ಇಳಿವಯಸ್ಸಿನಲ್ಲಿ ನೊಂದು ಬಂದವರಿಗೆ ಬೆಳಕಾದ್ರು ಸೋಮವಾರಪೇಟೆಯ ರಮೇಶ್

Public TV
1 Min Read

– ಹೋಟೆಲ್, ಬೇಕರಿ ವ್ಯವಹಾರ ಸಂಪೂರ್ಣ ನಿಲ್ಲಿಸಿದ್ರು

ಮಡಿಕೇರಿ: ಮಾನವನ ಕೊನೆಘಟ್ಟ ವೃದ್ಧಾಪ್ಯ. ಈ ಹಂತದಲ್ಲಿ ತಮ್ಮ ಮಕ್ಕಳು ಮೊಮ್ಮಕ್ಕಳೊಂದಿಗೆ ನೆಮ್ಮದಿಯಿಂದ ಕಾಲ ಕಳೆಯಬೇಕೆಂದು ಎಲ್ಲಾ ಹೆತ್ತವರು ಆಸೆ ಪಡುತ್ತಾರೆ. ಆದರೆ ಎಲ್ಲರಿಗೂ ಈ ಭಾಗ್ಯ ಸಿಗಲ್ಲ. ಅಂತಹ ಅನಾಥ ವೃದ್ಧರಿಗೆ ಇಲ್ಲೊಬ್ಬರು ಬೆಳಕಾಗುವ ಮೂಲಕ ಇದೀಗ ಪಬ್ಲಿಕ್ ಹೀರೋ ಎನಿಸಿಕೊಂಡಿದ್ದಾರೆ.

ಅನಾಥ ವೃದ್ಧರಿಗೆ, ಮಕ್ಕಳಿಂದ ಕಡೆಗಣಿಸಲ್ಪಟ್ಟು ಇಳಿವಯಸ್ಸಲ್ಲಿ ಒಂದೊತ್ತು ಊಟಕ್ಕೂ ಪರದಾಡುತ್ತಿದ್ದ 25ಕ್ಕೂ ಹೆಚ್ಚು ವೃದ್ಧರಿಗೆ ಕೊಡಗು ಜಿಲ್ಲೆ ಸೋಮವಾರಪೇಟೆಯ ಗದ್ದೆಹಳ್ಳದ ರಮೇಶ್ ಆಶ್ರಯ ನೀಡಿದ್ದಾರೆ. ‘ವಿಕಾಸ್ ಜನಸೇವಾ ಟ್ರಸ್ಟ್’ ಹೆಸರಿನಲ್ಲಿ ಅನಾಥ ವಯೋವೃದ್ಧರನ್ನು ಆರೈಕೆ ಮಾಡಲಾಗುತ್ತಿದೆ.

ಬೇಕರಿ, ಹೊಟೇಲ್ ಹೊಂದಿದ್ದ ರಮೇಶ್, ಆರು ವರ್ಷದ ಹಿಂದೆ ಬೆಂಗಳೂರಿನ ವಿಕಲಚೇತನರ ಶಾಲೆಗೆ ಭೇಟಿ ಕೊಟ್ಟಿದ್ದರು. ಅಲ್ಲಿ ದೃಷ್ಟಿ ದೋಷವಿದ್ದವರು ಶಾಲೆ ನಡೆಸುತ್ತಿದ್ದರು. ಇದನ್ನು ನೋಡಿ, ಚೆನ್ನಾಗಿರುವ ನಾವ್ಯಾಕೆ ಇಂತಹ ಸೇವೆ ಮಾಡಬಾರದು ಎಂದೆನಿಸಿ, ಎಲ್ಲಾ ವ್ಯಾಪಾರ ನಿಲ್ಲಿಸಿ 5 ವರ್ಷಗಳ ಹಿಂದೆ ಮಡಿಕೇರಿಯಲ್ಲಿ ಅನಾಥಾಶ್ರಮ ಆರಂಭಿಸಿದರು. ಆದರೆ ನಿರ್ವಹಣೆ ವೆಚ್ಚ ಅಧಿಕ ಎಂಬ ಕಾರಣಕ್ಕೆ ಒಂದು ವರ್ಷದ ಹಿಂದೆ ಇದನ್ನು ಸುಂಟಿಕೊಪ್ಪದ ಗದ್ದೆಹಳ್ಳಕ್ಕೆ ಶಿಫ್ಟ್ ಮಾಡಿದರು. ರಮೇಶ್ ಕುಟುಂಬ ಕೂಡ ಆಶ್ರಮದಲ್ಲೇ ವಾಸ್ತವ್ಯ ಹೂಡಿದೆ.

150ಕ್ಕೂ ಹೆಚ್ಚು ವೃದ್ಧರ ಮಕ್ಕಳೊಂದಿಗೆ ಕೌನ್ಸೆಲಿಂಗ್ ನಡೆಸಿ ಅವರನ್ನು ಒಂದು ಮಾಡಿದ್ದಾರೆ. ಸ್ಥಳೀಯರು, ದಾನಿಗಳ ನೆರವಿನಿಂದ ಇದನ್ನು ರಮೇಶ್ ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ಗದ್ದೆಹಳ್ಳದ ಗ್ರಾಮಸ್ಥ ಜಾಹೀದ್ ಹೇಳುತ್ತಾರೆ. ಬಾಡಿಗೆ ಮನೆಯಲ್ಲೇ ರಮೇಶ್ ಈ ಆಶ್ರಮ ನಡೆಸುತ್ತಿದ್ದಾರೆ. ಇಲ್ಲಿ ಆಶ್ರಯ ಪಡೆದವರು ನೆಮ್ಮದಿಯಿಂದ ಕೊನೆಗಾಲದಲ್ಲಿ ಜೀವಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *