ರೈತ ಸ್ನೇಹಿ ಯಂತ್ರ ಕಂಡು ಹಿಡಿದ ಸಂಶೋಧಕಿ- ತುಮಕೂರಿನ ಶೈಲಜಾ ವಿಠಲ್ ಪಬ್ಲಿಕ್ ಹೀರೋ

Public TV
1 Min Read

– ಮಾರುಕಟ್ಟೆ ಬದಲು ನೇರವಾಗಿ ರೈತನ ಕೈಗೆ ಯಂತ್ರ

ತುಮಕೂರು: ಇಲ್ಲೊಬ್ಬರು ಮಹಿಳೆ ಓದಿದ್ದು ಬಿಎಸ್‍ಸಿ ಕಂಪ್ಯೂಟರ್. ಆದರೆ ಛಾಪು ಮೂಡಿಸಿದ್ದು ಮಾತ್ರ ಮೆಕ್ಯಾನಿಕಲ್ ಕ್ಷೇತ್ರದಲ್ಲಿ. ಅದರಲ್ಲೂ ರೈತರಿಗೆ ಉಪಯೋಗವಾಗುವಂತಹ ಯಂತ್ರೋಪಕರಣಗಳನ್ನ ಸೃಷ್ಟಿಸಿ ಅನ್ನದಾತರಿಗೆ ನೆರವಾಗಿದ್ದಾರೆ. ಈ ಮೂಲಕ ತುಮಕೂರು ನಗರದ ದಿಟ್ಟ ಮಹಿಳೆ ಪಬ್ಲಿಕ್ ಹೀರೋ ಎನಿಸಿಕೊಂಡಿದ್ದಾರೆ.

ಕೃಷಿ ಯಂತ್ರಗಳ ಪರಿಶೀಲನೆಯಲ್ಲಿ ತೊಡಗಿರುವ ಶೈಲಜಾ ವಿಠಲ್ ತುಮಕೂರಿನ ಸಪ್ತಗಿರಿ ಬಡಾವಣೆ ನಿವಾಸಿ. ಸಂಶೋಧಕಿ ಆಗಿರುವ ಇವರು, 35ಕ್ಕೂ ಹೆಚ್ಚು ವಿವಿಧ ಕೃಷಿ ಯಂತ್ರೋಪಕರಣ ಕಂಡು ಹಿಡಿದಿದ್ದಾರೆ. ತಮ್ಮದೇ ವರ್ಕ್‍ಶಾಪ್‍ನಲ್ಲಿ ಯಂತ್ರೋಪಕರಣ ತಯಾರು ಮಾಡಿಸುತ್ತಾರೆ. ದಾಳಿಂಬೆ ಹಣ್ಣಿನ ಕಾಳು ಬಿಡಿಸುವ ಯಂತ್ರ. ಅಡಿಕೆ ಸಿಪ್ಪೆ ತೆಗೆಯುವ ಯಂತ್ರ, ಹುಣಸೇ ಹಣ್ಣು ಬೀಜ ವಿಂಗಡಿಸುವ ಯಂತ್ರ, ಅಡುಗೆ ಮನೆ ತ್ಯಾಜ್ಯದಿಂದ ಗೊಬ್ಬರ ತಯಾರಿಸುವ ಯಂತ್ರ. ಈರುಳ್ಳಿ ಬೀಜ ಬಿತ್ತನೆ ಯಂತ್ರ ಹೀಗೆ ಹಲವು ಯಂತ್ರಗಳನ್ನು ಕಂಡು ಹಿಡಿದಿದ್ದಾರೆ.

ಇವರ ರೈತಪರ ಸಂಶೋಧನೆಗಳಿಗೆ ಕಾರಣವಾಗಿದ್ದು ಆಸ್ಸಾಂನಿಂದ ತಂದಂತಹ ಅಡಿಕೆ ಸುಲಿಯುವ ಯಂತ್ರ. ಸಂಬಂಧಿಕರ ಮನೆಯಲ್ಲಿ ಈ ಯಂತ್ರ ಉಪಯೋಗಿಸುತ್ತಿದ್ದರು. ಆದರೆ ಅದರಿಂದ ನಿರೀಕ್ಷಿತ ಪ್ರಯೋಜನ ಆಗಿರಲಿಲ್ಲ. ಈ ಘಟನೆಯಿಂದ ಶೈಲಜಾ ವಿಠಲ್‍ಗೆ ರೈತರು ಎದುರಿಸುತ್ತಿರುವ ಸಂಕಷ್ಟಗಳ ಅರಿವಾಯಿತು. ಕೂಡಲೇ ಕೃಷಿ ಉಪಯೋಗಿ ಯಂತ್ರಗಳ ಅನ್ವೇಷಣೆಯಲ್ಲಿ ತೊಡಗಿದ್ರು.

450 ರೂ.ಗಳಿಂದ ಹಿಡಿದು 15 ಲಕ್ಷ ರೂ. ಮೌಲ್ಯದ ಯಂತ್ರಗಳನ್ನು ಶೈಲಜಾ ತಯಾರಿಸಿದ್ದಾರೆ. ಆದರೆ ಇವುಗಳನ್ನು ಮಾರುಕಟ್ಟೆಗೆ ಬಿಟ್ಟಿಲ್ಲ. ಬೇಕಿದ್ದವರು ನೇರವಾಗಿ ಶೈಲಜಾ ಮನೆಗೆ ಹೋಗಿ ಖರೀದಿಸಬೇಕು. ಈ ಯಂತ್ರಗಳಿಗೆ ವಿದೇಶದಲ್ಲೂ ಭಾರೀ ಬೇಡಿಕೆ ಇದೆ. ಅಗ್ಗದ ದರದಲ್ಲಿ ರೈತರಿಗೆ ಯಂತ್ರಗಳನ್ನು ಬಿಕರಿ ಮಾಡುತ್ತಾರೆ ಎಂದು ಯುವ ರೈತ ಕುಶಾಲ್ ಹೇಳುತ್ತಾರೆ.

ಯಂತ್ರಮಹಿಳೆ ಶೈಲಜಾ ವಿಠಲ್‍ಗೆ ಹಲವು ಪ್ರಶಸ್ತಿ ಪುರಸ್ಕಾರಗಳು ಸಂದಿವೆ.

Share This Article
Leave a Comment

Leave a Reply

Your email address will not be published. Required fields are marked *