ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ ರೌಡಿಶೀಟರ್ ಮೇಲೆ ಪಿಎಸ್‍ಐ ಫೈರಿಂಗ್!

Public TV
1 Min Read

ಚಿಕ್ಕಬಳ್ಳಾಪುರ: ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ ರೌಡಿಶೀಟರ್ ಮೇಲೆ ಪಿಎಸ್‍ಐ ಫೈರಿಂಗ್ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕುರೂಡಿ ಕ್ರಾಸ್ ಬಳಿ ನಡೆದಿದೆ.

ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‍ಐ ಅವಿನಾಶ್, ರೌಡಿಶೀಟರ್ ಅರುಣ್ ಅಲಿಯಾಸ್ ಲಾಂಗ್ ಅರುಣ್ ಕಾಲಿಗೆ ಗುಂಡು ಹಾರಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಕುರೂಡಿ ಕ್ರಾಸ್ ಬಳಿ ಇದ್ದ ರೌಡಿಶೀಟರ್ ಲಾಂಗ್ ಅರುಣ್ ಹಾಗೂ ಸುರೇಶ್ ಬಂಧನಕ್ಕೆ ಪಿಎಸ್‍ಐ ಅವಿನಾಶ್ ಹಾಗೂ ಸಿಬ್ಬಂದಿ ಬಂಧನಕ್ಕೆ ತೆರಳಿದರು. ಈ ವೇಳೆ ಅಲ್ಲಿದ್ದ ರೌಡಿಶೀಟರ್ ಸುರೇಶ್ ಹಾಗೂ ಮಾರುತಿ ಅಲಿಯಾಸ್ ಪೋಲಾರ್ಡ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಆದರೆ ಅರುಣ್ ಪರಾರಿಯಾಗಲು ಯತ್ನಿಸಿದ್ದು, ಬಂಧಿಸಲು ಮುಂದಾದ ಪೊಲೀಸರ ಮೇಲೆ ಲಾಂಗ್ ನಿಂದ ದಾಳಿ ನಡೆಸಲು ಮುಂದಾಗಿದ್ದಾನೆ. ಈ ವೇಳೆ ಲಾಂಗ್ ಬಿಸಾಡಿ ಶರಣಾಗುವಂತೆ ಪಿಎಸ್‍ಐ ಅವಿನಾಶ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಲಾಂಗ್ ಕೆಳಗಿಳಿಸದ ಅರುಣ್ ಮೇಲೆ ಪಿಎಸ್‍ಐ ಅವಿನಾಶ್ ಕಾಲಿಗೆ ಗುಂಡು ಹಾರಿಸಿದ್ದಾರೆ.

ಸದ್ಯ ಗಾಯಗೊಂಡಿರುವ ಲಾಂಗ್ ಅರುಣ್‍ಗೆ ಗೌರಿಬಿದನೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ತೀವ್ರ ರಕ್ರ ಸ್ರಾವದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಅಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಪೇದೆಗಳಾದ ಅರುಣ್ ಹಾಗೂ ಮಂಜುನಾಥ್ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಕಳೆದ ವಿಧಾನಸಭಾ ಚುನಾವಣಾ ವೇಳೆ ಕೋಟಾಲದಿನ್ನೆ ಬಳಿಯ ಬಾರ್ ಬಳಿ ಜೆಡಿಎಸ್ ಕಾರ್ಯಕರ್ತ ರಾಮರೆಡ್ಡಿ ಎಂಬಾತ ಬರ್ಬರವಾಗಿ ಕೊಲೆಯಾಗಿದ್ದನು. ಈ ಪ್ರಕರಣ ಸೇರಿದಂತೆ ಐಪಿಸಿ ಸೆಕ್ಷೆನ್ 307, 302 ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 7 ಪ್ರಕರಣಗಳಲ್ಲಿ ಈ ಲಾಂಗ್ ಅರುಣ್ ಪೊಲೀಸರಿಗೆ ಬೇಕಾಗಿದ್ದನು. ಹೀಗಾಗಿ ಖಚಿತ ಮಾಹಿತಿ ಮೇರೆಗೆ ರಾತ್ರಿ ಪೊಲೀಸರು ದಾಳಿ ನಡೆಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *