ದಾವಣಗೆರೆ: ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗಲ್ಲ. ಹಾಗಾಗಿ ಫಲಿತಾಂಶ ಕಡಿಮೆ ಬರುತ್ತೆ ಅನ್ನೋ ಕೊಂಕಿದೆ. ಆದರೆ ಜಿಲ್ಲೆಯೆ ತುರ್ಚಘಟ್ಟ ಶಾಲೆಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹಲವು ವರ್ಷಗಳಿಂದ ಶೇ.97ರಷ್ಟು ಫಲಿತಾಂಶ ದಾಖಲಾಗುತ್ತಿದೆ.
ಹೌದು, ಈ ವಿಶೇಷ ಸಾಧನೆಗೆ ಕಾರಣ ಶಾಲೆಯ ಶಿಕ್ಷಕ ರಾಮರೆಡ್ಡಿ ಅವರ ಪರಿಶ್ರಮ. ರಾಮರೆಡ್ಡಿ ಅವರಿಂದಾಗಿ ತುರ್ಚಘಟ್ಟ ಗ್ರಾಮದ ಆಂಜನೇಯ ಸರ್ಕಾರಿ ಪ್ರೌಢಶಾಲೆ ಕಳೆದ ಹಲವಾರು ವರ್ಷಗಳಿಂದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.97ರಷ್ಟು ಫಲಿತಾಂಶ ಪಡೆಯುತ್ತಿದೆ. ಈ ಮೂಲಕ ಜಿಲ್ಲೆಯಲ್ಲಿ ಮಾದರಿ ಶಾಲೆಗಳ ಪಟ್ಟಿಗೆ ಸೇರಿದೆ.
ತಾವು ಈ ಶಾಲೆಗೆ ಬಂದ ಮೇಲೆ ಶಾಲೆಯ ಪಾಠದ ಜೊತೆಗೆ ಮಕ್ಕಳನ್ನ ಗುಂಪುಗಳನ್ನಾಗಿ ಮಾಡಿ ಆ ಗುಂಪುಗಳನ್ನ ದತ್ತು ಪಡೆದು ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದಾರೆ. ಜೊತೆಗೆ ಮನೆ ಮನೆ ಪಾಠದ ಯೋಜನೆ ಹಮ್ಮಿಕೊಂಡು ಫಲಿತಾಂಶ ಹೆಚ್ಚಿಸಿದ್ದಾರೆ.
ವಿದ್ಯಾರ್ಥಿಗಳು ಪೋಷಕರ ಜೊತೆ ಅವರವರ ಮನೆಯಲ್ಲಿ ಸಮಾಲೋಚನಾ ಸಭೆ ನಡೆಸಿ ವಿದ್ಯಾರ್ಥಿಗಳ ಬೌದ್ಧಿಕ ದೌರ್ಬಲ್ಯತೆಗೆ ಕಾರಣ ಪತ್ತೆ ಹಚ್ಚಿ ಪರಿಹಾರ ಕೈಗೊಳ್ಳುತ್ತಾರೆ. ಜೊತೆಗೆ ನಾಲ್ಕು ಗೋಡೆಗಳ ಮಧ್ಯೆ ಪಾಠ ಮಾಡುವುದಕ್ಕಿಂತ ನಿಸರ್ಗದ ಮಡಿಲಲ್ಲಿ ಪಾಠ ಮಾಡಿ ವಿದ್ಯಾರ್ಥಿಗಳ ಓದಿನ ಆಸಕ್ತಿ ಹೆಚ್ಚಿಸುತ್ತಿದ್ದಾರೆ.
ಇವರ ಈ ಯೋಜನೆಗಳನ್ನು ಪ್ರತಿ ಸರ್ಕಾರಿ ಶಾಲೆಯಲ್ಲಿ ಅಳವಡಿಸಿಕೊಂಡರೆ ಖಾಸಗಿ ಶಾಲೆಗಿಂತಲೂ ಸರ್ಕಾರಿ ಶಾಲೆಗಳಲ್ಲಿಯೇ ಗುಣಮಟ್ಟದ ಶಿಕ್ಷಣ ಸಿಗುತ್ತೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.