ಎಳೇ ವಯಸ್ಸಿನಲ್ಲೇ ಶೌಚಾಲಯದ ಬಗ್ಗೆ ಜಾಗೃತಿ ಮೂಡಿಸ್ತಿದ್ದಾಳೆ ಬಸವನಬಾಗೇವಾಡಿಯ ಪೃಥ್ವಿ

Public TV
1 Min Read

ವಿಜಯಪುರ: ಒಂದ್ಕಡೆ ಕೊಪ್ಪಳದಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ಉಪವಾಸ ಕುಳಿತು ದೇಶದ ಗಮನ ಸೆಳೆದಿದ್ರು ಮಲ್ಲವ್ವ. ದಾವಣಗೆರೆಯ ಹರಪ್ಪನಹಳ್ಳಿಯ ಮತ್ತಿಹಳ್ಳಿಯಲ್ಲಿ ಶೌಚಾಲಯ ಕಟ್ಟಿಕೊಡಲಿಲ್ಲ ಅಂತ ಯುವತಿ ಅನ್ನಪೂರ್ಣ ಆತ್ಮಹತ್ಯೆ ಮಾಡಿಕೊಂಡಿದ್ರು. ಈ ಎರಡೂ ಘಟನೆಗಳು ಶೌಚಾಲಯದ ಮಹತ್ವವನ್ನ ಹೇಳ್ತಿವೆ. ಇಂಥ ಮಹತ್ವವನ್ನ ಸಾರ್ತಿದ್ದಾಳೆ ಇವತ್ತಿನ ಪಬ್ಲಿಕ್ ಹೀರೋ ವಿಜಯಪುರದ ಬಾಲಕಿ ಪೃಥ್ವಿ.

ವಿಜಯಪುರದ ಬಸವನಬಾಗೇವಾಡಿಯ ನಿವಾಸಿಯಾದ ಪೃಥ್ವಿ ನಾಲ್ಕನೇ ತರಗತಿ ಓದುತ್ತಿದ್ದಾಳೆ. ಎಳೆವಯಸ್ಸಿನಲ್ಲೇ ದೊಡ್ಡ ಚಿಂತನೆಯಲ್ಲಿದ್ದಾಳೆ. ಸ್ವಚ್ಛ ಭಾರತ ಅಭಿಯಾನದ ಮಹತ್ವ ತಿಳಿದುಕೊಂಡಿದ್ದು, ಮನೆಗೊಂದು ಶೌಚಾಲಯದ ನಿರ್ಮಾಣದ ಪಣ ತೊಟ್ಟು ಅಭಿಯಾನವನ್ನೇ ಆರಂಭಿಸಿದ್ದಾಳೆ.

ಬಸವನಬಾಗೇವಾಡಿ ತಾಲೂಕಿನ ಗ್ರಾಮ ಪಂಚಾಯತ್ ಗಳ ಎದುರು ಜನರನ್ನು ಸೇರಿಸಿ ಶೌಚಾಲಯದ ಅವಶ್ಯಕತೆ, ಮಹತ್ವ ಸೇರಿದಂತೆ ಬಯಲು ಶೌಚದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸ್ತಿದ್ದಾಳೆ. ಸ್ವಚ್ಛ ಭಾರತದ ಅಭಿಯಾನದ ಅಡಿಯಲ್ಲಿ ಬರುವ ಎಲ್ಲಾ ಯೋಜನೆಗಳ ವಿವರಣೆ, ಶೌಚಾಲಯ ನಿರ್ಮಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡುವ ಅನುದಾನವನ್ನ ವಿವರಿಸಿ ಹೇಳ್ತಿದ್ದಾಳೆ.

ಪೃಥ್ವಿ ಮತ್ತವರ ಕುಟುಂಬಸ್ಥರು ಊರಿಗೆ ತೆರಳುವಾಗ ಇವರ ವಾಹನದ ಲೈಟ್ ನೋಡಿ ಬಯಲು ಶೌಚಕ್ಕೆ ಕುಳಿತಿದ್ದ ಮಹಿಳೆಯರು ಎದ್ದು ನಿಂತರಂತೆ. ಆಗ ಪೃಥ್ವಿ ತಾಯಿ ಅನಿತಾರನ್ನು ಹೀಗೇಕೆ ಅವರು ಎದ್ದು ನಿಂತರು ಅಂತ ಕೇಳಿದಳಂತೆ. ಅದಕ್ಕೆ ಮನೆಯಲ್ಲಿ ಶೌಚಾಲಯ ಇಲ್ಲದ ಕಾರಣ ಈ ರೀತಿ ಬಯಲು ಶೌಚಕ್ಕೆ ಜನರು ಬರುತ್ತಾರೆ ಅಂತ ತಾಯಿ ಅನಿತಾ ಹೇಳಿದ್ರಂತೆ. ಅಂದಿನಿಂದಲೇ ಶೌಚಾಲಯದ ಬಗ್ಗೆ ಅಭಿಯಾನ ಆರಂಭಿಸಲು ಪೃಥ್ವಿ ನಿರ್ಧರಿಸಿದ್ದಾಳೆ. ಬಾಲಕಿಯ ಈ ಕಾರ್ಯಕ್ಕೆ ಗ್ರಾಮ ಪಂಚಾಯ್ತಿ ಸದಸ್ಯರು ಶ್ಲಾಘನೆ ವ್ಯಕ್ತಪಡಿಸ್ತಿದ್ದಾರೆ.

ಒಟ್ಟಿನಲ್ಲಿ ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎಂಬಂತೆ ಪೃಥ್ವಿಯ ಈ ಅಭಿಯಾನಕ್ಕೆ ತಾಯಿ ಅನಿತಾ ಹಾಗೂ ಮಾವ ಜಗದೀಶ್ ಸಾಥ್ ನೀಡ್ತಿದ್ದಾರೆ.

https://www.youtube.com/watch?v=9M65KB9rYvA

Share This Article
Leave a Comment

Leave a Reply

Your email address will not be published. Required fields are marked *