PSI ಮೂತ್ರ ಕುಡಿಸಿದ್ದ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದೇವೆ: ಐಜಿಪಿ ದೇವ್ ಜ್ಯೋತಿ ರೇ

Public TV
2 Min Read

-ಪಿಎಸ್ಐ ವರ್ಗಾವಣೆ, ಪ್ರಕರಣದ ತನಿಖೆ ಸಿಐಡಿ ಹೆಗಲಿಗೆ

ಚಿಕ್ಕಮಗಳೂರು: ವಿಚಾರಣೆಗೆಂದು ಕರೆತಂದು ಪಿಎಸ್‍ಐ ಬೇರೆ ಆರೋಪಿಯ ಮೂತ್ರ ಕುಡಿಸಿದ್ದರು ಎಂದು ಯುವಕನೋರ್ವ ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣೆಯ ಪಿ.ಎಸ್.ಐ. ಅರ್ಜುನ್ ವಿರುದ್ಧ ಗಂಭೀರ ಆರೋಪ ಮಾಡಿದ್ದನು. ಆ ಪೊಲೀಸ್ ಠಾಣೆಗೆ ಇಂದು ಪಶ್ಚಿಮ ವಲಯ ಐಜಿಪಿ ದೇವ್ ಜ್ಯೋತಿ ರೇ ಭೇಟಿ ನೀಡಿ, ಮಾಹಿತಿ ಕಲೆ ಹಾಕಿದ್ದಾರೆ.

ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಪಶ್ಚಿಮ ವಲಯ ಐಜಿಪಿ ದೇವ್ ಜ್ಯೋತಿ ರೇ ಅವರು, ಇದು ತುಂಬಾ ಗಂಭೀರವಾದ ಪ್ರಕರಣ. ಈ ಜಿಲ್ಲೆಯಲ್ಲಿ ಇಂತಹ ಪ್ರಕರಣ ಇದೇ ಮೊದಲು. ಈ ದೂರನ್ನ ಗಂಭೀರವಾಗಿ ಪರಿಗಣಿಸಿದ್ದೇವೆ ಎಂದರು. ಜಿಲ್ಲಾ ಪೊಲೀಸ್ ಮೇಲೆಯೇ ಕಂಪ್ಲೇಂಟ್ ಇರೋದ್ರಿಂದ ಜಿಲ್ಲೆಯ ಪೊಲೀಸರೇ ವಿಚಾರಣೆ ನಡೆಸೋದು ಬೇಡ ಎಂದು ಸಿಐಡಿಗೆ ಹಸ್ತಾಂತರ ಮಾಡಿದ್ದೇವೆ ಎಂದರು.

ಮೇ 23ರ ಭಾನುವಾರ ಪಿಎಸ್‍ಐ ಅರ್ಜುನ್ ಮಹಿಳೆ ಜೊತೆ ಮಾತನಾಡುತ್ತಿದ್ದಾನೆಂದು ಠಾಣೆಗೆ ಕರೆತಂದಿದ್ದ ಪುನೀತ್ ಎಂಬ ಯುವಕನ ವಿರುದ್ಧ ಅದೇ ಮಹಿಳೆ ಕೂಡ ದೂರು ನೀಡಿದ್ದು, ಪುನೀತ್ ಮೇಲೆ ಆ ಕೇಸ್ ದಾಖಲಾಗಿದೆ. ಪ್ರಕರಣ ಸಂಬಂಧ ಗೋಣಿಬೀಡು ಠಾಣೆಯ ಪಿ.ಎಸ್.ಐ. ಅರ್ಜುನ್‍ರನ್ನ ಅಮಾನುತ ಮಾಡಿ ಸ್ಥಳ ತೋರಿಸದೆ ಉಡುಪಿ ಜಿಲ್ಲೆಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ. ಜೊತೆಗೆ ಪ್ರಕರಣದ ತನಿಖೆಯನ್ನ ಸರ್ಕಾರ ಸಿಐಡಿಗೆ ವಹಿಸಿದೆ. ಇಂದು ಗೋಣಿಬೀಡು ಠಾಣೆಗೆ ಭೇಟಿ ನೀಡಿದ ಐಜಿಪಿ ದೇವ್ ಜ್ಯೋತಿ ರೇ ಪ್ರಕರಣ ಸಂಬಂಧ ಮಾಹಿತಿ ಕಲೆ ಹಾಕಿದರು. ಪಿಎಸ್‍ಐ ವಿರುದ್ಧ ಆರೋಪ ಮಾಡಿರೋ ಪುನೀತ್ ಎಂಬ ಯುವಕನ ಸ್ವಗ್ರಾಮ ಕಿರಗುಂದ ಗ್ರಾಮಕ್ಕೂ ಭೇಟಿ ನೀಡಿದ್ದರು.

ಆರೋಪಿತ ಪುನೀತ್, ವಿವಾಹಿತ ಮಹಿಳೆ ಜೊತೆ ಫೋನ್‍ನಲ್ಲಿ ಸಂಭಾಷಣೆ ನಡೆಸುತ್ತಿದ್ದಾನೆ. ಇದರಿಂದ ಸಂಸಾರದಲ್ಲಿ ಗಲಾಟೆ ನಡೆಯುತ್ತಿದೆ ಎಂದು ಮಹಿಳೆ ಪತಿ ದೂರು ನೀಡಿದ್ದನು. ಕೇಸ್ ಸಂಬಂಧ ಪುನೀತ್ ಎಂಬ ದಲಿತ ಯುವಕನನ್ನ ವಿಚಾರಣೆಗೆ ಕರೆತಂದಿದ್ದ ಪಿ.ಎಸ್.ಐ. ಅರ್ಜುನ್, ಜಾತಿ ನಿಂದನೆ ಮಾಡಿ, ಮನಸ್ಸೋ ಇಚ್ಛೆ ಹಲ್ಲೆ ಮಾಡಿ, ಆತನಿಗೆ ಠಾಣೆಗೆ ಬಂದಿದ್ದ ಮತ್ತೊಬ್ಬ ಆರೋಪಿ ಚೇತನ್ ಎಂಬವನ ಮೂತ್ರ ಕುಡಿಸಿದ್ದರು ಎಂದು ಪುನೀತ್ ಆರೋಪಿಸಿದ್ದನು.

Share This Article
Leave a Comment

Leave a Reply

Your email address will not be published. Required fields are marked *