ಬೈಕ್ ತಪ್ಪಿಸಲು ಹೋಗಿ ಗದ್ದೆಗೆ ಉರುಳಿದ ಬಸ್- ಹಲವರಿಗೆ ಗಾಯ, ಮಹಿಳೆ ಗಂಭೀರ

Public TV
1 Min Read

ಹಾಸನ: ಮಂಡ್ಯದ ಕನಗನಮರಡಿ ದುರಂತ ಮರೆಯುವ ಮುನ್ನವೇ ಅಂತಹದ್ದೇ ಘಟನೆಯೊಂದು ಹಾಸನದಲ್ಲಿ ನಡೆದಿದ್ದು, ಭಾರೀ ಅವಘಡವೊಂದು ತಪ್ಪಿದಂತಾಗಿದೆ. ಬೈಕ್ ತಪ್ಪಿಸಲು ಹೋಗಿ ಖಾಸಗಿ ಬಸ್ ಗದ್ದೆಗೆ ಉರುಳಿದ ಘಟನೆ ಜಿಲ್ಲೆಯ ಅರಕಲಗೂಡು ತಾಲೂಕಿನ ಹುಳ್ಳೇನಹಳ್ಳಿ ಬಳಿ ನಡೆದಿದೆ.

ಕೊಡಗು ಜಿಲ್ಲೆಯ ಗದ್ದೆಹೊಸೂರು ಗ್ರಾಮದಿಂದ ಸಂಬಂಧಿಗಳು ಹಾಸನ ಜಿಲ್ಲೆಯ ಗೊರೂರು ಪಟ್ಟಣಕ್ಕೆ ಬೀಗರ ಔತಣಕೂಟಕ್ಕೆ ಬಸ್ ನಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಎದುರಿನಿಂದ ಬರುತ್ತಿರುವ ಬೈಕ್ ತಪ್ಪಿಸಲು ಹೋಗಿ ಬಸ್ ನೇರವಾಗಿ ಗದ್ದೆಗೆ ಉರುಳಿದೆ. ಪರಿಣಾಮ ಬಸ್ ನಲ್ಲಿದ್ದ ಸುಮಾರು 8 ಮಂದಿಗೆ ಗಾಯಗಳಾಗಿದ್ದು, ಅದರಲ್ಲಿ 55 ವರ್ಷದ ಗಂಗಮ್ಮ ಎಂಬವರ ಸ್ಥಿತಿ ಗಂಭೀರವಾಗಿದೆ.

ಸದ್ಯ ಗಾಯಾಳುಗಳನ್ನು ಅರಕಲಗೂಡು, ಹಾಸನ ಮತ್ತು ಕೊಣನೂರು ಆಸ್ಪತ್ರೆಗಳಿಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ದ್ವಿಚಕ್ರ ಸವಾರನಿಗೂ ಸಹ ಅಲ್ಪ ಪ್ರಮಾಣದ ಗಾಯಗಳಾಗಿದ್ದು ಸುರಕ್ಷಿತವಾಗಿದ್ದಾನೆ. ಬಸ್ಸಿನಲ್ಲಿ ಒಟ್ಟು 35 ಮಂದಿಯಿದ್ದರು ಎಂಬುದಾಗಿ ತಿಳಿದುಬಂದಿದೆ.

ಅಪಘಾತ ಸ್ಥಳದಿಂದ ಕೊಂಚ ದೂರದಲ್ಲಿ ನೀರಿನ ಕಾಲುವೆಯಿದೆ. ಆದ್ರೆ ಅದೃಷ್ಟವಶಾತ್ ಹೆಚ್ಚಿನ ಅಪಾಯವಾಗಿಲ್ಲ. ಇದರಿಂದಾಗಿ ಪ್ರಯಾಣಿಕರು ನಿಟ್ಟಿಸಿರು ಬಿಟ್ಟಿದ್ದಾರೆ. ಕೊಣನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಅಪಘಾತಕ್ಕೀಡಾದ ಬಸ್ಸನ್ನು ಸ್ಥಳದಿಂದ ತೆರವುಗೊಳಿಸಲಾಗುತ್ತಿದೆ.

ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *