ಹಸಿರಿನ ಮಹತ್ವ ಸಾರುತ್ತಿದೆ ಸರ್ಕಾರಿ ಶಾಲೆ- ಶಾಲೆಯನ್ನ ಸಸ್ಯಕಾಶಿ ಮಾಡಿದ ಕೋಲಾರದ ಹೆಡ್‍ಮೇಷ್ಟ್ರು ರಮೇಶ್

Public TV
1 Min Read

ಕೋಲಾರ: ಸರ್ಕಾರಿ ಶಾಲೆಗಳಿಗೆ ಒಂದ್ಕಡೆ ಖಾಸಗಿ ಶಾಲೆಗಳ ಪೈಪೋಟಿ, ಮತ್ತೊಂದು ಕಡೆ ಸರ್ಕಾರದಿಂದಲೇ ಉದಾಸೀನ. ಇದರ ನಡುವೆಯೂ ಕೋಲಾರದ ಮಾಲೂರು ತಾಲೂಕಿನ ಪುರ ಅನ್ನೋ ಗ್ರಾಮದ ಸರ್ಕಾರಿ ಶಾಲೆ ರಾಜ್ಯದ ಗಮನ ಸೆಳೆದಿದೆ. ಜಿಲ್ಲಾಮಟ್ಟದಲ್ಲಿ ಪರಿಸರ ಮಿತ್ರ ಶಾಲೆ ಅಂತ ಹ್ಯಾಟ್ರಿಕ್ ಪ್ರಶಸ್ತಿ ಪಡೆದಿದೆ. ಇದಕ್ಕೆ ಕಾರಣ ಹೆಡ್‍ಮೇಷ್ಟ್ರು ರಮೇಶ್.

ಹೌದು. ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಪ್ರವೇಶ ಮಾಡ್ತಿದ್ದಂತೆ ಹಸಿರ ಸಿರಿ ಕಣ್ಮನಕ್ಕೆ ಮುದ ನೀಡುತ್ತೆ. ಮಾವು, ನೇರಳೆ, ಪಪ್ಪಾಯ, ಗಸಗಸೆ, ನುಗ್ಗೆ, ಟೀಕ್, ಸ್ವಿಲರ್ ಮರಗಳು ಸೇರಿದಂತೆ ವಿವಿಧ ಬಗೆಯ ಹೂ-ಹಣ್ಣಿನ ಮರ-ಗಿಡಗಳು ಇಲ್ಲಿವೆ. ದೊಡ್ಡಪತ್ರೆ, ಮೆಳೆಕಾಳು, ಲೋಳೆಸರ, ಶುಂಠಿ ಸೇರಿದಂತೆ ಔಷಧೀಯ ಸಸ್ಯಗಳ ಪರಿಮಳ ಬರುತ್ತೆ.

ಕನ್ನಡ ಮಾಧ್ಯಮದ ಈ ಕಿರಿಯ ಶಾಲೆಯಲ್ಲಿ 1 ರಿಂದ 5 ನೇ ತರಗತಿವರೆಗೆ 62 ವಿದ್ಯಾರ್ಥಿಗಳಿದ್ದಾರೆ. ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ಇರಬೇಕು ಅನ್ನೋದನ್ನ ಮನಗಂಡ ರಮೇಶ್ ಸರ್ ಮಕ್ಕಳು, ಸಹ ಶಿಕ್ಷಕರ ಜೊತೆ ಸೇರಿ ಶಾಲೆಯನ್ನ ಸಸ್ಯಕಾಶಿ ಮಾಡಿದ್ದಾರೆ. ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡುವ ಜಿಲ್ಲಾ ಮಟ್ಟದಲ್ಲಿ ಹ್ಯಾಟ್ರಿಕ್ ಪ್ರಶಸ್ತಿ ಗರಿಯನ್ನ ತನ್ನದಾಗಿಸಿಕೊಂಡಿದೆ.

ಮಧ್ಯಾಹ್ನದ ಬಿಸಿಯೂಟಕ್ಕೆ ಇಲ್ಲಿನ ತರಕಾರಿಗಳನ್ನ ಬಳಸಲಾಗುತ್ತಿದೆ. ಇಂಗು ಗುಂಡಿ, ಮಳೆಕೊಯ್ಲು ಪದ್ಧತಿ ಮತ್ತು ತುಂತುರು ನೀರಾವರಿ ಪದ್ಧತಿ ಮೂಲಕ ಬರದಲ್ಲೂ ಶಾಲೆಯ ಆವರಣ ಹಸಿರಸಿರಿಯ ಹೊದಿಕೆ ಹೊಂದಿದೆ. ಇನ್ನು ಶಾಲಾ ಆವರಣದ ಕಸವನ್ನ ಗೊಬ್ಬರವಾಗಿ ಮರುಬಳಕೆ ಮಾಡುವಂತಹ ತಂತ್ರಜ್ಞಾನವನ್ನ ಅಳವಡಿಸಿದ್ದಾರೆ.

ಬೃಹದಾಕಾರವಾಗಿ ಬೆಳೆದಿರುವ ಈ ಮರಗಳಲ್ಲಿ ಪಕ್ಷಿಗಳ ಕಲರವ ಸಹ ಇದೆ. ಶಾಲೆಯ ವಾತಾವರಣದಿಂದ ಮಕ್ಕಳು ಚಕ್ಕರ್ ಹಾಕದೆ ಶಾಲೆಗೆ ಬರ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *