ಪತ್ನಿ ತಲೆ ಕಡಿದಿದ್ದವ ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ!

Public TV
1 Min Read

ಚಿಕ್ಕಮಗಳೂರು: ಪತ್ನಿ ತಲೆ ಕಡಿದು ಜೈಲು ಸೇರಿದ್ದ ಕೈದಿಯೊಬ್ಬ ಮನನೊಂದು ಜೈಲಿನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.

ಸತೀಶ್ ಕುತ್ತಿಗೆಗೆ ವುಲ್ಲನ್ ಸ್ವೆಟರ್ ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಪತ್ನಿಯ ಅನೈತಿಕ ಸಂಬಂಧದಿಂದ ಬೇಸತ್ತು ಸತೀಶ್ ಆಕೆಯನ್ನು ಕೊಲೆ ಮಾಡಿದ್ದನು. ಸೆಪ್ಟೆಂಬರ್ 9ರಂದು ಪತ್ನಿ ರೂಪಳ ತಲೆ ಕಡಿದು ಠಾಣೆಗೆ ತಂದಿದ್ದನು. ಆದರೆ ಅದೆನಾಯ್ತೋ ಗೊತ್ತಿಲ್ಲ ಸೋಮವಾರ ಜೈಲಿನಲ್ಲೇ ಸತೀಶ್ ಆತ್ಮಹತ್ಯೆಗೆ ಯತ್ನಿಸಿದ್ದು, ಜೈಲು ಅಧಿಕಾರಿಗಳು ಸತೀಶನನ್ನು ರಕ್ಷಿಸಿದ್ದಾರೆ.

ಸದ್ಯ ಸತೀಶ್ ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹೆಚ್ಚಿನ ಚಿಕಿತ್ಸೆಗೆ ಬಿಗಿ ಭದ್ರತೆಯಲ್ಲಿ ಸತೀಶ್‍ನನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಏನಿದು ಘಟನೆ?
ಸತೀಶ್ ತನ್ನ ಪತ್ನಿ ರೂಪಳ ಅಕ್ರಮ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ಆಕೆಯನ್ನು ಕೊಲೆ ಮಾಡಿ ತಲೆಯನ್ನು ಪೊಲೀಸ್ ಠಾಣೆಗೆ ತಂದು ಶರಣಾಗಿದ್ದನು. ಸತೀಶ್ ಮತ್ತು ರೂಪ ಐದು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಆದರೆ ರೂಪ ಅದೇ ಗ್ರಾಮದಲ್ಲಿ ಸುನೀಲ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಸತೀಶ್ ಅನುಮಾನ ಪಟ್ಟಿದ್ದನು. ರೂಪ ಹಾಗೂ ಸುನೀಲ್ ಇಬ್ಬರು ಒಟ್ಟಿಗೆ ಇದ್ದರು ಎಂದು ಶಂಕಿಸಿ ಕೋಪಗೊಂಡು ಆಕ್ರೋಶದಿಂದ ಕತ್ತಿಯಿಂದ ಹೆಂಡತಿಯ ತಲೆ ಕತ್ತರಿಸಿದ್ದನು.

ಬಳಿಕ ತನ್ನ ಪತ್ನಿಯ ತಲೆಯನ್ನು ಬ್ಯಾಗಿನಲ್ಲಿಟ್ಟುಕೊಂಡು ಸುಮಾರು 20 ಕಿ.ಮೀ. ವರೆಗೂ ಬಸ್ ಸಂಚಾರ ಮಾಡಿ ಶಿವನಿ ರೈಲ್ವೆ ಸ್ಟೇಷನ್‍ನಿಂದ ಅಜ್ಜಂಪುರ ಠಾಣೆಗೆ ಕತ್ತಿ ಹಾಗೂ ತಲೆ ಎರಡನ್ನೂ ತಂದು ಸತೀಶ್ ಶರಣಾಗಿದ್ದನು. ಅಷ್ಟೇ ಅಲ್ಲದೆ ನನಗೆ ಯಾವ ಶಿಕ್ಷೆ ಕೊಡಬೇಕೋ ಕೊಡಿ, ಆದರೆ ಜೈಲಿನಿಂದ ಬಿಡುಗಡೆಯಾದ ನಂತರ ಆತನನ್ನು ಹುಡುಕಿ ಕೊಲೆ ಮಾಡಿ ಮತ್ತೆ ಬರುತ್ತೇನೆ ಎಂದು ಹೇಳಿದ್ದನು ಅಂತ ಪೊಲೀಸರು ತಿಳಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *