35 ವರ್ಷಗಳಿಂದ ಪರಿಸರ ಉಳಿಸುತ್ತಿರುವ ಪಬ್ಲಿಕ್ ಹೀರೋ ಜಯವಂತ್ ಬಾಂಬೂಲೆ

Public TV
2 Min Read

ಧಾರವಾಡ: ಹಸಿರೇ ಉಸಿರು ಹೀಗಂತ ಹೇಳೋರೇ ಜಾಸ್ತಿ. ಆದರೆ ಆ ಹಸಿರನ್ನ ಉಸಿರಂತೆ ಕಾಪಾಡುವವರ ಸಂಖ್ಯೆ ವಿರಳ. ಆದರೆ 35 ವರ್ಷಗಳಿಂದ ಪರಿಸರ ಜಾಗೃತಿ ಮೂಡಿಸುತ್ತಿರುವ ಜಯವಂತ್ ಬಾಂಬೂಲೆ ಅವರು ಇವತ್ತಿನ ನಮ್ಮ ಪಬ್ಲಿಕ್ ಹೀರೋ.

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ನಿವಾಸಿ ಜಯವಂತ್ ಬಾಂಬೂಲೆ. ಇವರು ಕಳೆದ 35 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ‘ಅರಣ್ಯ ಪ್ರೇರಕ’ ರಾಗಿ ಕೆಲಸ ಮಾಡುತ್ತಿದ್ದಾರೆ. ಗುತ್ತಿಗೆ ಆಧಾರದಲ್ಲಿ 250 ರೂಪಾಯಿ ಸಂಬಳ ಇದ್ದಾಗ ಈ ಕೆಲಸಕ್ಕೆ ಸೇರಿಕೊಂಡಿರುವ ಇವರಿಗೆ ಈಗ 9 ಸಾವಿರ ಸಂಬಳ. ಈ ಸಂಬಳ ಜೀವನಕ್ಕೆ ಸಾಕಾಗುವುದಿಲ್ಲ. ಆದರೂ ಕೆಲಸ ತೃಪ್ತಿ ಕೊಡುತ್ತಿದೆ ಅಂತ ಕೆಲಸ ಮುಂದುವರಿಸಿದ್ದಾರೆ. ಯಾಕೆಂದರೆ ಪರಿಸರ ಹಾಗೂ ಅರಣ್ಯ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಅರಣ್ಯ ಇಲಾಖೆ ನೀಡುವ ಸಸಿಗಳನ್ನ ರೈತರಿಗೆ ನೀಡಿ, ಅವರಿಗೆ ಅರಣ್ಯ ಬೆಳೆಸಿದರೆ ಆಗುವ ಉಪಯೋಗದ ಬಗ್ಗೆ ತಿಳುವಳಿಕೆ ನೀಡುತ್ತಾ ಬಂದಿದ್ದೇನೆ. ಇಲ್ಲಿವರೆಗೆ ಸುಮಾರು ಲಕ್ಷ ರೈತರಿಗೆ ಈ ಬಗ್ಗೆ ಜಾಗೃತಿಯನ್ನ ಮೂಡಿಸಿದ್ದೇನೆ. ಇದಲ್ಲದೇ ತಾಲೂಕಿನ ಪ್ರತಿಯೊಂದು ಶಾಲೆಗೆ ಹೋಗಿ ಮಕ್ಕಳಿಗೆ ಕೂಡಾ ಈ ಬಗ್ಗೆ ತಿಳಿಸುತ್ತಿದ್ದೇನೆ. ಅದರ ಜೊತೆಗೆ ಮಕ್ಕಳಿಗೆ ಪರಿಸರ ಹಾಗೂ ಅರಣ್ಯದ ಬಗ್ಗೆ ರಸಪ್ರಶ್ನೆಗಳನ್ನ ಇಟ್ಟು, ಉತ್ತರ ಹೇಳುವ ಮಕ್ಕಳಿಗೆ ಪೆನ್ನು ಅಂಕಲಿಪಿಗಳನ್ನ ನೀಡಲಾಗುತ್ತದೆ ಎಂದು ಜಯವಂತ್ ಬಾಂಬೂಲೆ ಹೇಳಿದ್ದಾರೆ.

ಮೊದಲು ಈ ಕೆಲಸವನ್ನ ಅವರು ನಡೆದುಕೊಂಡೇ ಹೋಗಿ ಮಾಡುತ್ತಿದ್ದರು. ಸದ್ಯ ಜಯವಂತ್ ಅವರ ಸಹೋದರ ಕೊಡಿಸಿದ ಸ್ಕೂಟಿಯಲ್ಲಿ ಹೋಗಿ ಮಕ್ಕಳಿಗೆ ಹಾಗೂ ರೈತರಿಗೆ ತಿಳಿಸುತ್ತಿದ್ದಾರೆ. ತನ್ನ ಸ್ಕೂಟಿಯ ಮೇಲೆಲ್ಲ ಪರಿಸರ ಜಾಗೃತಿಯ ಘೋಷ ವಾಕ್ಯಗಳನ್ನ ಬರೆಸಿದ್ದಾರೆ. ಒಂದು ಕಡೆ ಕಾಡು ಬೆಳೆಸಿ ನಾಡು ಉಳಿಸಿ ಎಂದು ಬರೆದಿದ್ದರೆ, ಇನ್ನೊಂದು ಕಡೆ, ಅರಣ್ಯ ರಕ್ಷಣೆಯೇ ನಮ್ಮೆಲ್ಲರ ಹೊಣೆ ಎಂದು ಬರೆಸಿದ್ದಾರೆ.

ಇವತ್ತಿನ ದಿನಮಾನಗಳಲ್ಲಿ ತನ್ನ ಮನೆ ಕೆಲಸ ಬಿಟ್ಟು ಈ ರೀತಿ ಜಾಗೃತಿ ಮೂಡಿಸುವವರು ಅತೀ ವಿರಳ. ಇವರ ಈ ಕಾರ್ಯ ಇದೇ ರೀತಿ ಮುಂದುವರೆಯಲಿ ಎಂಬುದೇ ಎಲ್ಲರ ಆಶಯವಾಗಿದೆ.

https://www.youtube.com/watch?v=mPI5MfUNVkE

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *