ಕರ್ತಾರ್‍ಪುರ್ ಕಾರಿಡಾರ್ ಉದ್ಘಾಟನೆ – ಕನ್ನಡವನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ

Public TV
2 Min Read

ನವದೆಹಲಿ: ಕರ್ತಾರ್‍ಪುರ್ ಕಾರಿಡಾರ್‍ಗೆ ತೆರಳುವಾಗ ನಿಮಗೆ ಯಾವ ರೀತಿ ಭಾವನೆಗಳು ಮೂಡುತ್ತವೆಯೋ ಅದೇ ರೀತಿ ನನಗೂ ಆಗುತ್ತದೆ. ಈ ಪುರಸ್ಕಾರ, ಈ ಸನ್ಮಾನ ನಮ್ಮ ಸಂತ ಪರಂಪರೆಯ ಪ್ರಸಾದವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾವನಾತ್ಮಕವಾಗಿ ನುಡಿದಿದ್ದಾರೆ.

ಕರ್ತಾರ್‍ಪುರ್ ಕಾರಿಡಾರ್ ಉದ್ಘಾಟಿಸಿ ಮಾತನಾಡಿದ ಅವರು, ಈ ಸನ್ಮಾನವನ್ನು ಗುರುನಾನಕ್ ಅವರ ಚರಣಗಳಿಗೆ ಸಮರ್ಪಿಸುತ್ತೇನೆ. ಸೇವಾ ಭಾವವನ್ನು ಇನ್ನೂ ಹೆಚ್ಚು ದಿನಗಳ ಕಾಲ ನೀಡು ಎಂದು ಬೇಡುತ್ತೇನೆ. ನೀವು ಸಹ ಸೇವೆಯನ್ನು ಮಾಡಲು ಅನುಮತಿ ನೀಡಿ. ಕರ್ತಾರ್‍ಪುರ್ ಚೆಕ್‍ಪೋಸ್ಟ್ ಕಾರ್ತಿಕ ಪೂರ್ಣಿಮೆಯ ಪರ್ವದಲ್ಲಿ ತೆರೆಯುತ್ತಿದೆ. ಇದರಿಂದ ದೀಪಾವಳಿ ಇನ್ನೂ ಜಗಮಗಿಸುವಂತಾಗಿದೆ ಎಂದರು.

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಭಾರತದ ಯಾತ್ರಾರ್ಥಿಗಳ ಭಾವನೆಯನ್ನು ಗೌರವಿಸಿದ್ದಕ್ಕಾಗಿ ಧನ್ಯವಾದ ಅರ್ಪಿಸುತ್ತೇನೆ. ಅಲ್ಲದೆ ಪಾಕಿಸ್ತಾನದ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

ಸಣ್ಣ, ದೊಡ್ಡ ಎಂಬ ಬೇಧವಿಲ್ಲದೆ, ಎಲ್ಲರೂ ಒಂದಾಗಿ ಪ್ರಗತಿ ಸಾಧಿಸಲು ಸಾಧ್ಯ ಎಂದು ಗುರುನಾನಕ್ ಅವರು ಹೇಳಿದ್ದಾರೆ. ಗುರುನಾನಕ್ ಅವರ ಜನನ ಕೇವಲ ಮಾನವರ ಉದ್ದಾರಕ್ಕಾಗಿ ಮಾತ್ರವಲ್ಲ, ಕರ್ತಾರ್‍ಪುದಲ್ಲಿ ಜೀವನ ಕಳೆಯುವ ಮೂಲಕ ಪ್ರಕೃತಿಯೊಂದಿಗೆ ಜೀವನ ಸಾಗಿಸಿದ್ದಾರೆ. ಪ್ರಕೃತಿ, ಪರ್ಯಾವರಣ್, ಪ್ರದೂಶಣದ ಮೂಲಕ ಗುರುನಾನಕ್ ಅವರು ಬದುಕಿದ್ದಾರೆ ಎಂದರು.

ಪ್ರಕೃತಿ ಪರ್ಯಾವರಣವನ್ನು ನಾವು ಇಂದು ಮರೆತಿದ್ದೇವೆ. ಈ ಸಂದರ್ಭದಲ್ಲಿ ಗುರುನಾನಕ್ ಅವರ ಮಾರ್ಗದರ್ಶನಗಳನ್ನು ನೆನೆಯಬೇಕಿದೆ. ಪಂಜಾಬ್ ಪಂಚ ನದಿಗಳ ತಾಣವಾಗಿದೆ. ನೀರು, ಪ್ರಕೃತಿ ವಿಚಾರದಲ್ಲಿ ಗುರುನಾನಕ್ ಅವರನ್ನು ಮಾದರಿಯಾಗಿಸಿಕೊಳ್ಳಬೇಕಿದೆ. ದೇಶ, ವಿದೇಶಗಳಲ್ಲಿ ಕೀರ್ತನೆ, ಪ್ರಾರ್ಥನೆಗಳನ್ನು ನಡೆಸುವ ಮೂಲಕ ಸಿಖ್ ಧರ್ಮದ ಕುರಿತು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಯುನೆಸ್ಕೊಗೆ ಧನ್ಯವಾದ ಸಲ್ಲಿಸುತ್ತೇನೆ. ಗುರುನಾನಕ್ ಅವರ ಪುಸ್ತಕಗಳನ್ನು ವಿವಿಧ ಭಾಷೆಗಳಲ್ಲಿ ಭಾಷಾಂತರವಾಗುತ್ತಿದೆ. ಕನ್ನಡದಲ್ಲಿಯೂ ಅನುವಾದವಾಗುತ್ತಿವೆ. ಇದರಿಂದ ಅವರ ವಿಚಾರಗಳನ್ನು ತಿಳಿಯಲು ಇನ್ನೂ ಪ್ರೋತ್ಸಾಹ ಸಿಕ್ಕಂತಾಗಿದೆ ಎಂದರು.

ಹೆರಿಟೇಜ್ ಕಾಂಪ್ಲೆಕ್ಸ್, ಮ್ಯೂಸಿಯಂ ನಿರ್ಮಾಣ ಹಾಗೂ ವಿಶೇಷ ರೈಲನ್ನು ಬಿಡುವ ಕುರಿತು ಸಹ ನಿರ್ಧರಿಸಲಾಗುತ್ತಿದೆ. ಇನ್ನೂ ಅನೇಕ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಕರ್ತಾರ್‍ಪುರ್ ಕಾರಿಡಾರ್‍ಗೆ ಮೊದಲ ಹಂತದ ಯಾತ್ರಾರ್ಥಿಗಳು ಪಾಕಿಸ್ತಾನ ತಲುಪುತ್ತಿದ್ದು, ಮೊದಲ ಹಂತದಲ್ಲಿ 5,000 ಜನರು ಪವಿತ್ರ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನರೋವಾಲ್ ಜಿಲ್ಲೆಯಲ್ಲಿನ ಅಂತರಾಷ್ಟ್ರೀಯ ಗಡಿಯಿಂದ ಕೇವಲ ನಾಲ್ಕು ಕಿ.ಮೀ.ದೂರದಲ್ಲಿ ಕರ್ತಾರ್‍ಪುರದ ದರ್ಬಾರ್ ಸಾಹಿಬ್ ಇದೆ. ಈ ಕಾರಿಡಾರ್ ಪಂಜಾಬ್‍ನ ಡೇರಾ ಬಾಬಾ ನಾನಕ್ ದೇಗುಲವನ್ನು ಸಂಪರ್ಕಿಸುತ್ತದೆ. ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ದೇವ್ ಅವರ ಜೀವನದ ಕೊನೆಯ 18 ವರ್ಷಗಳನ್ನು ಈ ಸ್ಥಳದಲ್ಲಿ ಕಳೆದಿದ್ದಾರೆ ಎಂಬ ನಂಬಿಕೆ ಇದೆ.

Share This Article
Leave a Comment

Leave a Reply

Your email address will not be published. Required fields are marked *