ಜಾಮೀನು ಮಂಜೂರಾಗಿದ್ದರೂ ಕಾರಾಗೃಹದಲ್ಲಿ ಕೈದಿ ನೇಣಿಗೆ ಶರಣು

Public TV
2 Min Read

ಗದಗ: ವಿಚಾರಣಾಧೀನ ಕೈದಿ, ಜೊತೆಗಿದ್ದವರ ಟವೆಲ್ ಮೂಲಕ ಜೈಲು ಕಿಟಕಿ ಸರಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.

ತಾಲೂಕಿನ ಅಡವಿ ಸೋಮಾಪೂರ ತಾಂಡ ನಿವಾಸಿ ರಾಜು ಲಮಾಣಿ (19) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಆರೋಪಿ ವಿರುದ್ಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 2022ರ ಮಾರ್ಚ್ 4 ರಂದು ಪೋಕ್ಸೋ ಕೇಸ್ ದಾಖಲಾಗಿತ್ತು. ರಾಜು ಅದೇ ಗ್ರಾಮದ ಅಪ್ರಾಪ್ತೆಯನ್ನ ಪ್ರೀತಿಸಿದ್ದ. ಆಕೆ ಪ್ರಥಮ ಪಿಯುಸಿ ಓದುತ್ತಿದ್ದು, ಈತ ದ್ವಿತೀಯ ಪಿಯುಸಿ ಓದುತ್ತಿದ್ದ. ಇಬ್ಬರು ನಿತ್ಯ ಜೊತೆಗೆ ಕಾಲೇಜ್‍ಗೆ ಹೋಗುತ್ತಿದ್ದರು. ಆದರೆ ಇತ್ತೀಚಿಗೆ ಇಬ್ಬರು ಕಾಣೆಯಾಗಿದ್ದರು. ಇದನ್ನೂ ಓದಿ: ನದಿಗೆ ಹಾರಿ ಅರಣ್ಯಾಧಿಕಾರಿ ಆತ್ಮಹತ್ಯೆ? 

ಹುಡುಗಿ ಕಾಣೆಯಾಗಿದ್ದಾಳೆಂದು ಪಾಲಕರು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಾದ 8 ದಿನಗಳ ಬಳಿಕ ಸಿಕ್ಕ ಹುಡುಗಿಯನ್ನು ಗ್ರಾಮೀಣ ಪೊಲೀಸ್ ಠಾಣೆಗೆ ಕರೆತಂದು ಹೇಳಿಕೆಯನ್ನು ದಾಖಲಿಸಿದ್ದಾರೆ. ಈ ಹೇಳಿಕೆಯಲ್ಲಿ, ರಾಜು, ನಾನು ಬೆಂಗಳೂರು, ಗೋವಾ ಹೋಗಿದ್ವಿ. ಹೋದಲ್ಲೆಲ್ಲಾ ಜೊತೆಗಿದ್ವಿ’ ಎಂದು ಹೇಳಿದ್ಲಂತೆ. ಹೀಗಾಗಿ ಪೋಕ್ಸೋ ಕೇಸ್ ದಾಖಲು ಮಾಡಲಾಗಿದೆ.

ನ್ಯಾಯಾಧೀಶರ ಎದುರು ನಾನು ಗೆಳತಿಯರೊಂದಿಗೆ ಊರಿಗೆ ಹೋಗಿದ್ದೆ ಎಂದು ಮಾತು ಬದಲಿಸಿದ್ದಳು. ರಾಜು ಪಿಯುಸಿ ವಿದ್ಯಾರ್ಥಿಯಾಗಿದ್ದು, ಪರೀಕ್ಷೆ ಬರೆಯಬೇಕಿದೆ. ಆರೋಪಿಯ ವಿರುದ್ಧ ಯಾವುದೇ ಗಂಭೀರ ಆರೋಪವಿಲ್ಲ. ಇದೊಂದು ಸುಳ್ಳು ಪ್ರಕರಣವಾಗಿದೆ ಎಂದು ವಾದ ಮಂಡಿಸಿ ಜಾಮೀನಿಗೆ ಅರ್ಜಿಸಲ್ಲಿಸಲಾಗಿತ್ತು.

ಮಂಜೂರಾಗಿತ್ತು ಜಾಮೀನು
ಗುರುವಾರ ಮಧ್ಯಾಹ್ನ 5.25ಕ್ಕೆ ಜಾಮೀನು ಸಿಕ್ಕಿತ್ತು. ಆದರೆ, ನಿನ್ನೆ ನ್ಯಾಯಾಲಯದ ಸಮಯ ಮುಗಿದಿದ್ದರಿಂದ ಕಾರಾಗೃಹಕ್ಕೆ ಮಾಹಿತಿ ಬಂದಿರಲಿಲ್ಲ. ಆದ್ರೆ ಆರೋಪಿ ಪರ ವಕೀಲ ಎಮ್.ಎ.ಮೌಲ್ವಿ ಕಾರಾಗೃಹದ ಲ್ಯಾಂಡ್ ಲೈನ್‍ಗೆ ಕರೆ ಮಾಡಿ ಮಾಹಿತಿ ನೀಡಲು ಪ್ರಯತ್ನಿಸಿದ್ದರು. ಆದ್ರೆ ರಿಂಗ್ ಆದರೂ ಫೋನ್ ಕರೆ ಯಾರೂ ಸ್ವಿಕರಿಸಿರಲಿಲ್ಲ. ಹೀಗಾಗಿ ಜಾಮೀನು ವಿಷಯ ರಾಜುವರೆಗೆ ಮುಟ್ಟಿರಲಿಲ್ಲ. ಜಾಮೀನು ಸಿಕ್ಕ ವಿಚಾರ ಸಮಯಕ್ಕೆ ಸರಿಯಾಗಿ ಸಿಕ್ಕಿದ್ದರೆ ರಾಜು ಆತ್ಮಹತ್ಯೆಯ ನಿರ್ಧಾರ ಮಾಡ್ತಿರಲಿಲ್ಲ ಅನಿಸುತ್ತೆ.

ಖಿನ್ನತೆಯಿಂದ ಕೃತ್ಯ
ಕೇಸ್‍ನಿಂದಾಗಿ ಜೀವನ ಹಾಳಾಯ್ತು ಅನ್ನೋ ಖಿನ್ನತೆಯಲ್ಲಿ ರಾಜು ಇಂತಹ ಕೃತ್ಯಕ್ಕೆ ಮುಂದಾಗಿದ್ದಾನೆ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಆದ್ರೆ ಇತ್ತೀಗೆ ಕಾರಾಗೃಹಕ್ಕೆ ಕೇಸ್ ದಾಖಲಿಸಿದ ಸಂತ್ರಸ್ತೆ, ಪಾಲಕರೊಂದಿಗೆ ಬಂದು ಆರೋಪಿ ರಾಜುನನ್ನು ಭೇಟಿಯಾಗಿ ಹೋಗಿದ್ದಳು. ಇದನ್ನೂ ಓದಿ: ಭುವನ ಸುಂದರಿ ಶ್ರೀದೇವಿ ಮಗಳು ಈಗ ಬ್ಯಾಕ್‍ಲೆಸ್ ಸುಂದರಿ 

ಇಬ್ಬರ ನಡುವೆ ಏನು ಮಾತುಕತೆ ನಡೆದಿದೆಯೋ ಗೊತ್ತಿಲ್ಲ. ಇದರ ಹಿಂದೆ ಏನೋ ವಿಷಯ ಅಡಗಿದೆ. ತನಿಖೆ ಮಾಡಿಸಿ ಎಂಬ ಆರೋಪ ಮೃತನ ಕುಟುಂಬಸ್ಥರದ್ದಾಗಿದೆ. ಜೊತೆಗೆ ಜೈಲು ಅಧಿಕಾರಿಗಳು ಜಾಮೀನು ಮಂಜೂರಾಗಿರುವ ವಿಷಯ ತಿಳಿಸುವಲ್ಲಿ ವಿಫಲರಾಗಿದ್ದಾರೆ. ಅಲ್ಲದೇ ರಾಜು ನೇಣಿಗೆ ಶರಣಾದ್ರೂ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಪೊಲೀಸ್ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *