ಪ್ರಧಾನಿ ಮೋದಿ ದುರ್ಯೋಧನ ಇದ್ದಂತೆ: ಪ್ರಿಯಾಂಕ ಗಾಂಧಿ

Public TV
1 Min Read

ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ನಂಬರ್ 1 ಭ್ರಷ್ಟರಾಗಿಯೇ ಪ್ರಾಣಬಿಟ್ಟರು ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಮಹಾಭಾರತ ಸನ್ನಿವೇಶದ ಮೂಲಕ ತಿರುಗೇಟು ನೀಡಿದ್ದಾರೆ.

ಹರ್ಯಾಣದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಭಾರತದ ನೆಲದಲ್ಲಿ ಅಹಂಕಾರದಿಂದ ನಡೆದುಕೊಳ್ಳುವ ವ್ಯಕ್ತಿಗಳಿಗೆ ತಕ್ಕ ಶಿಕ್ಷೆಯಾಗಿದೆ. ಮಹಾಭಾರತದಲ್ಲಿ ದುರ್ಯೋಧನ ಅಹಂಕಾರದಿಂದ ನಡೆದುಕೊಂಡ. ಕೃಷ್ಣ ಸಂಧಾನಕ್ಕೆ ಬಂದರೂ ಒಪ್ಪಲಿಲ್ಲ. ಕೊನೆಗೆ ದುರ್ಯೋಧನ ನಾಶವಾಗಿ ಹೋದ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ದುರ್ಯೋಧನ ಇದ್ದಂತೆ. ದುರ್ಯೋಧನ ರೀತಿಯಲ್ಲಿಯೇ ಮೋದಿಯವರು ಕೂಡ ಅಹಂಕಾರದಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮೋದಿ ಹೇಳಿದ್ದೇನು?:
ಉತ್ತರ ಪ್ರದೇಶದಲ್ಲಿ ಶನಿವಾರ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ನಿಮ್ಮ ತಂದೆ ನಂ. 1 ಭ್ರಷ್ಟರಾಗಿಯೇ ಪ್ರಾಣ ಬಿಟ್ಟರು ಎಂದು ರಾಹುಲ್ ಗಾಂಧಿ ಅವರನ್ನು ಟೀಕಿಸಿದ್ದರು.

ನನ್ನ ಚಾರಿತ್ರ್ಯವಧೆ ಮಾಡಲು ಪ್ರತಿಪಕ್ಷಗಳು ಒಂದಾಗಿವೆ. ನನ್ನನ್ನು ಸಣ್ಣವನಾಗಿ ಮಾಡುವ ಮೂಲಕ ದೇಶದಲ್ಲಿ ಅಸ್ಥಿರ ಸರ್ಕಾರವನ್ನು ರಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್, ಟಿಎಂಸಿ, ಎಸ್‍ಪಿ, ಬಿಎಸ್‍ಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ಹರ್ಯಾಣದ ಭಿವಾನಿಯ ಸಮಾವೇಶದಲ್ಲಿ ಮಾತನಾಡಿ, ಪ್ರಧಾನಿ ಮೋದಿಯವರು ಭ್ರಷ್ಟಾಚಾರ ಹಾಗೂ ನಿರುದ್ಯೋಗ ಕಿತ್ತುಹಾಕುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದರು. ಅವರು ಬಾಕ್ಸಿಂಗ್ ರಿಂಗ್ ಪ್ರವೇಶಿಸುತ್ತಿದ್ದಂತೆ ಕೋಚ್ ಅಡ್ವಾಣಿ ಜಿ, ನಿತೀನ್ ಗಡ್ಕರಿ ಹಾಗೂ ತಂಡದ ಸದಸ್ಯರಿದ್ದರು. ಈ ಮೂಲಕ ಮೊದಲ ಪಂಚ್ ಮೂಲಕ ಕೋಚ್ ಅಡ್ವಾಣಿ ಅವರನ್ನು ರಿಂಗ್‍ನಿಂದ ಹೊರಹಾಕಿದ್ದಾರೆ ಎಂದು ಲೇವಡಿ ಮಾಡಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಹಿರಿಯ ನಾಯಕರನ್ನು ಸೈಡ್‍ಲೈನ್ ಮಾಡುವ ಮೂಲಕ ಅವಮಾನ ಮಾಡಿದ್ದಾರೆ. ಬಾಕ್ಸರ್ ಮೋದಿ ಅವರು ಜಿಎಸ್‍ಟಿ ಮೂಲಕ ಸಣ್ಣ ವರ್ತಕರರನ್ನು ಚಚ್ಚಿದರು ಎಂದು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *