶಿಧರ್ ಹೊಲಕ್ಕೆ ಬಂದು ಮಾಹಿತಿ ಪಡೆಯುತ್ತಾರೆ.

ಶಶಿಧರ್ ಹೊಲದಲ್ಲಿ ನಿತ್ಯ 20ಕ್ಕೂ ಹೆಚ್ಚು ಮಂದಿ ಕೆಲಸ ಮಾಡ್ತಿದ್ದಾರೆ. ಮುಂದೆ ಜಾಮ್ ಫ್ಯಾಕ್ಟರಿ ಆರಂಭಿ ಇನ್ನಷ್ಟು ಮಂದಿಗೆ ಕೆಲಸ ಕಲ್ಪಿಸಲು ಚಿಂತನೆ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *