PSI ನೇಮಕಾತಿಯಲ್ಲಿ ಅಕ್ರಮ ಪ್ರಕರಣ- ಆರೋಪಿ ಪತಿಯನ್ನೇ ಜೈಲಿಗಟ್ಟಿದ ಜೈಲರ್ ಪತ್ನಿ!

Public TV
2 Min Read

ಕಲಬುರಗಿ: ಪಿಎಸ್‍ಐ ನೇಮಕಾತಿ ಪರೀಕ್ಷೆಯ ಅಕ್ರಮ ಇದೀಗ ಖಾಕಿ ಸುತ್ತಲೂ ಸುತ್ತುವರಿಯೋಕೆ ಮುಂದಾಗಿದೆ. ಅಕ್ರಮದಲ್ಲಿ ಭಾಗಿಯಾಗಿದ್ದ ಕೆಎಸ್‍ಆರ್‍ಪಿ ಕಮಾಂಡೆಂಟ್ ವೈಜನಾಥ್ ರೇವೂರ್ ರನ್ನ ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ಸಿಐಡಿ ಅಧಿಕಾರಿಗಳು ಏಳು ದಿನ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಮತ್ತೊಂದೆಡೆ ಅಕ್ರಮಕ್ಕೆ ಸಾಥ್ ನೀಡಿದ ಆರೋಪದಲ್ಲಿ 10 ಜನ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.

ಪಿಎಸ್‍ಐ ಹಗರಣದ ಒಂದೊಂದೇ ರಹಸ್ಯ ಬಯಲಾಗ್ತಿದ್ದಂತೆ ಅಲರ್ಟ್ ಆದ ಸಿಐಡಿ ಅಕ್ರಮಕ್ಕೆ ಕುಮ್ಮಕ್ಕು ನೀಡಿದ ಪೊಲೀಸ್ ಅಧಿಕಾರಿಗಳ ಬುಡಕ್ಕೆ ಬೆಂಕಿ ಹಚ್ಚಲು ಮುಂದಾಗಿದ್ದಾರೆ. ಕಲಬುರಗಿಯಲ್ಲಿ ಕೆಎಸ್‍ಆರ್‍ಪಿ ಕಮಾಂಡೆಂಟ್ ಆಗಿರುವ ವೈಜನಾಥ್ ರೇವೂರ್‍ರನ್ನು ಸಿಐಡಿ ಬಂಧಿಸಿದ್ದು, 7 ದಿನ ಕಸ್ಟಡಿಗೆ ತೆಗೆದುಕೊಂಡಿದೆ. ಅಕ್ರಮ ನೇಮಕಾತಿಯ ಕಿಂಗ್‍ಪಿನ್ ಆರ್‍ಡಿಪಾಟೀಲ್ ಜೊತೆ ವೈಜನಾಥ್ ರೇವೂರ್ ಶಾಮೀಲಾಗಿದ್ದು, ತನಿಖೆಯಲ್ಲಿ ಬಯಲಾಗಿತ್ತು. ದುರಂತ ಅಂದ್ರೆ ಸಿಐಡಿ ಅಧಿಕಾರಿಗಳು ಬಂಧಿಸಿರುವ ವೈಜನಾಥ್ ರೇವೂರ್‍ನ ಪತ್ನಿ ಜೈಲರ್ ಆಗಿದ್ದಾರೆ. ವೈಜನಾಥ್ ಪತ್ನಿ ಸುನಂದಾ ವೈಜನಾಥ್ ರೇವೂರ್ ಕಲಬುರಗಿಯ ಸೆಂಟ್ರಲ್ ಜೈಲ್‍ನಲ್ಲಿ ಜೈಲರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ತಮ್ಮ ಆರೋಪಿ ಪತಿಯನ್ನೇ ಜೈಲಿಗಟ್ಟಬೇಕಾದ ಪರಿಸ್ಥಿತಿ ಜೈಲರ್ ಪತ್ನಿಗೆ ನಿರ್ಮಾಣವಾಗಿದೆ.

ಪಿಎಸ್‍ಐ ನೇಮಕಾತಿ ಪರೀಕ್ಷೆಯ ಕೇಂದ್ರ ಬಿಂದುವಾಗಿರುವ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆ, ಎಂ.ಎಸ್ ಇರಾನಿ ಕಾಲೇಜಿನಲ್ಲಿ ಪರೀಕ್ಷೆಯ ದಿನ ಕರ್ತವ್ಯ ನಿರ್ವಹಿಸಿ ಅಕ್ರಮ ತಡೆಗಟ್ಟುವಲ್ಲಿ ವಿಫಲರಾದ ಹತ್ತು ಪೊಲೀಸ್ ಅಧಿಕಾರಿಗಳನ್ನ ಅಮಾನತ್ತು ಮಾಡಲಾಗಿದೆ. ಮತ್ತೊಂದೆಡೆ ಅಕ್ರಮದಲ್ಲಿ ಭಾಗಿಯಾಗಿ ಜೈಲು ಪಾಲಾಗಿರುವ ರಾಯಚೂರು ಜಿಲ್ಲೆಯ ಲಿಂಗಸೂಗುರು ಡಿವೈಎಸ್‍ಪಿ ಮಲ್ಲಿಕಾರ್ಜುನ್ ಸಾಲಿ ಮತ್ತು ಬೆರಳಚ್ಚು ವಿಭಾಗದ ಇನ್ಸ್‍ಪೆಕ್ಟರ್ ಆನಂದ್ ಮೇತ್ರಿ ಇಬ್ಬರನ್ನೂ ಅಮಾನತು ಮಾಡಿ ಗೃಹ ಇಲಾಖೆ ಆದೇಶಿಸಿದೆ. ಇದನ್ನೂ ಓದಿ: ಪಿಎಸ್‍ಐ ನೇಮಕಾತಿ ಅಕ್ರಮ ಭೇದಿಸಲು ಸಹಾಯವಾಯ್ತು ಫೋಟೋಶೂಟ್

ಡಿವೈಎಸ್‍ಪಿ ಮಲ್ಲಿಕಾರ್ಜುನ್ ಸಾಲಿ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ದಿವ್ಯಾ ಹಾಗರಗಿ ಹಾಗೂ ಹೆಡ್ ಮಾಸ್ಟರ್ ಕಾಶಿನಾಥ್‍ಗೆ ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿ ಮಾಡಿದ್ದರಂತೆ. ಇನ್ನೂ ಸಿಪಿಐ ಆನಂದ್ ಮೇತ್ರಿ ಕೂಡ ನಾಲ್ಕು ಜನ ಅಭ್ಯರ್ಥಿಗಳನ್ನ ಕಿಂಗ್ ಪಿನ್ ಆರ್ ಡಿ ಪಾಟೀಲ್ ಮೂಲಕ ಎಕ್ಸಾಂ ಬರೆಯಿಸಿ ಅಕ್ರಮ ಎಸಗಿರೋ ಹಿನ್ನೆಲೆ ಅಮಾನತ್ತು ಮಾಡಿದ್ದಾರೆ.

ಅಕ್ರಮ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. ಒಟ್ಟನಲ್ಲಿ ಪಿಎಸ್‍ಐ ನೇಮಕಾತಿ ಅಕ್ರಮದ ಕೇಸ್ ಇದೀಗ ಪೊಲೀಸ್ ಇಲಾಖೆಯ ಸುತ್ತಲು ಸುತ್ತೊಕೆ ಮುಂದಾಗಿದೆ. ಇನ್ನೂ ಅದೆಷ್ಟು ಅಧಿಕಾರಿಗಳು ಲಾಕ್ ಆಗ್ತಾರೋ ಗೊತ್ತಿಲ್ಲ. ಇದನ್ನೂ ಓದಿ: ನಾನು ಒಳ್ಳೆಯದನ್ನೂ ಮಾಡಿದ್ದೀನಿ, ಅದನ್ನೂ ತೋರಿಸಿ – ಕ್ಯಾಮೆರಾ ಮುಂದೆ ಕೈ ಮುಗಿದ ಕಿಂಗ್‍ಪಿನ್ ಆರ್.ಡಿ.ಪಾಟೀಲ್

Share This Article
Leave a Comment

Leave a Reply

Your email address will not be published. Required fields are marked *