ಬಿಎಸ್‍ವೈ ನಿವಾಸದಲ್ಲಿ ಮಾದಾರ ಚನ್ನಯ್ಯ ಸ್ವಾಮೀಜಿ ಊಟ ಮಾಡಿದ್ದಕ್ಕೆ ಪ್ರತಿಭಟನೆ

Public TV
1 Min Read

ತುಮಕೂರು: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನಿವಾಸದಲ್ಲಿ ದಲಿತ ಸಮುದಾಯದ ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಊಟ ಮಾಡಿದನ್ನು ಖಂಡಿಸಿ ಮಾದಿಗ ಜನಾಂದೋಲನ ಸಮಿತಿ ಪ್ರತಿಭಟನೆ ನಡೆಸಿದೆ.

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರಗತಿಪರ ಚಿಂತಕ ಸಾಹಿತಿ ಕೆಬಿ ಸಿದ್ದಯ್ಯ ನೇತೃತ್ವದಲ್ಲಿ ಮಾದಿಗ ಜನಾಂದೋಲನ ಸಮಿತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರ ನಡೆಯನ್ನು ಖಂಡಿಸಿ ಪ್ರತಿಭಟಿಸಿದೆ.

ಈ ವೇಳೆ ಮಾತನಾಡಿದ ಎಂದು ಸಾಹಿತಿ ಕೆಬಿ ಸಿದ್ದಯ್ಯ, ಕೋಮುವಾದಿ ಹಾಗೂ ದಲಿತ ವಿರೋಧಿ ಪಕ್ಷವಾಗಿರುವ ಬಿಜೆಪಿಗೆ ಮಾದಾರ ಚನ್ನಯ್ಯ ಸ್ವಾಮೀಜಿ ಬೆಂಬಲ ನೀಡುತ್ತಿರುವುದು ಸರಿಯಲ್ಲ. ಅಂಬೇಡ್ಕರ್ ಅವರ ತತ್ತ್ವ ಸಿದ್ಧಾಂತಗಳನ್ನು ಬಿಜೆಪಿ ಮರೆತಿದೆ. ದಲಿತರಿಗೆ ಮೀಸಲಾತಿ ನೀಡುವುದನ್ನೂ ಬಿಜೆಪಿ ವಿರೋಧಿಸುತ್ತಿದೆ ಎಂದು ಹೇಳುವ ಮೂಲಕ ವಾಗ್ದಾಳಿ ನಡೆಸಿದರು.

ಆಗಸ್ಟ್ 28ರಂದು ಬಿಎಸ್‍ವೈ ದಲಿತ ಸಮುದಾಯದವರಿಗೆ ತಮ್ಮ ಮನೆಯಲ್ಲಿ ಸೋಮವಾರ ಹಬ್ಬದೂಟ ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಮಾದಾರ ಚನ್ನಯ್ಯ ಸ್ವಾಮೀಜಿ ಕೂಡ ಉಪಸ್ಥಿತರಿದ್ದರು. ಚನ್ನಯ್ಯ ಸ್ವಾಮೀಜಿ ಮುಂದಿನ ವಿಧಾನಸಭಾ ಅಥವಾ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಬಿಎಸ್‍ವೈ ಅವರು ಸ್ವಾಮೀಜಿ ಅವರಲ್ಲಿ ಕಣಕ್ಕೆ ಇಳಿಯುವಂತೆ ಕೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಒಂದು ವೇಳೆ ಈ ಆಹ್ವಾನವನ್ನು ಒಪ್ಪಿದರೆ ಮಾದಾರ ಸ್ವಾಮೀಜಿ 2018ರ ವಿಧಾನಸಭಾ ಚುನಾವಣೆಯಲ್ಲಿ ಸದ್ಯ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಅವರು ಪ್ರತಿನಿಧಿಸುತ್ತಿರುವ ಹೊಳಲ್ಕೆರೆ ಕ್ಷೇತ್ರ ಅಥವಾ 2019ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಮೀಸಲು ಕ್ಷೇತ್ರದಿಂದ ಕಣಕ್ಕೆ ಇಳಿಸಲು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದರೆ ಎಂದು ಹೇಳಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *