8 ತಿಂಗಳು ಕಷ್ಟಪಟ್ಟು ದುಡಿದ ಹಣ ಕಳೆದುಕೊಂಡ್ರೂ ಬೆಂಕಿಯಿಂದ ಮಹಿಳೆಯನ್ನ ರಕ್ಷಿಸಿದ ದಿನೇಶ್

Public TV
1 Min Read

ಬೆಂಗಳೂರು: ಎಂಟು ತಿಂಗಳಿನಿಂದ ಕಷ್ಟಪಟ್ಟು ದುಡಿದ ಹಣಕ್ಕಿಂತ ಮಾನವೀಯತೆಗೆ ಬೆಲೆ ಕೊಟ್ಟು ಬೆಂಕಿಯಲ್ಲಿ ಬಿದ್ದವರನ್ನು ರಕ್ಷಿಸಿದ ದಿನೇಶ್ ಅವರು ಇವತ್ತಿನ ನಮ್ಮ ಪಬ್ಲಿಕ್ ಹೀರೋ.

ಮಂಗಳವಾರ ತಡರಾತ್ರಿ ನಗರದ ಹೊರವಲಯದ ನೆಲಮಂಗಲ ಬಳಿ ಸಾರಿಗೆ ಬಸ್ ಬೆಂಕಿಗೆ ಆಹುತಿಯಾಯಿತು. ಈ ಬಸ್‍ನಲ್ಲಿ ದಿನೇಶ್ ಅವರು ಕೂಡ ಪ್ರಯಾಣಿಸುತ್ತಿದ್ದರು. ಬಸ್ಸಿನೊಳಗೆ ಬೆಂಕಿ ಕಾಣಿಸುತ್ತಲೇ ತಮ್ಮ ಪ್ರಾಣ ಒತ್ತೆಯಿಟ್ಟು ತಾವು ದುಡಿದ 72 ಸಾವಿರ ರೂ. ಕಳೆದುಕೊಂಡು ಮತ್ತೊಬ್ಬ ಮಹಿಳೆಯನ್ನು ರಕ್ಷಿಸಿದ್ದಾರೆ.

ದಿನೇಶ್ ಬೆಂಗಳೂರು ನಗರದ ನಿವಾಸಿ. ಮುಂಬೈನಲ್ಲಿ ಕೆಲಸ ಮಾಡಿಕೊಂಡಿದ್ದರು. 8 ತಿಂಗಳ ಬಳಿಕ ಮುಂಬೈನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದರು. ಮಧ್ಯರಾತ್ರಿ ಕಾಣಿಸಿಕೊಂಡ ಬೆಂಕಿಯಿಂದ ಆಘಾತಕ್ಕೊಳಗಾದ ಪ್ರಯಾಣಿಕರು ಎದ್ನೋ ಬಿದ್ನೋ ಅಂತ ಪ್ರಾಣ ಉಳಿಸಿಕೊಳ್ಳೋಕೆ ಓಡಿ ಹೋಗ್ತಿದ್ರು. ಆದ್ರೆ ದಿನೇಶ್ ಮಾತ್ರ ಪ್ರಾಣ ಲೆಕ್ಕಿಸದೆ ಬೆಂಕಿಗೆ ಸಿಕ್ಕಿ ನರಳಾಡ್ತಿದ್ದ ಮಹಿಳೆಯನ್ನು ರಕ್ಷಣೆ ಮಾಡಿದ್ರು. ಅಲ್ಲದೆ ಜೊತೆಗಿದ್ದ ಎಂಟು ವರ್ಷದ ಮಗುವಿಗೂ ಪುನರ್ಜನ್ಮ ನೀಡಿದ್ದಾರೆ.

ದಿನೇಶ್ ಮುಂಬೈನಲ್ಲಿ ಕಷ್ಟಪಟ್ಟು ದುಡಿದ 72 ಸಾವಿರ ಹಣ ಈ ದುರಂತದಲ್ಲಿ ಭಸ್ಮವಾಗಿದೆ. ಮಹಿಳೆಯನ್ನ ರಕ್ಷಣೆ ಮಾಡೋಕೆ ಮುಂದಾದಾಗ ಬ್ಯಾಗ್‍ನಲ್ಲಿದ್ದ 72 ಸಾವಿರ ಬಸ್‍ನಲ್ಲೇ ಕರಕಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ದಿನೇಶ್ ಪತ್ನಿ ನಾಗಮ್ಮ, ದುಡ್ಡು ಹೋದ್ರೆ ಹೋಯ್ತು ನನ್ನ ಗಂಡನ ಬಗ್ಗೆ ಹೆಮ್ಮೆಯಿದೆ ಎಂದು ಹೇಳ್ತಾರೆ.

ಸದ್ಯ ದಿನೇಶ್ ಅವರಿಗೆ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ತನ್ನ ಜೀವ ಉಳಸಿಕೊಂಡ್ರೆ ಸಾಕಪ್ಪ ಅನ್ನೋ ಜನರ ಮಧ್ಯೆ ತಮ್ಮ ಜೀವ ಅಡವಿಟ್ಟು ಬೇರೊಬ್ಬರ ಜೀವ ಉಳಿಸಿದ ದಿನೇಶ್‍ಗೆ ನಮ್ಮದೊಂದು ಸಲಾಂ.

 

Share This Article
Leave a Comment

Leave a Reply

Your email address will not be published. Required fields are marked *