ಹೆಸರಿಗೆ ಖಾಸಗಿ ಬಸ್ ಚಾಲಕ- ಬೀದಿನಾಯಿ, ಕೋತಿಗಳ ಪಾಲಿನ ಅನ್ನದಾತ ಕೋಲಾರದ ಮನೋಹರ್ ಲಾಲ್

Public TV
1 Min Read

ಕೋಲಾರ: ಬರದ ನಾಡು ಕೋಲಾರ ಜಿಲ್ಲೆಯಲ್ಲಿ ಹನಿ ನೀರಿಗೂ ಪ್ರಾಣಿ, ಪಕ್ಷಿಗಳು ಪರದಾಡುವ ಪರಿಸ್ಥಿತಿ. ಇಂತದ್ರಲ್ಲಿ ಇಲ್ಲೊಬ್ರು ಪ್ರತಿದಿನ ಮುಂಜಾನೆ ನೂರಾರು ನಾಯಿ-ಕೋತಿಗಳಿಗೆ ಹಾಲು, ಬ್ರೆಡ್, ಬಾಳೆ ಹಣ್ಣುಗಳನ್ನ ನೀಡುತ್ತಾ ಪ್ರಾಣಿಗಳ ಆರೈಕೆಯಲ್ಲಿ ತೊಡಗಿದ್ದಾರೆ.

ಹೌದು. ಕೋಲಾರದ ಕೆಜಿಎಫ್‍ನ ರಾಬರ್ಟ್ ಸನ್ ಪೇಟೆಯ ನಿವಾಸಿ ಮನೋಹರ್ ಲಾಲ್ ವೃತ್ತಿಯಲ್ಲಿ ಖಾಸಗಿ ಬಸ್ ಚಾಲಕ. ಪ್ರವೃತ್ತಿಯಲ್ಲಿ ಪ್ರಾಣಿಪ್ರೇಮಿಯಾಗಿದ್ದಾರೆ. ಬೀದಿನಾಯಿಗಳಿಗೆ ಹಾಗೂ ಕೋತಿಗಳಿಗೆ ಬ್ರೆಡ್, ಬಾಳೆಹಣ್ಣು ನೀಡುತ್ತಿದ್ದಾರೆ.

ಶ್ವಾನಗಳು ಅಂದ್ರೆ ಇವ್ರಿಗೆ ಎಲ್ಲಿಲ್ಲದ ಪ್ರೀತಿ. ತಾನು ದುಡಿದ ಅರ್ಧ ಹಣವನ್ನ ಮೂಕ ಜೀವಗಳಿಗೆ ಮೀಸಲಿಡ್ತಾರೆ. ನಿತ್ಯ ಬೆಳಗ್ಗೆ ಆಟೋದಲ್ಲಿ ಹಾಲು, ಬಾಳೆಹಣ್ಣು, ಬ್ರೆಡ್‍ಗಳನ್ನ ತುಂಬಿಸಿಕೊಂಡು ನಗರದ ಮೂಲೆ ಮೂಲೆ ಸುತ್ತಿ ನಾಯಿಗಳಿಗೆ ಪ್ರೀತಿಯಿಂದ ನೀಡ್ತಾರೆ. ಕಳೆದ 30 ವರ್ಷಗಳಿಂದ ಮನೋಹರ್ ಲಾಲ್ ಬೀದಿನಾಯಿಗಳ ರಕ್ಷಕನಾಗಿ ಕೆಲಸ ನಿರ್ವಹಿಸ್ತಿದ್ದಾರೆ. ಕೋತಿಗಳಿಗೂ ಆಹಾರ ನೀಡ್ತಾರೆ.

ಅಲ್ಲದೇ ನಾಯಿಗಳಿಗೆ ರೋಗ ಬಂದ್ರೂ ಇವರೇ ಟ್ರೀಟ್‍ಮೆಂಟ್ ನೀಡ್ತಾರೆ. ಆಹಾರದ ಜೊತೆ ಔಷಧವನ್ನು ನಾಯಿಗಳಿಗೆ ನೀಡ್ತಾರೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸ್ತಾರೆ. ಮನೋಹರ್ ಲಾಲ್ ಅವರ ಕೊನೆಯ ಮಗ ಕೊನೆಯುಸಿರೆಳೆದ ನಂತರ ನಾಯಿ ಮತ್ತು ಕೋತಿಗಳ ಮೇಲೆ ಅಪಾರ ಪ್ರೀತಿ ಬೆಳೆಸಿಕೊಂಡಿದ್ದಾರೆ. ಅವುಗಳನ್ನು ಪುಟ್ಟ ಮಕ್ಕಳಂತೆ ನೋಡಿಕೊಳ್ತಿದ್ದಾರೆ.

ಒಟ್ಟಾರೆ ಮಕ್ಕಳನ್ನೇ ಸಾಕಿ ಸಲಹೋದು ಕಷ್ಟ. ಇಂತಹ ದಿನದಲ್ಲೂ ಬೀದಿನಾಯಿಗಳನ್ನು ಹೆತ್ತಮಕ್ಕಳಂತೆ ಸಾಕ್ತಿರೋ ಮನೋಹರ್ ಲಾಲ್ ಅವರ ಈ ಪ್ರಾಣಿ ಪ್ರೀತಿ ಮೆಚ್ಚುವಂತದ್ದು.

Share This Article
Leave a Comment

Leave a Reply

Your email address will not be published. Required fields are marked *