ಬಿಡುಗಡೆಯಾದ ಕೆಲವೇ ದಿನದಲ್ಲಿ ಮತ್ತೆ ಜೈಲು ಪಾಲಾದ ಕಳ್ಳರು

Public TV
1 Min Read

ಚಾಮರಾಜನಗರ: ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ ಇಬ್ಬರು ಖದೀಮರು ಕಳ್ಳತನಗಳನ್ನು ಮಾಡಿ ಕೆಲವೇ ದಿನಗಳಲ್ಲಿ ಮತ್ತೆ ಜೈಲು ಪಾಲಾಗಿದ್ದಾರೆ.

ಶಿವು (29) ಮತ್ತು ಶ್ರೀನಿವಾಸ್ (46) ಬಂಧಿತ ಕಳ್ಳರು. ಶಿವು ಕಳೆದ ಎರಡು ತಿಂಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಶ್ರೀನಿವಾಸ್ ಸಹ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ. ಜೈಲಿನಲ್ಲೇ ಇಬ್ಬರ ಪರಿಚಯವಾಗಿತ್ತು ಎನ್ನಲಾಗಿದೆ. ಇಬ್ಬರು ಹೊರ ಬಂದ ನಂತರ ನಗರದ ಆದರ್ಶ ಬಡಾವಣೆ ನಿವಾಸಿ ಪಶು ವೈದ್ಯ ನಿರೀಕ್ಷಕ ಗುರುಲಿಂಗಯ್ಯ ಮನೆಗೆ ಕನ್ನ ಹಾಕಿ ಚಿನ್ನದ ಒಡವೆಗಳನ್ನು ದೋಚಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಟೌನ್ ಪೊಲೀಸರು ಸ್ಥಳಕ್ಕೆ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಯಿಸಿ ಪರಿಶೀಲನೆ ನಡೆಸಿದ್ದರು. ಬಳಿಕ ತನಿಖೆ ನಡೆಸಿದಾಗ ಆರೋಪಿಗಳ ಫಿಂಗರ್ ಪ್ರಿಂಟ್ ಹೊಂದಾಣಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಟೌನ್ ಪಿಎಸ್‍ಐ ಜೆ.ರಾಜೇಂದ್ರ ಅವರು ಇಬ್ಬರು ಆರೋಪಿಗಳನ್ನು ಬಂಧಿಸಿ ಸಂಪೂರ್ಣ ವಿಚಾರಣೆ ನಡೆಸಿದ್ದಾರೆ.

ಈ ವೇಳೆ ಕಳ್ಳತನ ಮಾಡಿದ್ದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಅಲ್ಲದೇ ಬಂಧಿತರಿಂದ 60 ಗ್ರಾಂ ತೂಕದ ಚಿನ್ನದ ನೆಕ್ಲೆಸ್, ಎರಡು ಚಿನ್ನದ ಬಳೆ ಹಾಗೂ ಓಲೆಗಳನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿ ಶಿವು ಈ ಹಿಂದೆ ಕೊಳ್ಳೇಗಾಲ, ಗುಂಡ್ಲುಪೇಟೆ, ಮದ್ದೂರು, ಬಿಡದಿ, ಚನ್ನರಾಯಪಟ್ಟಣ ಸೇರಿದಂತೆ ಹಲವು ಕಡೆಗಳಲ್ಲಿ ಹಲವಾರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *