ಕೋರ್ಟ್ ತಡೆಯಾಜ್ಞೆ ನೀಡಿದ್ರೂ ಕೆಜಿಎಫ್ ಬಿಡುಗಡೆಯಾಗಿದ್ದು ಹೇಗೆ? ಬ್ಲಾಕ್‍ಮೇಲ್ ತಂತ್ರವೇ?

Public TV
2 Min Read

ಬೆಂಗಳೂರು: ಕೋರ್ಟ್ ತಡೆಯಾಜ್ಞೆ ನೀಡುವ 15 ದಿನಗಳ ಮೊದಲೇ ಕೆಜಿಎಫ್ ಚಿತ್ರ ತಂಡ ಹೈಕೋರ್ಟ್ ನಿಂದ ಕೇವಿಯಟ್ ತಂದಿದ್ದ ಹಿನ್ನೆಲೆಯಲ್ಲಿ ಯಾವುದೇ ಅಡ್ಡಿಯಾಗದೇ ಚಿತ್ರ ಬಿಡುಗಡೆಯಾಗಿದೆ.

ರೌಡಿ ತಂಗಂ ಜೀವನದ ಕಥೆಯನ್ನು ಕೆಜಿಎಫ್ ಹೋಲುತ್ತಿದೆ. ಹೀಗಾಗಿ ಚಿತ್ರ ಬಿಡುಗಡೆಗೆ ತಡೆ ಕೋರಿ ರಾಜೇಶ್ವರಿ ಕಂಬೈನ್ಸ್ ಮಾಲೀಕರಾದ ವೆಂಕಟೇಶ್ ಜಿ  ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಮಾನ್ಯ ಮಾಡಿದ್ದ 10ನೇ ಸಿಟಿ ಸಿವಿಲ್ ಕೋರ್ಟ್ 2019ರ ಜನವರಿ 7ರವರೆಗೆ ಬಿಡುಗಡೆ ಮಾಡದಂತೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಆದರೆ ರೌಡಿ ತಂಗಂ ಕಥೆ ಅಲ್ಲದ ಕಾರಣ ಕೆಜಿಎಫ್ ಚಿತ್ರ ಬಿಡುಗಡೆಯಾಗಿದೆ.

ಕೇವಿಯಟ್ ತಂದಿದ್ದ ಚಿತ್ರ ತಂಡ:
ಭಾರತದಲ್ಲಿ ದೊಡ್ಡ ಬಜೆಟ್ ಚಿತ್ರ ಬಿಡುಗಡೆಯಾಗುವ ಮುನ್ನ ಅದಕ್ಕೆ ಸಾಕಷ್ಟು ಅಡ್ಡಿಯಾಗುವುದು ಈಗ ಸಾಮಾನ್ಯವಾಗಿಬಿಟ್ಟಿದೆ. ಈ ವಿಚಾರವನ್ನು ಮೊದಲೇ ಊಹಿಸಿದ್ದ ಕೆಜಿಎಫ್ ಚಿತ್ರತಂಡ ಮುನ್ನೆಚ್ಚರಿಕಾ ಕ್ರಮವಾಗಿ ಹೈಕೋರ್ಟ್ ನಿಂದ ಕೇವಿಯಟ್ ತಂದಿತ್ತು. ಇದರ ಜೊತೆಯಲ್ಲೇ ಕೋರ್ಟ್ ಆದೇಶ ಪ್ರಕಟಗೊಂಡಿದ್ದು ಶುಕ್ರವಾರ ಸಂಜೆ. ಕೋರ್ಟ್ ಆದೇಶದ ಪ್ರತಿ ನಮ್ಮ ಕೈ ಸೇರಿಲ್ಲ. ಹೀಗಾಗಿ ನಾವು ಚಿತ್ರವನ್ನು ಬಿಡುಗಡೆ ಮಾಡುತ್ತೇವೆ ಎಂದು ಹೊಂಬಾಳೆ ಫಿಲಂಸ್ ನಿಮಾರ್ಪಕ ವಿಜಯ್ ಕಿರಗಂದೂರ್ ಪ್ರತಿಕ್ರಿಯಿಸಿದ್ದರು.

ಸಿನಿಮಾವನ್ನು ಎಲ್ಲ ವಿತರಕರಿಗೆ ವಿತರಣೆ ಮಾಡಲಾಗಿದೆ. ಶುಕ್ರವಾರ ಬೆಳಗಿನ ಜಾವವೇ ಸಿನಿಮಾ ಬಿಡುಗಡೆಯಾಗಲು ಸಿದ್ಧವಾಗಿದೆ. ಅರ್ಜಿದಾರರಾದ ವೆಂಕಟೇಶ್ ಮತ್ತು ಆನಂದ್ ಎಂಬವರ ಪರಿಚಯವೇ ನನಗಿಲ್ಲ. ಸಿನಿಮಾ ನೋಡದೆಯೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರೋದು ತಪ್ಪು. ಈ ವಿಷಯದ ಬಗ್ಗೆ ಕೆಜಿಎಫ್ ಚಿತ್ರತಂಡಕ್ಕೆ ಗೊತ್ತಿಲ್ಲ. ಅಭಿಮಾನಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ನ್ಯಾಯಾಲಯಕ್ಕೆ ನಾವು ಗೌರವವನ್ನು ನೀಡುತ್ತೇವೆ. ನಿರ್ದೇಶಕ ಪ್ರಶಾಂತ್ ನೀಲ್ ಸಹ ರೌಡಿ ತಂಗಂ ಜೀವನಾಧರಿತ ಕಥೆ ಅಂತಾ ಹೇಳಿಲ್ಲ. ಈ ಬಗ್ಗೆ ಚಿತ್ರ ತಂಡದಲ್ಲಿ ಚರ್ಚೆಯೂ ನಡೆದಿಲ್ಲ. ಈ ಮೊದಲು ಅರ್ಜಿದಾರರು ಅಂತ ಹೇಳಿಕೊಳ್ಳುವ ವೆಂಕಟೇಶ್ ಮತ್ತು ಆನಂದ್ ನಮ್ಮನ್ನ ಸಂಪರ್ಕ ಮಾಡಿಲ್ಲ ಎಂದು ವಿಜಯ್ ಕಿರಗಂದೂರ್ ಹೇಳಿದ್ದರು.

