ಸಂಸತ್ ಲೈಬ್ರರಿಯಲ್ಲಿ `ಸಾಬರಮತಿ ರಿಪೋರ್ಟ್‌’ ಸಿನಿಮಾ ವೀಕ್ಷಿಸಿದ ಮೋದಿ

Public TV
2 Min Read

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಗುಜರಾತ್‌ನಲ್ಲಿ ನಡೆದಿದ್ದ ಗೋಧ್ರಾ ರೈಲು ದುಂರಂತ ಹಿಂದಿನ ಕತೆ ಆಧಾರಿತ `ಸಾಬರಮತಿ ರಿಪೋರ್ಟ್‌’ (Sabarmati Report) ಸಿನಿಮಾವನ್ನು ಸಂಸತ್‌ನ ಲೈಬ್ರರಿಯ ಬಾಲಯೋಗಿ ಸಭಾಂಗಣದಲ್ಲಿ ವೀಕ್ಷಿಸಿದ್ದಾರೆ.

ಸಿನಿಮಾ ವೀಕ್ಷಿಸುತ್ತಿರುವ ಫೋಟೋಗಳನ್ನು ಪ್ರಧಾನಿ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಚಿತ್ರದ ನಿರ್ಮಾಣಕ್ಕಾಗಿ ಉತ್ತಮ ಪ್ರಯತ್ನ ಮಾಡಿದ ನಿರ್ಮಾಪಕರನ್ನು ಹಾಗೂ ಚಿತ್ರ ತಂಡವನ್ನು ಶ್ಲಾಘಿಸಿದ್ದಾರೆ.

ಮೋದಿಯವರ ಜೊತೆ ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಕಿರಣ್ ರಿಜಿಜು, ಜಿತನ್ ರಾಮ್ ಮಾಂಝಿ, ಅಶ್ವಿನಿ ವೈಷ್ಣವ್ ಸೇರಿದಂತೆ ಎನ್‌ಡಿಎ ಸಂಸದರು ಸಹ ಸಿನಿಮಾ ವೀಕ್ಷಿಸಿದ್ದಾರೆ. ಅಲ್ಲದೇ ನಟ ವಿಕ್ರಾಂತ್ ಮಾಸ್ಸೆ (Vikrant Massey) ಮತ್ತು ಜಿತೇಂದ್ರ ಕೂಡ ಈ ವೇಳೆ ಉಪಸ್ಥಿತರಿದ್ದರು.

ವಿಕ್ರಾಂತ್ ಮಾಸ್ಸೆ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಲನಚಿತ್ರವು 2002 ರಲ್ಲಿ ಗುಜರಾತ್‌ನಲ್ಲಿ ನಡೆದಿದ್ದ ಗೋಧ್ರಾ ರೈಲು ದುರಂತದ ಕಥೆಯನ್ನು ಒಳಗೊಂಡಿದೆ. ಈ ಸಿನಿಮಾವನ್ನು ಶೋಭಾ ಕಪೂರ್, ಏಕ್ತಾ ಆರ್ ಕಪೂರ್, ಅಮುಲ್ ವಿ ಮೋಹನ್ ಮತ್ತು ಅನ್ಶುಲ್ ಮೋಹನ್ ನಿರ್ಮಿಸಿದ್ದು, ಧೀರಜ್ ಸರ್ನಾ ನಿರ್ದೇಶಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ರಾಶಿ ಖನ್ನಾ ಮತ್ತು ರಿಧಿ ಡೋಗ್ರಾ ಕೂಡ ಕಾಣಿಸಿಕೊಂಡಿದ್ದಾರೆ.

ಈ ಹಿಂದೆ ಸಿನಿಮಾ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದ ಮೋದಿ, ಈ ಘಟನೆಯ ಸತ್ಯ ಹೊರಬರುತ್ತಿರುವುದು ಒಳ್ಳೆಯದು. ಸಾಮಾನ್ಯ ಜನರು ಇದನ್ನು ಸಿನಿಮಾ ಮೂಲಕ ನೋಡಬಹುದು. ಈ ಚಲನಚಿತ್ರವನ್ನು ಜನರು ನೋಡಲೇಬೇಕು. ದುರಂತದ ಹಿಂದಿನ ಸತ್ಯವನ್ನು ಬಹಿರಂಗಪಡಿಸುವಲ್ಲಿ ಚಿತ್ರತಂಡ ಶ್ರಮಿಸಿದೆ ಎಂದು ಕೊಂಡಾಡಿದ್ದರು.

ಈ ದುರಂತದ ಘಟನೆಯನ್ನು ಪಟ್ಟಭದ್ರ ಹಿತಾಸಕ್ತಿಯ ಗುಂಪುಗಳು ರಾಜಕೀಯಗೊಳಿಸಿವೆ. ಇದನ್ನು ಒಬ್ಬ ನಾಯಕನ ಪ್ರತಿಷ್ಠೆಗೆ ಕಳಂಕ ತರುವ ಅವಕಾಶವಾಗಿ ಬಳಸಿಕೊಂಡಿವೆ ಎಂದು ಬರೆದುಕೊಂಡಿದ್ದರು.

ಒಡಿಶಾ, ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನ, ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ಗುಜರಾತ್ ಸೇರಿದಂತೆ ಬಿಜೆಪಿ ಆಡಳಿತವಿರುವ ಏಳು ರಾಜ್ಯಗಳು ‘ದಿ ಸಬರಮತಿ ರಿಪೋರ್ಟ್‌’ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿವೆ.

ಏನಿದು ಗೋಧ್ರಾ ರೈಲು ದುರಂತ?
ಬಿಹಾರದ ಮುಜಾಫರ್‌ಪುರದಿಂದ ಗುಜರಾತ್‌ನ ಅಹಮದಾಬಾದ್‌ಗೆ ಹೊರಟಿದ್ದ ಸಾಬರಮತಿ ಎಕ್ಸ್‌ಪ್ರೆಸ್ ರೈಲು 2002ರ ಫೆ.27.ರ ಬೆಳಗ್ಗೆ ತನ್ನ ನಿಗದಿತ ಸಮಯಕ್ಕೆ ಗುಜರಾತ್‌ನ ಗೋಧ್ರಾ ರೈಲು ನಿಲ್ದಾಣಕ್ಕೆ ತೆರಳಿತ್ತು. ಇದರಲ್ಲಿ ಕರಸೇವಕರು, ಹಿಂದೂ ಸ್ವಯಂಸೇವಕರು ಅಯೋಧ್ಯೆಯಲ್ಲಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದರು. ರೈಲಿಗೆ ಸುಮಾರು 2,000 ಜನರಿದ್ದ ಗುಂಪು ಕಲ್ಲು ತೂರಿ ನಾಲ್ಕು ಕೋಚ್‌ಗಳಿಗೆ ಬೆಂಕಿ ಹಚ್ಚಿತ್ತು.

ಈ ದುರಂತದಲ್ಲಿ 27 ಮಹಿಳೆಯರು ಮತ್ತು 10 ಮಕ್ಕಳು ಸೇರಿದಂತೆ 59 ಜನರು ಸಾವನ್ನಪ್ಪಿದ್ದರು. ದಾಳಿಯಲ್ಲಿ 48 ಪ್ರಯಾಣಿಕರು ಗಾಯಗೊಂಡಿದ್ದರು. ಇದರಿಂದ ಆದ ಗಲಭೆ ಮೂರು ತಿಂಗಳವರೆಗೆ ಮುಂದುವರೆದಿತ್ತು. ಈ ಗಲಭೆಗೆ ಆಗಿನ ಸಿಎಂ ಆಗಿದ್ದ ಮೋದಿ ಕಾರಣ ಎಂಬ ಆರೋಪ ಕೇಳಿಬಂದಿತ್ತು. ಈ ದುರಂತದ ತನಿಖೆ ನಡೆಸಿದ್ದ ಸುಪ್ರೀಂ ಕೋರ್ಟ್ ನೇಮಿಸಿದ್ದ ತನಿಖಾ ತಂಡ ವರದಿಯಲ್ಲಿ ಈ ಗಲಭೆಗೆ ಮೋದಿ ಕಾರಣ ಎಂಬುಕ್ಕೆ ಯಾವುದೇ ಪುರಾವೆಗಳು ಇಲ್ಲ ಎಂದು ಉಲ್ಲೇಖಿಸಿತ್ತು.

Share This Article