ಹಲ್ಲೆ ಪ್ರಕರಣ ಮುಚ್ಚಿ ಹಾಕಲು ಪ್ರಿಯಾಂಕ್ ಖರ್ಗೆ ಯತ್ನ – ಸುಳ್ಳು ಕೇಸ್‌ಗಳಿಗೆ ನಾವು ಭಯಪಡಲ್ಲ: ಮಣಿಕಂಠ್ ರಾಠೋಡ್

Public TV
2 Min Read

ಕಲಬುರಗಿ: ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರು ನನ್ನ ಮೇಲೆ ಸುಳ್ಳು ಕೇಸ್‌ಗಳನ್ನು ಹಾಕಿಸಿ, ನನ್ನ ಮೇಲೆ ಆಗಿರುವ ಹಲ್ಲೆ ಪ್ರಕರಣವನ್ನು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಒತ್ತಾಯಿಸಿ, ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಮಣಿಕಂಠ್ ರಾಠೋಡ್ (Manikanth Rathod) ಆರೋಪಿಸಿದ್ದಾರೆ.

ಗುರುವಾರ ಬೆಳಗ್ಗೆ ಪೊಲೀಸರ ವಶವಾಗುವುದಕ್ಕೂ ಮುನ್ನ ಸುದ್ದಿ ಪ್ರಕಟಣೆ ಹೊರಡಿಸಿದ ಅವರು, ನನ್ನ ಮೇಲೆ ಹಲ್ಲೆ ನಡೆದ ಪ್ರಕರಣವನ್ನು ತಾವು ಮುಚ್ಚಿ ಹಾಕಿದರು. ನಾವು ಎದೆಗುಂದುವುದಿಲ್ಲ. ಸತ್ಯಕ್ಕಾಗಿ ನ್ಯಾಯಾಲಯದಲ್ಲಿ ನ್ಯಾಯದ ಪರ ನನ್ನ ಹೋರಾಟ ಹೀಗೆ ಮುಂದುವರಿಸುತ್ತೇನೆ. ನಮಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಮೇಲೆ ಸಂಪೂರ್ಣ ಭರವಸೆ ಇದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ನಿನ್ನೆ ಬೆಳಗಾವಿಯಲ್ಲಿ ನನಗೆ ಥರ್ಡ್ ಕ್ಲಾಸ್ ವ್ಯಕ್ತಿ ಎಂದು ಟೀಕೆ ಮಾಡಿದ್ದಾರೆ. ಆದರೆ ಮಿಸ್ಟರ್ ಪ್ರಿಯಾಂಕ್ ಖರ್ಗೆ ಅವರೇ, ನಿಮಗೆ ಒಂದು ಮಾತು ಹೇಳಲು ಇಷ್ಟ ಪಡುತ್ತೇನೆ. ನಾವು ಥರ್ಡ್ ಕ್ಲಾಸ್ ಆಗಿದ್ದು ನಿಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಅವರ ದೊಡ್ಡ ಕೊಡುಗೆಯಾಗಿದೆ. ನಿಮ್ಮ ತಂದೆ 7 ಬಾರಿ ಗುರುಮಿಠಕಲ್ ಕ್ಷೇತ್ರದಿಂದ ಜನಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ. ನಾನು ಸಹ ಅದೇ ಗುರುಮಿಠಕಲ್ ಕ್ಷೇತ್ರದವನೇ ಎಂಬುದು ತಮ್ಮ ಗಮನಕ್ಕೆ ಇರಲಿ ಎಂದು ಹೇಳಿದರು. ಇದನ್ನೂ ಓದಿ: ಸುದ್ದಿಗೋಷ್ಠಿಗೆ ಮುನ್ನವೇ ಮಣಿಕಂಠ್ ರಾಠೋಡ್‌ನ ವಶಕ್ಕೆ ಪಡೆದ ಕಲಬುರಗಿ ಪೊಲೀಸರು

ನೀವು ಕರ್ನಾಟಕ ರಾಜ್ಯದ ಒಬ್ಬ ಮಂತ್ರಿಯಾಗಿ, ತಮ್ಮದೇ ಚಿತ್ತಾಪುರ ಕ್ಷೇತ್ರದಲ್ಲಿ ಗುಂಡಗುರ್ತಿ ಗ್ರಾಮದ ಶಾಲಾ ಮಕ್ಕಳಿಗೆ ಸರಿಯಾದ ಆಹಾರ ಸಿಗುತ್ತಿಲ್ಲ ಎಂದು ತಮ್ಮದೇ ಕಾಂಗ್ರೆಸ್ ಪಕ್ಷದ ನಾಯಕರು ಟೀಕೆ ಮಾಡುತ್ತಿದ್ದಾರೆ. ಅದರಂತೆ ಎಂಎಸ್‌ಪಿಸಿ ಯೋಜನೆಯಡಿ ಆಹಾರ ಧಾನ್ಯಗಳ ವಿತರಣೆಯಲ್ಲಿ ನಿಮ್ಮ ಕಾರ್ಯಕರ್ತರನ್ನೇ ಲೂಟಿ ಹೊಡೆಯಲು ಬಿಟ್ಟಿದ್ದೀರಾ. ಹೀಗಾಗಿ ತಾವು ರಾಜ್ಯದ ಜನರ ಸೇವೆ ಮಾಡಿ ಯಶಸ್ವಿಯಾಗಿ. ತದನಂತರ ಬೇರೆಯವರಿಗೆ ಟೀಕೆ ಮಾಡಲು ಮುಂದೆ ಬನ್ನಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿಮ್ಮ ಕ್ಷೇತ್ರದಲ್ಲಿ ನಿಮ್ಮ ಎದುರಾಳಿಯಾಗಿ ನಾನು ಬೆಳೆಯುತ್ತಿರುವುದು ನಿಮಗೆ ಸಹಿಸಲಾಗದ ಕಾರಣಕ್ಕೆ ಭಯ ಉಂಟಾಗಿದೆ. ಹೀಗಾಗಿ ಮಣಿಕಂಠ್ ರಾಠೋಡ್ ಎದುರಾಳಿಯಾಗಿ ಬೆಳೆಯಬಾರದು ಎಂಬ ಕಾರಣಕ್ಕಾಗಿ ನಮ್ಮ ಮೇಲೆ ಸುಳ್ಳು ಕೇಸ್ ಹಾಕಿಸುತ್ತಿದ್ದೀರಾ. ನಮಗೆ ನೀತಿ ಪಾಠ ಹೇಳುವುದನ್ನು ಬಿಟ್ಟು, ಪಂಚ ರಾಜ್ಯಗಳ ಚುನಾವಣೆಯಲ್ಲಿ ನಿಮ್ಮ ಪಕ್ಷ ಪಾತಾಳಕ್ಕೆ ಕುಸಿದಿರುವ ಬಗ್ಗೆ ಚಿಂತನೆ ಮಾಡಿ ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ಪ್ರಮಾಣವಚನ ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಪ್ರಮುಖ ಭರವಸೆ ಈಡೇರಿಸಿದ ಸಿಎಂ ರೇವಂತ್ ರೆಡ್ಡಿ

Share This Article