ನಡೆ ಅಸ್ಪಷ್ಟ:
ದೂರುದಾರ ರಾಜೇಶ್ವರಿ ಕಂಬೈನ್ಸ್ ಮಾಲೀಕರಾದ ವೆಂಕಟೇಶ್ ಜಿ ನಡೆ ಅಸ್ಪಷ್ಟವಾಗಿದ್ದು, ಬೆಳಗ್ಗೆಯಿಂದ ಮಾಧ್ಯಮದವರ ಕೈಗೆ ಸಿಕ್ಕಿಲ್ಲ.

ಬ್ಲಾಕ್‍ಮೇಲ್ ತಂತ್ರ:
ಈ ಹಿಂದೆ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ನಿರ್ಮಿಸಿದ್ದ ರಜನಿಕಾಂತ್ ಅಭಿನಯದ `ಲಿಂಗ’ ಬಿಡುಗಡೆಯ ವೇಳೆ ಚಿತ್ರಕ್ಕೆ ಸಮಸ್ಯೆಯಾಗಿತ್ತು. ಈ ಸಂದರ್ಭದಲ್ಲಿ ವೆಂಕಟೇಶ್ ಸಂಜೆ ಕೋರ್ಟ್ ನಲ್ಲಿ 10 ಕೋಟಿ ರೂ. ಠೇವಣಿ ಇಟ್ಟು ಚಿತ್ರವನ್ನು ಬಿಡುಗಡೆ ಮಾಡಿದ್ದರು. ಸಿನಿಮಾ ಬಿಡುಗಡೆಯಾಗುವ ಕೊನೆಯ ಕ್ಷಣದಲ್ಲಿ ಕೋರ್ಟ್ ಮೂಲಕ ತಡೆಯಾಜ್ಞೆ ತರುವುದು ಬ್ಲ್ಯಾಕ್ ಮೇಲ್ ತಂತ್ರ. ದೂರು ಸಲ್ಲಿಸಿರುವ ನಿರ್ಮಾಪಕರು ಕಥೆ ಬಗ್ಗೆ ಸಮಸ್ಯೆ ಅಥವಾ ಗೊಂದಲವಿದ್ದರೆ ಚಿತ್ರತಂಡವನ್ನು ಸಂಪರ್ಕಿಸಬೇಕು ಎಂದು ರಾಕ್‍ಲೈನ್ ವೆಂಕಟೇಶ್ ಹೇಳಿದ್ದಾರೆ.

ಕೇವಿಯಟ್ ಎಂದರೇನು?
ನಮ್ಮ ಅಹವಾಲನ್ನು ಕೇಳದೇ ಯಾವುದೇ ಆದೇಶ ನೀಡಬೇಡಿ ಎಂದು ಕೋರ್ಟ್‍ಗೆ ಮನವಿ ಮಾಡುವುದನ್ನು ಕೇವಿಯಟ್ ಎನ್ನಲಾಗುತ್ತದೆ. ಒಂದು ವಿಚಾರದಲ್ಲಿ ಬೇರೊಬ್ಬರು ಅರ್ಜಿ ಸಲ್ಲಿಸಿದಾಕ್ಷಣ, ಅವರ ವಾದ ಕೇಳಿ ಯಾವ ಆದೇಶವನ್ನೂ ನೀಡಬಾರದು. ಅಲ್ಲದೇ ನಮ್ಮ ವಾದಕ್ಕೂ ಮನ್ನಣೆ ನೀಡಬೇಕು. ಆ ಬಳಿಕವಷ್ಟೇ ಆದೇಶ ಹೊರಡಿಸಿ ಎಂದು ಕೇಳಿಕೊಳ್ಳುವ ಮನವಿಯೇ ಕೇವಿಯಟ್. ಕೇವಿಯಟ್‍ಗೆ 90 ದಿನಗಳ ಕಾಲಾವಕಾಶ ಇರುತ್ತದೆ. ಕೇವಿಯಟ್ ಸಲ್ಲಿಸಿದವರು ಮರಣ ಹೊಂದಿದರೆ ಮಾತ್ರ ಅದು ಅನೂರ್ಜಿತವಾಗುತ್ತದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *