ಒಗ್ಗೂಡಿಸುವ, ಕೈ ಜೋಡಿಸುವ ಹಾಗೂ ಎಲ್ಲ ಕಹಿಗಳನ್ನು ಕೊನೆಯಾಗಿಸುವ ದಿನ -ಮೋದಿ

Public TV
1 Min Read

ನವದೆಹಲಿ: ಇದು ಒಗ್ಗೂಡಿಸುವ, ಕೈ ಜೋಡಿಸುವ ಹಾಗೂ ಎಲ್ಲ ಕಹಿಗಳನ್ನು ಕೊನೆಯಾಗಿಸುವ ದಿನವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಾಖ್ಯಾನಿಸಿದ್ದಾರೆ.

ಅಯೋಧ್ಯೆ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಸಂಜೆ 6 ಗಂಟೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು.

ಹೊಸ ಭಾರತದಲ್ಲಿ ಭಯ, ಕಹಿ ಮತ್ತು ನಕಾರಾತ್ಮಕತೆಗೆ ಸ್ಥಾನವಿಲ್ಲ. ಈ ತೀರ್ಪು ಹೊಸ ಉದಯಕ್ಕೆ ನಾಂದಿ ಹಾಡಿದೆ. ಹೊಸ ಭಾರತಕ್ಕೆ ಹೊಸ ಆರಂಭದ ಕರೆ ಎಂದು ಈ ತೀರ್ಪನ್ನು ಪರಿಗಣಿಸಬೇಕು ಎಂದು ದೇಶವಾಸಿಗಳಿಗೆ ಕರೆ ನೀಡಿದ್ದಾರೆ.

ಯಾವುದೇ ಭಾರತೀಯನನ್ನು ಬಿಟ್ಟು ಹೋಗಬೇಡಿ, ಪ್ರಗತಿಯ ಮುನ್ನ ಎಲ್ಲರನ್ನೂ ಜೊತೆಗೆ ಕರೆದೊಯ್ಯಿರಿ. ಹೊಸ ಭಾರತದಲ್ಲಿ ಭಯ, ಕಹಿ ಹಾಗೂ ನಕಾರಾತ್ಮಕತೆಗೆ ಸ್ಥಾನವಿಲ್ಲ ಎಂದು ಹೇಳಿದ್ದಾರೆ.

ನವೆಂಬರ್ 9 ಬರ್ಲಿನ್ ಗೋಡೆ ಬಿದ್ದ ದಿನ, ಅಲ್ಲದೆ ಇಂದು(ನವೆಂಬರ್ 9) ಕರ್ತಾರ್‍ಪುರ ಕಾರಿಡಾರ್ ಪ್ರಾರಂಭವಾಗಿದೆ. ಈ ದಿನವೇ ಅಯೋಧ್ಯೆ ತೀರ್ಪು ಪ್ರಕಟವಾಗಿದೆ. ಒಗ್ಗೂಡಿಸುವುದು, ಕೈ ಜೋಡಿಸುವುದು ಹಾಗೂ ಎಲ್ಲರೊಂದಿಗೆ ಮುಂದುವರಿಯುವುದು ನವೆಂಬರ್ 9ರ ಸಂದೇಶ. ಎಲ್ಲ ಕಹಿಗಳನ್ನು ಕೊನೆಗೊಳಿಸುವ ದಿನವಿದು ವ್ಯಾಖ್ಯಾನಿಸಿದ್ದಾರೆ.

ಭಾರತದ ವೈವಿಧ್ಯತೆಯಲ್ಲಿ ಏಕತೆಯ ಪರಿಕಲ್ಪನೆಯನ್ನು ಯಾರಾದರೂ ಅರ್ಥ ಮಾಡಿಕೊಂಡಿದ್ದರೆ, ಇಂದು ನೋಡಬೇಕಾದದ್ದು ತೀರ್ಪಿನ ಬಗ್ಗೆ ಭಾರತೀಯರು ನೀಡಿದ ಪ್ರತಿಕ್ರಿಯೆ. ಹೀಗಾಗಿ ಸರ್ವಾನುಮತದ, ಹೃದಯಸ್ಪರ್ಶಿ ತೀರ್ಪು ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತೀರ್ಪಿನ ನಂತರ ಪ್ರತಿ ವಿಭಾಗ, ಸಮುದಾಯ ಹಾಗೂ ಧರ್ಮದ ಜನರು ತೀರ್ಪನ್ನು ಮುಕ್ತ ಹೃದಯದಿಂದ ಸ್ವಾಗತಿಸಿದ್ದಾರೆ. ಇದನ್ನು ನೋಡಿದರೆ ಭಾರತದ ಪ್ರಾಚೀನ ಸಂಸ್ಕೃತಿ, ಸಂಪ್ರದಾಯ ಮತ್ತು ಸಾಮರಸ್ಯವನ್ನು ಪ್ರತಿಬಿಂಬಿಸುತ್ತದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *