ಯೋಗಿ ಸರ್ಕಾರದ ವಿರುದ್ಧ ಪ್ರಿಯಾಂಕ ಗಾಂಧಿ ವಾಗ್ದಾಳಿ

Public TV
1 Min Read

ಲಕ್ನೋ: ರೈತರ ಆತ್ಮಹತ್ಯೆ ವಿಚಾರವಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದ ವಿರುದ್ಧ ಉತ್ತರ ಪ್ರದೇಶದ ಪೂರ್ವ ಕಾಂಗ್ರೆಸ್ ಉಸ್ತುವಾರಿ ಪ್ರಿಯಾಂಕ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಬುಂದೇಲ್‍ಖಂಡ್‍ನ ಬಂಡಾದಲ್ಲಿ ಐದು ದಿನಗಳಲ್ಲಿ ಒಟ್ಟು ಐವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಜುಲೈ 18ರಂದು ಮಾಧ್ಯಮವೊಂದು ವರದಿ ಪ್ರಸಾರ ಮಾಡಿತ್ತು. ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಪ್ರಿಯಾಂಕ ಗಾಂಧಿ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ರೈತರು ಬೆಳೆ ಬೆಳೆಯುತ್ತಾರೆ ಆದರೆ ಅದಕ್ಕೆ ಸೂಕ್ತ ಬೆಲೆ ಸಿಗುವುದಿಲ್ಲ. ಬರಗಾಲ ಉಂಟಾದರೆ ಪರಿಹಾರ ಸಿಗುವುದಿಲ್ಲ. ಸಾಲ ಪಾವತಿ ಮಾಡುವಂತೆ ನಿತ್ಯವೂ ಬುಂದೇಲ್‍ಖಂಡ್ ರೈತರಿಗೆ ಬೆದರಿಕೆ ಬರುತ್ತಿದೆ. ಇದು ಯಾವ ರೀತಿ ರೈತ ಪರ ಹಾಗೂ ಸಾಲಮನ್ನಾ ನೀತಿ ಎಂದು ಟ್ವೀಟ್ ಮೂಲಕ ಪ್ರಿಯಾಂಕ ಗಾಂಧಿ ಗುಡುಗಿದ್ದಾರೆ.

ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ ಯೋಗಿ ಆದಿತ್ಯವಾಥ್ ನೇತೃತ್ವದ ಸರ್ಕಾರವು ರಾಜ್ಯದ ರೈತರ ಸಾಲಮನ್ನಾ ಯೋಜನೆ ಕೈಗೆತ್ತಿಕೊಂಡಿದೆ. 2016ರ ಮಾರ್ಚ್ 31ರ ಅಂತ್ಯಕ್ಕೆ ಬ್ಯಾಂಕ್‍ಗಳಿಂದ ಪಡೆದ ಗರಿಷ್ಠ 1 ಲಕ್ಷ ರೂ.ವರೆಗಿನ ರೈತರ ಬೆಳೆ ಸಾಲವನ್ನು ಹಂತ ಹಂತವಾಗಿ ಮನ್ನಾ ಮಾಡುವ 32,000 ಕೋಟಿ ರೂ. ಮೊತ್ತದ ಯೋಜನೆ ಇದಾಗಿದೆ. ಈ ಸಂಬಂಧ 2017 ಸೆಪ್ಟೆಂಬರ್ ತಿಂಗಳು ಮೊದಲ ಹಂತದ 7,371 ಕೋಟಿ ಸರ್ಕಾರ ಬಿಡುಗಡೆ ಮಾಡಿತ್ತು.

ಕೆಲ ರೈತರಿಗೆ ಸಾಲಮನ್ನಾ ಯೋಜನೆ ಇನ್ನು ತಲುಪಿಲ್ಲ. ಇತ್ತ ಬ್ಯಾಂಕ್‍ನಿಂದ ನೋಟಿಸ್ ಬರುತ್ತಿರುವುದರಿಂದ ಬೇಸತ್ತ ಐವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *