ಇಂದು ರಾತ್ರಿವರೆಗೆ ಮಂಜುನಾಥನ ದರ್ಶನಕ್ಕೆ ಅವಕಾಶ-ಶ್ರೀಕ್ಷೇತ್ರದಲ್ಲಿ ಕಂಡುಕೇಳರಿಯದ ಭದ್ರತೆ

Public TV
1 Min Read

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ಭಾನುವಾರ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಜುನಾಥನ ಕ್ಷೇತ್ರದಲ್ಲಿ ಕಂಡುಕೇಳರಿಯದ ಬಿಗಿ ಭದ್ರತೆಗಳನ್ನು ಕೈಗೊಳ್ಳಲಾಗಿದೆಯಾದರೂ ಭಕ್ತಾದಿಗಳ ಅನುಕೂಲಕ್ಕಾಗಿ ಇಂದು ರಾತ್ರಿ 9 ಗಂಟೆಯವರೆಗೆ ಸ್ವಾಮಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಮೋದಿ ಆಗಮನ ಹಿನ್ನೆಲೆಯಲ್ಲಿ ನಾಳೆ ಮಧ್ಯಾಹ್ನ 2 ಗಂಟೆಯವರೆಗೂ ಭಕ್ತಾದಿಗಳಿಗೆ ದರ್ಶನ ಭಾಗ್ಯ ಇರಲ್ಲ. ನಾಳೆ ಬೆಳಗ್ಗೆ 9 ಗಂಟೆಗೆ ಧರ್ಮಸ್ಥಳಕ್ಕೆ ಬರಲಿರುವ ಪ್ರಧಾನಿ ಅಲ್ಲಿಂದ ಮಧ್ಯಾಹ್ನ 1 ಗಂಟೆಗೆ ಹೊರಡಲಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳ ನವವಧುವಿನಂತೆ ಶೃಂಗಾರಗೊಂಡಿದ್ದು, ಪ್ರಧಾನಿ ಸ್ವಾಗತಕ್ಕೆ ಕಾತರಗೊಂಡಿದೆ.

ಭದ್ರತಾ ದೃಷ್ಟಿಯಿಂದಾಗಿ ನಾಳೆ ಬೆಳಗ್ಗೆ 9 ಗಂಟೆ ಬಳಿಕ ಧರ್ಮಸ್ಥಳ-ಉಜಿರೆ-ಕೊಕ್ಕಡ ನಡುವಿನ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಚಾರ್ಮಾಡಿ, ಮಂಗಳೂರು ಕಡೆಯಿಂದ ಬರುವ ರಸ್ತೆಗಳು ಮುಕ್ತವಾಗಿರುತ್ತವೆ. ಸಮಾರಂಭ ನಡೆಯುವ ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣಕ್ಕೆ ಬೆಳಗ್ಗೆ 10.30ರೊಳಗೆ ಸಾರ್ವಜನಿಕರು ಬಂದು ಪ್ರವೇಶಿಸಿಬಹುದು. ನೀರಿನ ಬಾಟಲ್ ಮತ್ತು ಚೀಲಗಳನ್ನು ನಿಷೇಧಿಸಲಾಗಿದೆ.

ಪ್ರಧಾನಿಯವರ ಬಳಕೆಗಾಗಿ ವಿಶೇಷ ವಾಯುಸೇನಾ ವಿಮಾನದಲ್ಲಿ ಗುಂಡು ನಿರೋಧಕ ಐಷಾರಾಮಿ ಕಾರನ್ನು ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣಕ್ಕೆ ತರಲಾಗಿದೆ. ನಾಳೆ ಬೆಳಗ್ಗೆ ಈ ಕಾರು ಧರ್ಮಸ್ಥಳ ತಲುಪಲಿದೆ. ಉಜಿರೆ ಹೆಲಿಪ್ಯಾಡ್‍ನಿಂದ ಧರ್ಮಸ್ಥಳ ದೇವಸ್ಥಾನ, ಉಜಿರೆಯ ಸ್ಟೇಡಿಯಂನಲ್ಲಿ ಕಾರ್ಯಕ್ರಮ ಮುಗಿಸಿ ಹೆಲಿಪ್ಯಾಡ್ ಹಿಂದಿರುಗುವವರೆಗೆ ಈ ಕಾರನ್ನೇ ಪ್ರಧಾನಿ ಬಳಸಲಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *